ದೀರ್ಘವಧಿ ಬಳಿಕ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ಕಲರವ
ದಾವಣಗೆರೆ, ಫೆಬ್ರವರಿ 26: ಕೊರೊನಾ ಸೋಂಕು ವ್ಯಾಪಿಸುವ ಆತಂಕದಿಂದ ಮತ್ತು ವಿದ್ಯಾರ್ಥಿಗಳಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಸತತ ಒಂದು ವರ್ಷ ಕಾಲ ಮುಚ್ಚಿದ್ದ ಶಾಲೆಗಳು ಆರಂಭವಾಗಿವೆ.
ಈಗ ಶಾಲೆ ಆವರಣ ಮತ್ತು ತರಗತಿಗಳು ವಿದ್ಯಾರ್ಥಿಗಳಿಂದ ತುಂಬಿಕೊಂಡಿವೆ. ಕೋವಿಡ್ ಮಾರ್ಗಸೂಚಿ ಅನ್ವಯ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಶಾಲೆಗೆ ಹಾಜರಾಗುತ್ತಿದ್ದಾರೆ. ವಸತಿ ಶಾಲೆ ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆ ವರದಿ ಪಡೆದು ನಿರಾತಂಕವಾಗಿ ಶಾಲೆಗೆ ಹಾಜರಾಗುತ್ತಿದ್ದಾರೆ.
6 ನೇ ತರಗತಿಯಿಂದ ಶಾಲೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಈ ಮೊದಲೇ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೊರೊನಾ ವ್ಯಾಪಿಸುವುದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ನಿಯಮಗಳನ್ನು ಪೋಷಕರು ಮತ್ತು ಮಕ್ಕಳಿಗೆ ತಿಳಿಸಿದ್ದರಿಂದ ವಿದ್ಯಾರ್ಥಿಗಳು ಸುರಕಿತವಾಗಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ.

ಶಾಲೆಯಲ್ಲಿ ನೀಡಿದ ಸ್ಯಾನಿಟೈಸರ್ನಿಂದ ಆಗಾಗ ಕೈತೊಳೆದುಕೊಳ್ಳುತ್ತಿದ್ದರು. ಮಧ್ಯಾಹ್ನದ ಬಿಸಿಊಟ ಶಾಲೆಯಲ್ಲಿ ಇನ್ನೂ ಆರಂಭವಾಗಿರಲಿಲ್ಲ. ಆದರೆ, ಶಿಕ್ಷಕರು ನೀಡಿದ್ದ ನಿರ್ದೇಶನದ ಮೇರೆಗೆ ಹೆಚ್ಚಿನ ಶಾಲೆ ವಿದ್ಯಾರ್ಥಿಗಳು ಮನೆಯಂದ ತಂದಿದ್ದ ಆಹಾರವನ್ನು ಸೇವಿಸಿ ಮಧ್ಯಾಹ್ನದ ನಂತರದ ತರಗತಿಗಳಿಗೆ ಹಾಜರಾದರು.
ಪ್ರೌಢಶಾಲೆಗಳಲ್ಲಿ 10ನೇ ತರಗತಿ ಆರಂಭವಾಗಿದ್ದು, 8 ಮತ್ತು 9ನೇ ತರಗತಿಗಳಿಗೆ ಪಾಳಿ ಪದ್ಧತಿಯಲ್ಲಿ ತರಗತಿಗಳು ನಡೆಯುತ್ತಿದ್ದವು. ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಷ್ಟೇನು ಕಂಡುಬರುತ್ತಿರಲಿಲ್ಲ.
ಇಷ್ಟುದಿನ ಶಾಲೆ ಇಲ್ಲದ ಕಾರಣ ಬೇಸರ ಆಗಿತ್ತು. ಮನೆಯಲ್ಲೇ ಓದು ಬರಹ ಕಲಸ ಮಾಡುತ್ತಿದ್ದೆವಾದರೂ ಶಾಲೆಯಲ್ಲಿ ಮಾಡುವಷ್ಟು ಖುಷಿ ಇರುತ್ತಿರಲಿಲ್ಲ. ಇದುವರೆಗೆ ಶಿಕ್ಷಕರು ಮತ್ತು ಶಾಲೆಯಿಂದ ವಂಚನೆಗೊಳಗಾಗಿದ್ದೆವು ಎಂದು ಕತ್ತಲಗೆರೆ ಶಾಲೆ ವಿದ್ಯಾರ್ಥಿಗಳು ಹೇಳಿದರು.
"ವಿದ್ಯಾಗಮ ನಡೆಯುತ್ತಿತ್ತಾದರೂ ತರಗತಿಗಳಲ್ಲಿ ವಿದ್ಯಾರ್ಥಿಗಳಿಲ್ಲದೆ ಇರುವುದು ಬೇಸರವಾಗಿತ್ತು. ಶಿಕ್ಷಕರು ಇಲಾಖೆ ನಿಯಮಾನುಸಾರ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಪೂರ್ಣಾವ ಶಾಲೆ ಆರಂಭವಾದದ್ದು ಸಂತಸತಂದಿದೆ" ಎಂದು ಕಾರಿಗನೂರುಶಾಲೆ ಮುಖ್ಯ ಶಿಕ್ಷಕ ಕೆ. ಎಸ್. ವಿಜಯಕುಮಾರ್ ಹೇಳಿದರು.
"1 ರಿಂದ 5ನೇ ವಿದ್ಯಾರ್ಥಿಗಳಿಗೂ ತರಗತಿಗಳು ಶೀಘ್ರದಲ್ಲೇ ಆರಂಭವಾಗುವಂತಾಗಲಿ. ಮಧ್ಯಾಹ್ನದ ಬಿಸಿಊಟ ಎಲ್ಲಾ ಮಕ್ಕಳಿಗೆ ಸಿಗುವಂತಾಗಬೇಕು" ಎಂದು ಶಿಕ್ಷಣ ಪ್ರೇಮಿ
ಹೆ. ಜಿ. ಹರೀಶ್ ತಿಳಿಸಿದರು.












Click it and Unblock the Notifications