ದಾವಣಗೆರೆ; ಕೊರೊನಾ ತಡೆಗೆ ಎಸ್ಪಿ ನೀಡಿದರು ಸ್ವಂತ ಅನುಭವದ ಸಲಹೆ...
ದಾವಣಗೆರೆ, ಆಗಸ್ಟ್ 13; ಕೊರೊನಾ ಸೋಂಕಿನಿಂದಾಗಿ ಇದೇ ಆಗಸ್ಟ್ 7ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಇಂದು ಚಿಕಿತ್ಸೆ ಬಳಿಕ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
Recommended Video
ಕೊರೊನಾ ಬಂತೆಂದು ಯಾರೂ ಗಾಬರಿಯಾಗಬಾರದು, ಭಯಪಡಬಾರದು. ಆದರೆ ವೈದ್ಯರ ಸಲಹೆಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ವೈಯಕ್ತಿಯ ಶುಚಿತ್ವ ಕಾಪಾಡಿಕೊಳ್ಳುವುದರಿಂದ ಸೋಂಕು ಶೇ 90ರಷ್ಟು ಖಂಡಿತವಾಗಿ ನಿವಾರಣೆಯಾಗುತ್ತದೆ ಎಂದು ಸಲಹೆ ನೀಡಿದ್ದಾರೆ. ಕೊರೊನಾ ವೈರಸ್ ನಿಂದ ಗುಣಮುಖರಾಗಿ ಬಂದ ಅವರ ಅನುಭವದ ಮಾತುಗಳು ಇಲ್ಲಿವೆ...

"ಕೊರೊನಾ ಸೋಂಕನ್ನು ನಾವೇ ನಿವಾರಿಸಿಕೊಳ್ಳಬಹುದು"
ಕೊರೊನಾ ಸೋಂಕನ್ನು ನಾವೇ ನಿವಾರಣೆ ಮಾಡಿಕೊಳ್ಳಬಹುದು. ಮುಖ್ಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಪಾಲನೆ ಮಾಡಬೇಕು. ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ನಾನು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದೇನೆ. ಜಿಲ್ಲಾಸ್ಪತ್ರೆಯ ವೈದ್ಯರು, ದಾದಿಯರು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಹಗಲು ರಾತ್ರಿ ರೋಗಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ರೀತಿಯ ಚಿಕಿತ್ಸೆ ನಿಡುತ್ತಿದ್ದಾರೆ. ಸೋಂಕಿತರಿಗೆ ಆಹಾರ, ಔಷಧೋಪಚಾರ ಉತ್ತಮವಾಗಿದೆ. ನಾನು ಗುಣಮುಖನಾಗಲು ಇಲ್ಲಿಯ ಚಿಕಿತ್ಸಾ ವಿಧಾನವೇ ಕಾರಣ ಎಂದಿದ್ದಾರೆ.

ಕುಂದುಕೊರತೆ ಬಗ್ಗೆ ಪರಿಶೀಲನೆ
ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕಾರಣದಿಂದ ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ರೋಗಿಗಳು ಬಂದರೆ ಕ್ರಮ ಕೈಗೊಳ್ಳಲಿದ್ದೇವೆ. ಜಿಲ್ಲಾಸ್ಪತ್ರೆಯಲ್ಲಿ ಯಾವ ಕುಂದುಕೊರತೆಯಿದೆ, ಯಾವುದನ್ನು ಸರಿಪಡಿಸಬೇಕು ಎಂಬ ಬಗ್ಗೆ ಅನುಭವವಾಗಿದೆ. ಇಲ್ಲಿನ ತಂಡ ಅತ್ಯುತ್ತಮವಾಗಿದೆ ಎಂದರು.

ಪೊಲೀಸ್ ಠಾಣೆಯ ವಾಹನ ಚಾಲಕ ಸಾವು
ಮಲೇಬೆನ್ನೂರು ಪೊಲೀಸ್ ಠಾಣೆಯ ವಾಹನ ಚಾಲಕರಾಗಿದ್ದ ಶಿವರಾಜ್ (41) ಅವರಿಗೆ ಸೋಂಕು ಕಾಣಿಸಿಕೊಂಡಿದ್ದು, ಅವರು ಮಧುಮೇಹ ಹಾಗೂ ಕಿಡ್ನಿ ವೈಫಲ್ಯದಿಂದಲೂ ಬಳಲುತ್ತಿದ್ದರು. ಇಂದು ಬೆಳಗಿನ ಜಾವ 3 ಗಂಟೆಗೆ ಅವರು ನಿಧನರಾಗಿದ್ದಾರೆ. ಜಿಲ್ಲೆಯಲ್ಲಿ ಇದೇ ಮೊದಲು ಪೊಲೀಸರೊಬ್ಬರು ಕೋವಿಡ್ ನಿಂದ ಮೃತಪಟ್ಟಿರುವುದು ಎಂದು ಮಾಹಿತಿ ನೀಡಿದರು. ಕೆಲದಿನಗಳು ಹೋಂ ಕ್ವಾರಂಟೈನ್ ನಲ್ಲಿದ್ದು ಆನಂತರ ಕರ್ತವ್ಯಕ್ಕೆ ಹಾಜರಾಗಲಿದ್ದೇನೆ ಎಂದು ಹೇಳಿದರು.

ವಸ್ತುಸ್ಥಿತಿ ತಿಳಿಯಲು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಎಸ್ಪಿ
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಪ್ರಮುಖ ಕೊರೊನಾ ವಾರಿಯರ್ ಆಗಿದ್ದ ಎಸ್ಪಿಯವರು ಈಗ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡಲು ಮುಂದೆ ಬಂದಿದ್ದಾರೆ. ಅವರ ಆತ್ಮವಿಶ್ವಾಸದ ನಡೆ ದಾವಣಗೆರೆ ಜಿಲ್ಲೆಗೆ ಉತ್ತಮ ಸಂದೇಶ ನೀಡಿದೆ. ಇಲ್ಲಿನ ವಸ್ತುಸ್ಥಿತಿ ತಿಳಿದುಕೊಳ್ಳಲು ಮತ್ತು ನ್ಯೂನತೆಗಳಿದ್ದರೆ ಸರಿಪಡಿಸಿಕೊಳ್ಳುವ ಉದ್ದೇಶದಿಂದ ಜಿಲ್ಲಾಸ್ಪತ್ರೆಯಲ್ಲಿಯೇ ಅವರು ಚಿಕಿತ್ಸೆ ಪಡೆದಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಜನರು ಯಾವುದೇ ಆತಂಕ ಪಡಬಾರದು. ಮುಂದಿನ ದಿನಗಳಲ್ಲಿ ಸರ್ವೆಲೆನ್ಸ್ ಜೊತೆಗೆ ಹೆಚ್ಚಿನ ರೀತಿಯಲ್ಲಿ ಪರೀಕ್ಷೆಗಳನ್ನು ಮಾಡಿ ಸಾಧ್ಯವಾದಷ್ಟು ಸೋಂಕಿತರನ್ನು ಪತ್ತೆಹಚ್ಚಿ ಮರಣ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ. ಆಯುಷ್ ಉತ್ಪನ್ನಗಳನ್ನು ಹೆಚ್ಚಾಗಿ ಬಳಸಬೇಕು ಎಂದರು.












Click it and Unblock the Notifications