ಕರ್ಮಕಾಂಡ ಇದು ಒಂದು ಹೈಟೆಕ್ ರಸ್ತೆ.. ಜಗಳೂರು ತಾಲೂಕಿನ ಈ ಶ್ರೀಮಂತ ಗ್ರಾಮದಲ್ಲಿ ಜನಪ್ರತಿನಿಧಿಗಳ ಕಾರ್ಯವೈಖರಿ ಹೀಗಿದೆ
ದಾವಣಗೆರೆ, ಜುಲೈ, 20: ಸುಮಾರು 2000ಕ್ಕೂ ಹೆಚ್ಚು ಜನರನ್ನು ಹೊಂದಿರುವ ಜಗಳೂರು ತಾಲೂಕಿನ ಈ ಶ್ರೀಮಂತ ಗ್ರಾಮದಲ್ಲಿ ಬಹುತೇಕ ಕಡೆ ರಸ್ತೆ, ಬೀದಿ ದೀಪಗಳೇ ಇಲ್ಲದಂತಾಗಿದೆ. ಇದು ಕೇವಲ ಒಂದೆರಡು ವರ್ಷದ ಸಮಸ್ಯೆಯಲ್ಲ. ಸುಮಾರು 5 ರಿಂದ 6 ವರ್ಷಗಳಿಂದಲೂ ಇಲ್ಲಿನ ಜನ, ಶಾಲಾ ವಿದ್ಯಾರ್ಥಿಗಳು ಕಿತ್ತು ಹೋಗಿರುವ ರಸ್ತೆಯಲ್ಲಿ ತಲೆ ತಗ್ಗಿಸಿಕೊಂಡೇ ಒಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ವಾಹನ ಸವಾರರಂತೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ವಾಹನಗಳನ್ನು ಚಲಾಯಿಸಿಕೊಂಡು ಹೋಗುವಂತಾಗಿದೆ.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದಲ್ಲಿ ಮಳೆಗಾಲ ಬಂತೆಂದರೆ ಸಾಕು ಸಮಸ್ಯೆಗಳು ಒಂದಲ್ಲ ಎರಡಲ್ಲ. ಮಳೆಗಾಲದಲ್ಲಿ ಈ ಗ್ರಾಮದಲ್ಲಿನ ಬಹುತೇಕ ರಸ್ತೆಗಳೆಲ್ಲ ಕೆಸರು ಗದ್ದೆಗಳಾಗಿ ಮಾರ್ಪಡುತ್ತವೆ. ಅದರಲ್ಲೂ ಮುಖ್ಯವಾಗಿ ಪ್ರತಿನಿತ್ಯ ವಿದ್ಯಾರ್ಥಿಗಳು ಶಾಲೆಗೆ ತೆರಳುವ ಮಾರ್ಗವಂತೂ ಇದೀಗ ಸಂಪೂರ್ಣ ಕೆಸರು ಗದ್ದೆಯಾಗಿದೆ. ಈ ಕೊಚ್ಚೆ ರಸ್ತೆಯಲ್ಲಿ ಸ್ವಲ್ಪ ಯಾಮಾರಿದರೂ ಕೈ, ಕಾಲು ಮುರಿದುಕೊಳ್ಳುವುದಂತೂ ಗ್ಯಾರಂಟಿ.

ಈ ರಸ್ತೆಯು ಗ್ರಾಮದ ವೆಟನರಿ ಆಸ್ಪತ್ರೆಯಿಂದ ನೇರವಾಗಿ ಸರ್ಕಾರಿ ಪ್ರೌಢಶಾಲೆಗೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ಹದಗೆಟ್ಟು ಸುಮಾರು 5ರಿಂದ 6 ವರ್ಷಗಳು ಕಳೆದಿವೆ. ಆದರೆ ಅಧಿಕಾರಿಗಳು ಮಾತ್ರ ಚುನವಾಣೆ ಸಮಯದಲ್ಲಿ ಬಂದು ಕಾಮಗಾರಿ ಮಾಡಿಸುತ್ತೇವೆ ಅಂತಾ ಹೇಳುವ ಮೂಲಕ ಬರೀ ಭರವಸೆಗಳನ್ನೇ ನೀಡಿ ಹೋಗುತ್ತಿದ್ದಾರೆ. ನಂತರ ಚುನಾವಣೆ ಮುಗಿಯುತ್ತಿದ್ದಂತೆ ಯಾವುದೇ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಅಧಿಕಾರಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ ಎಂದು ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿನ ಬೆಳಗಾದರೆ ಸಾಕು ಈ ಮಾರ್ಗದಲ್ಲಿ ಸಾವಿರಾರು ಜನರು ಸಂಚಾರ ಮಾಡುತ್ತಲೇ ಇರುತ್ತಾರೆ. ಎಷ್ಟೋ ಜನ ಮಳೆಗಾಲದಲ್ಲಿ ಇಲ್ಲಿ ಬಿದ್ದು ಕಾಲು ಮುರಿದುಕೊಂಡ ಘಟನೆಗಳು ಕೂಡ ನಡೆದಿವೆ. ಹಾಗೆಯೇ ಶಾಲಾ ವಿದ್ಯಾರ್ಥಿಗಳು ಕೂಡ ಕೆಸರು ಗದ್ದೆಯಂತಿರುವ ಈ ರಸ್ತೆಯಲ್ಲಿ ಜಾರಿ ಬಿದ್ದು ಕೈ, ಕಾಲು ನೋವು ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಅನಾಹುತಗಳು ಸಂಭವಿಸಿದರೂ ಕೂಡ ಯಾವ ಅಧಿಕಾರಿಗಳೂ ಇತ್ತ ತಲೆಹಾಕುತ್ತಿಲ್ಲ. ಮತ್ತೊಂದೆಡೆ 2000 ಕ್ಕೂ ಜನರಿರುವ ಇಷ್ಟು ದೊಡ್ಡ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳು ಇದ್ದಾರೋ ಇಲ್ಲವೋ ಎನ್ನುವ ಪ್ರಶ್ನೆಗಳು ಕಾಡತೊಡಗಿವೆ.
5 ವರ್ಷಗಳಿಂದಲೂ ಈ ರಸ್ತೆಯನ್ನು ಸರಿ ಮಾಡಿಸುವಂತೆ ನಾವು ತಾಲೂಕು ಪಂಚಾಯತಿಗೂ ಹೋಗಿ ಮನವಿ ನೀಡುತ್ತಲೇ ಇದ್ದೇವೆ. ಆದರೆ ಲಜ್ಜೆಗೆಟ್ಟ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸದೇ ಇರುವುದು ಬೇಸರದ ಸಂಗತಿಯಾಗಿದೆ. ಇನ್ನು ಇಲ್ಲಿ ಹಾಕಿರುವ ಬೀದಿ ದೀಪಗಳಂತೂ ಒಂದು ಹತ್ತಿದರೂ ಮತ್ತೊಂದು ಹತ್ತುವುದೇ ಇಲ್ಲ. ಇದರಿಂದ ಈ ಮಾರ್ಗದಲ್ಲಿ ಓಡಾಡುವುದೇ ನಮಗೆ ಕಷ್ಟವಾಗಿದೆ ಎಂದು ಸ್ಥಳೀಯರು ಕಣ್ಣೀರಿಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗೆಯೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಪ್ರತಿಕ್ರಿಯಿಸಿ, ಈ ಹದಗೆಟ್ಟ ರಸ್ತೆಯಲ್ಲಿ ಒಡಾಡುವುದೇ ಕಷ್ಟ. ಸ್ವಲ್ಪ ಯಾಮಾರಿದರೂ ಕೈ ಕಾಲುಗಳು ಮುರಿಯುತ್ತವೆ. ಆದರೂ ನಾವು ಪ್ರತಿನಿತ್ಯ ಯಾವುದೇ ದಾರಿಯಿಲ್ಲದೆ ಈ ಕೊಳಚೆ ರಸ್ತೆಯ ಮೂಲಕವೇ ಶಾಲೆಗೆ ಹೋಗುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಬೇಗ ಕ್ರಮ ಕೈಗೊಂಡು ಆಗುವ ಸಮಸ್ಯೆಗಳನ್ನು ತಪ್ಪಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತೊಂಡುಕೊಂಡು ರಸ್ತೆಯನ್ನು ದುರಸ್ತಿ ಮಾಡಿಸುವ ಮೂಲಕ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂಬುದು ಸ್ಥಳೀಯರ ಆಶಯವಾಗಿದೆ.












Click it and Unblock the Notifications