ದಾವಣಗೆರೆ; ಮಳೆಗಾಲಕ್ಕೂ ಮುನ್ನ ಕೊಡಗನೂರು ಕೆರೆ ಏರಿ ವೀಕ್ಷಿಸಿದ ಡಿಸಿ
ದಾವಣಗೆರೆ, ಮೇ 25; ನೈಋತ್ಯ ಮುಂಗಾರು ಮಳೆ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದೆ. ಹಿಂಗಾರು ಮಳೆ ಈಗಾಗಲೇ ಅಬ್ಬರಿಸುತ್ತಿದೆ. ಈ ವರ್ಷದ ಮುಂಗಾರು ಆರಂಭಕ್ಕೂ ಮುನ್ನವೇ ದಾವಣಗೆರೆ ತಾಲ್ಲೂಕಿನ ಕೊಡಗನೂರು ಕೆರೆ ಏರಿಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದರು.
ದಾವಣಗೆರೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಕೊಡಗನೂರು ಕೆರೆ ಏರಿಯನ್ನು ವೀಕ್ಷಣೆ ಮಾಡಿದರು. ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರವೀಣ್, ಸಹಾಯಕ ಇಂಜಿನಿಯರ್ ರುದ್ರಮುನಿ, ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೊಡಗನೂರು ಕೆರೆ ಏರಿಯು ಕಳೆದ ವರ್ಷದ ಭಾರೀ ಮಳೆಗೆ ಕುಸಿದು ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಏರಿಗೆ ಲಕ್ಷ ಮರಳಿನ ಚೀಲಗಳನ್ನು ಹಾಕುವ ಮೂಲಕ ಏರಿ ಭದ್ರತೆ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಈ ವರ್ಷ ಮುಂಗಾರು ಆರಂಭವಾಗುತ್ತಿದ್ದು ಏರಿಯ ಭದ್ರತೆಯನ್ನು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಇಂಜಿನಿಯರ್ಗಳ ತಂಡದೊಂದಿಗೆ ವೀಕ್ಷಣೆ ಮಾಡಿದರು. ಕೆರೆಯ ಎರಡು ಕಡೆಯ ಕೋಡಿಯನ್ನು ಪರಿಶೀಲನೆ ನಡೆಸಿ ಈ ಹಿಂದೆ ಬಸಿ ಹೋಗುತ್ತಿದ್ದ ಜಾಗದಲ್ಲಿ ದುರಸ್ಥಿ ನಂತರ ಬಸಿ ನಿಂತಿರುವುದರನ್ನು ವೀಕ್ಷಣೆ ಮಾಡಿದರು.

ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ; ಕೊಡಗನೂರು ಕೆರೆ ಏರಿಯನ್ನು ಮರಳು ಮತ್ತು ಮಣ್ಣುನ್ನು ಹಾಕುವ ಮೂಲಕ ಭದ್ರ ಮಾಡಲಾಗಿದೆ. ಏರಿಯನ್ನು ಹೊಸದಾಗಿ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಮಾರ್ಗದ ಮೂಲಕ ಚಿಕ್ಕಜಾಜೂರು, ಹೊಳಲ್ಕೆರೆ, ಹೊಸದುರ್ಗಕ್ಕೆ ಹೋಗಬೇಕಿದೆ. ಲೋಕೋಪಯೋಗಿ ಇಲಾಖೆಯಿಂದ ರಸ್ತೆಯನ್ನು ನಿರ್ಮಿಸಲು ಸಹ ಜಿಲ್ಲಾಧಿಕಾರಿಗಳು ಸ್ಥಳದಲ್ಲಿದ್ದ ಇಂಜಿನಿಯರ್ಗೆ ಸೂಚನೆ ನೀಡಿದರು.
ಆತಂಕಗೊಂಡಿದ್ದ ಜನ; 2022ರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಭಾರೀ ಮಳೆಯಾಗಿತ್ತು. ಕೊಡಗನೂರು ಕೆರೆ ಭರ್ತಿಯಾಗಿ ಏರಿ ಕುಸಿದು ಅಪಾಯದ ಮುನ್ಸೂಚನೆ ನೀಡಿತ್ತು. ಕೆರೆ ಏರಿಗೆ ಹಾನಿಯಾಗಿದ್ದರೆ ಲಕ್ಷಾಂತರ ಹೆಕ್ಟೇರ್ ಜಮೀನು, ವಸತಿ ಪ್ರದೇಶಗಳು ಮುಳುಗಡೆಯಾಗುವ ಭೀತಿ ಎದುರಾಗಿತ್ತು, ಇದರಿಂದಾಗಿ ಜನರು ಆತಂಕಗೊಂಡಿದ್ದರು.
ಕೊಡಗನೂರು ಕೆರೆ ದಾವಣಗೆರೆ-ಹೊಳಲ್ಕೆರೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಕೆರೆ ಭರ್ತಿಯಾಗಿ ಏರಿ ಕುಸಿದಿದ್ದರಿಂದ ಅಧಿಕಾರಿಗಳು ರಸ್ತೆ ಬಂದ್ ಮಾಡಿ ದುರಸ್ತಿ ಕಾರ್ಯ ಕೈಗೊಂಡಿದ್ದರು. ಮಣ್ಣನ್ನು ಏರಿಸಿ ರೈತರ ಆತಂಕ ದೂರವಾಗಿಸಿದ್ದರು. ಆದರೆ ಜನರು ಕಾಟಾಚಾರಕ್ಕೆ ಕಾಮಗಾರಿ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಸಣ್ಣ ನೀರಾವರಿ ಇಲಾಖೆಗೆ ಕೊಡಗನೂರು ಕೆರೆ ಸೇರುತ್ತದೆ. ಈ ಕೆರೆಯು 220 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. 175 ಹೆಕ್ಟೇರ್ ಪ್ರದೇಶದಲ್ಲಿ ನೀರು ಸಂಗ್ರಹಗೊಳ್ಳುತ್ತದೆ. ಜಿಲ್ಲಾ ವ್ಯಾಪ್ತಿಯಲ್ಲಿ ಕೆರೆ ತುಂಬಿಸುವ ಯೋಜನೆಗೆ ಆಯ್ಕೆಯಾದ ಕೆರೆಗಳಲ್ಲಿ ಇದು ಸಹ ಸೇರಿದೆ. ಆದರೆ ಕಳೆದ ಬಾರಿ ಸುರಿದ ಮಳೆಗೆ ಕೆರೆ ಭರ್ತಿಯಾಗಿತ್ತು. ಕೆರೆಯ ಏರಿಯಲ್ಲಿ ಬಿರುಕು ಕಾಣಿಸಿಕೊಂಡು ಜನರು ಆತಂಕಗೊಳ್ಳುವಂತೆ ಮಾಡಿತ್ತು.
ಕೊಡಗನೂರು ಕೆರೆಯ ಹೂಳು ಎತ್ತಿ ಅಭಿವೃದ್ಧಿಗೊಳಿಸಿದರೆ ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಚಿತ್ರದುರ್ಗ ಭಾಗದಿಂದ ನೂರಾರು ಕುರಿಗಳೊಂದಿಗೆ ಕುರಿಗಾಹಿಗಳು ದಾವಣಗೆರೆಗೆ ಬರುತ್ತಾರೆ. ಅವರು ಅವುಗಳಿಗೆ ನೀರುಣಿಸಲು ಈ ಕೆರೆಯನ್ನು ಆಶ್ರಯಿಸಿದ್ದಾರೆ.
ತುಂಗಭದ್ರಾ ನದಿಯಿಂದ ಮಳೆಗಾಲದ ನಾಲ್ಕು ತಿಂಗಳು ದಾವಣಗೆರೆ, ಜಗಳೂರು ತಾಲೂಕಿನ 22 ಕೆರೆಗಳಿಗೆ ನೀರು ಹರಿಸಿ ಅದನ್ನು ತುಂಬಿಸುವ ಏತ ನೀರಾವರಿ ಯೋಜನೆಯನ್ನು ಕೈಗೊಳ್ಳಲಾಗಿದೆ. ಸುಮಾರು 105 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಈ ಯೋಜನೆಯಡಿ ದಾವಣಗೆರೆಯ ಹೊನ್ನೂರು, ಕೊಗ್ಗನೂರು, ಕೊಡಗನೂರು ಕೆರೆಗಳು ಸಹ ಸೇರಿವೆ. ಆದರೆ ಈ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ.












Click it and Unblock the Notifications