ಮುಗಿನಗುಂದಿಯಲ್ಲಿ ಕುರಿಗಳ್ಳನ ರುಂಡವನ್ನು ಕೊಡಲಿಯಿಂದ ಕಡಿದ ಕುರಿಗಾಹಿಗಳು
ದಾವಣಗೆರೆ, ಸೆಪ್ಟೆಂಬರ್ 22: ಕುರಿ ಕದಿಯುತ್ತಿದ್ದ ಕಳ್ಳನ ರುಂಡವನ್ನು ಕೊಡಲಿಯಲ್ಲಿ ಕತ್ತರಿಸಿದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರು ಬಳಿ ಇರುವ ಮುಗಿನಗುಂದಿ ಗ್ರಾಮದಲ್ಲಿ ನಡೆದಿದೆ. ಐವತ್ತಾರು ವರ್ಷದ ಚಮನ್ ಸಾಬ್ ಮೃತ ವ್ಯಕ್ತಿ. ಆತ ಈ ಭಾಗದಲ್ಲಿನ ಕುಖ್ಯಾತ ಕುರಿಗಳ್ಳ ಎನ್ನಲಾಗಿದೆ.
ವೃದ್ಧನ ತಲೆ ಕಡಿದು ಪೊಲೀಸ್ ಠಾಣೆಗೆ ತಂದ ಯುವಕರು
ಮುಗಿನಗೊಂದಿ ಗ್ರಾಮದ ಜಮೀನಿನಲ್ಲಿ ಕುರಿಗಾಹಿಗಳು ಕುರಿಗಳನ್ನು ಬಿಟ್ಟಿದ್ದರು. ಭಾನುವಾರ ಬೆಳಗ್ಗೆ ಕುರಿಗಳನ್ನು ಕದಿಯುವುದಕ್ಕೆ ಚಮನ್ ಸಾಬ್ ಯತ್ನಿಸಿದ್ದಾನೆ. ಇದನ್ನು ಕಂಡು ಕುರಿಗಾಹಿಗಳು ಕೂಗಾಡಿದ್ದಾರೆ. ದಿಢೀರನೇ ಹೀಗೆ ತನ್ನನ್ನು ನೋಡಿದರಲ್ಲಾ ಎಂದು ಚಮನ್ ಸಾಬ್ ಅಲ್ಲಿಂದ ಓಡಿದ್ದಾನೆ. ಆಗ ಕುರಿಗಾಹಿಗಳು ಕೊಡಲಿ ಬೀಸಿದ್ದಾರೆ.
ಹಾಗೆ ಬೀಸಿದ ಕೊಡಲಿ ಚಮನ್ ಸಾಬ್ ನ ರುಂಡವನ್ನು ಕಡಿದಿದೆ. ಮುಂಡ ಹಾಗೂ ರುಂಡ ಬೇರೆ ಬೇರೆಯಾಗಿದೆ. ಸ್ಥಳಕ್ಕೆ ಮಲೇಬೆನ್ನೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಚಮನ್ ಸಾಬ್ ವಿರುದ್ಧ ಹತ್ತು ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನದ ಪ್ರಕರಣ ದಾಖಲಾಗಿತ್ತು. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.