ದಾವಣಗೆರೆ: ಕೋವಿಡ್ ತಡೆಗೆ ಪಿಯುಸಿ ವಿದ್ಯಾರ್ಥಿ ಸಮಾಜಮುಖಿ ಕಾರ್ಯ
ದಾವಣಗೆರೆ, ಮೇ 06; ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಇಂತಹ ಸಮಯದಲ್ಲಿ ಜನರ ಕಷ್ಟಗಳಿಗೆ ನೆರವಾಗಲು ಹಲವಾರು ಜನರು, ಸಂಘಟನೆಗಳು ವಿವಿಧ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ. ಸೋಂಕು ತಡೆಗೆ ದಾವಣಗೆರೆ ಪಿಯುಸಿ ವಿದ್ಯಾರ್ಥಿಯೊಬ್ಬ ತನ್ನ ಕೈಲಾದ ಕೆಲಸ ಮಾಡುತ್ತಿದ್ದಾನೆ.
ನಗರದ ಎಂಸಿಸಿ ಬಿ ಬ್ಲಾಕ್ನ ವಿ. ರುದ್ರೇಶ್ ಎಂಬ ಯುವಕ ಸಮಾಜಮುಖಿ ಕೆಲಸ ಮಾಡುತ್ತಿದ್ದಾನೆ. ನಗರದ ಮನೆ ಮನೆ, ಜನಸಂದಣಿ ಇರುವ ಪ್ರದೇಶ ಹಾಗೂ ಬೀದಿ ಬೀದಿಗಳಲ್ಲಿ ಸ್ಯಾನಿಟೈಸ್ ಮಾಡುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಪ್ರಯತ್ನ ನಡೆಸಿದ್ದಾನೆ.
ಗುತ್ತಿಗೆದಾರ ಕೆ. ಟಿ.ವೀರಪ್ಪ ಹಾಗೂ ವಿಶಾಲಮ್ಮ ದಂಪತಿಯ ಪುತ್ರ ರುದ್ರೇಶ್ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾನೆ. ಪ್ರತಿ ನಿತ್ಯವೂ ಕಂಟೈನರ್ ಹೆಗಲಿಗೆ ಹಾಕಿಕೊಂಡು ಆಸ್ಪತ್ರೆಯ ಹೊರಾಂಗಣ, ಅಂಗಡಿ ಮುಂಗಟ್ಟುಗಳ ಬಳಿ ಔಷಧಿ ಸಿಂಪಡಣೆ ಮಾಡುತ್ತಿದ್ದಾನೆ. ಪ್ರತಿದಿನ ಎರಡರಿಂದ ಮೂರು ಗಂಟೆ ಈ ಕೆಲಸ ಮಾಡುವ ರುದ್ರೇಶ್ಗೆ ತಾಯಿಯೇ ಸ್ಪೂರ್ತಿ.

ತನ್ನ ಚಿಕ್ಕಪ್ಪನಿಂದ ಕ್ಯಾನ್ ತರಿಸಿಕೊಂಡ ರುದ್ರೇಶ್ ಕನಿಷ್ಠ ಐದರಿಂದ ಆರು ಕ್ಯಾನ್ ನಲ್ಲಿ ಸ್ಯಾನಿಟೈಸ್ ಮಾಡುತ್ತಾನೆ. ಖಾಲಿಯಾದಂತೆ ಮತ್ತೆ ತುಂಬಿಸಿಕೊಂಡು ಸಾಗುತ್ತಾನೆ. ಇದಕ್ಕೆ ದಿನಕ್ಕೆ ಏನಿಲ್ಲಾ ಅಂದ್ರೂ 500 ರೂಪಾಯಿ ಖರ್ಚಾಗುತ್ತದೆ. ಪುತ್ರನ ಈ ಕಾರ್ಯಕ್ಕೆ ತಂದೆ ಕೆ. ಟಿ. ವೀರಪ್ಪ ಬೆಂಬಲ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ರುದ್ರೇಶ್, "ಕಳೆದ ಒಂದು ವಾರದಿಂದ ಈ ಕಾರ್ಯ ಮಾಡುತ್ತಿದ್ದೇನೆ. ಎಲ್ಲೋ ಹಣ ಖರ್ಚು ಮಾಡುವ ಬದಲು ಇಂಥ ಸನ್ನಿವೇಶದಲ್ಲಿ ಜನರಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಈ ಕೆಲಸ ಮಾಡುತ್ತಿದ್ದೇನೆ" ಎಂದು ಹೇಳಿದ್ದಾನೆ.
"ಜನರು ಮಾಸ್ಕ್ ಧರಿಸಬೇಕು. ಜೇಬಿನಲ್ಲಿ ಸ್ಯಾನಿಟೈಸರ್ ಇಟ್ಟುಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೊರೊನಾ 2ನೇ ಅಲೆ ಭೀಕರವಾಗಿದೆ. ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ವೇಳೆ ನನ್ನದು ಒಂದು ಅಳಿಲು ಸೇವೆ ಅಷ್ಟೇ. ಕೊರೊನಾ ಮುಕ್ತ ಭಾರತ ದೇಶವಾಗಲಿ" ಎಂದು ಹಾರೈಸಿದ್ದಾನೆ.












Click it and Unblock the Notifications