ದಾವಣಗೆರೆಯಲ್ಲಿ ಷರತ್ತುಬದ್ಧ ವ್ಯಾಪಾರಕ್ಕೆ ಅನುಮತಿ; ವಹಿವಾಟು ಆರಂಭ
ದಾವಣಗೆರೆ, ಮೇ 13: ನಗರದಲ್ಲಿ ಇಂದಿನಿಂದ ಷರತ್ತು ಬದ್ಧ ನಿಯಮಾನುಸಾರವಾಗಿ ಆರ್ಥಿಕ ಚಟುವಟಿಕೆಗಳು ಪ್ರಾರಂಭಗೊಂಡಿವೆ. ನಗರದ ಪ್ರಮುಖ ವ್ಯಾಪಾರದ ಸ್ಥಳಗಳಲ್ಲಿ ಇಂದು ಬೆಳಗ್ಗಿನಿಂದಲೇ ವರ್ತಕರು ವಹಿವಾಟುಗಳಿಗೆ ಚಾಲನೆ ನೀಡಿದ್ದಾರೆ.
ಇಲ್ಲಿನ ಅಶೋಕ ರಸ್ತೆ, ಪಿಬಿ ರಸ್ತೆ, ವಿದ್ಯಾರ್ಥಿ ಭವನ ರಸ್ತೆ, ಮಂಡಿಪೇಟೆ, ಗಡಿಯಾರ ಕಂಬ, ರಾಮ್ ಅಂಡ್ ಕೋ ವೃತ್ತ ಸೇರಿದಂತೆ ನಗರದ ಹಲವೆಡೆ ಸಣ್ಣಪುಟ್ಟ ಬಟ್ಟೆ ಅಂಗಡಿಗಳು ಸೇರಿದಂತೆ ವಿವಿಧ ಅಂಗಡಿಗಳು ಪ್ರಾರಂಭಗೊಂಡಿವೆ. ದಾವಣಗೆರೆ ಕೆಂಪು ವಲಯಕ್ಕೆ ಸೇರಿದೆ. ಈ ಮಧ್ಯೆಯೂ ಜಿಲ್ಲಾಡಳಿತ ಷರತ್ತುಬದ್ಧ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡಿದೆ. ಇದರಿಂದಾಗಿ ಸತತ ಎರಡು ತಿಂಗಳ ಕಾಲ ಸ್ಥಗಿತಗೊಂಡಿದ್ದ ವ್ಯಾಪಾರಕ್ಕೆ ಇದೀಗ ಚುರುಕು ಮುಟ್ಟಿದೆ.
ಆದರೆ ಸಾರ್ವಜನಿಕರು ಇನ್ನೂ ಭಯದ ವಾತಾವರಣದಲ್ಲಿರುವುದರಿಂದ ವ್ಯಾಪಾರ ಸಹಜ ಸ್ಥಿತಿಗೆ ತಲುಪಲು ಕೆಲ ದಿನಗಳು ಬೇಕಾಗುತ್ತದೆ ಎನ್ನುತ್ತಾರೆ ಅಶೋಕ ರಸ್ತೆಯ ವ್ಯಾಪಾರಿ. ಇಂದಿನಿಂದ ನಗರದಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೂ ಅಂಗಡಿ ಮುಂಗಟ್ಟುಗಳು ಕಾರ್ಯ ನಿರ್ವಹಿಸಲಿವೆ. ಆದರೆ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ.

ವ್ಯಾಪಾರಸ್ಥರು ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಒಂದುವೇಳೆ ಸಾಮಾಜಿಕ ಅಂತರ ಕಾಪಾಡದೇ ವಹಿವಾಟು ನಡೆಸಿದ್ದು ಕಂಡು ಬಂದಲ್ಲಿ ಅಂತಹ ಅಂಗಡಿ ಸೀಲ್ ಮಾಡಲಾಗುವುದು ಎಂದು ಈಗಾಗಲೇ ಜಿಲ್ಲಾಧಿಕಾರಿ ಮಹಾಂತೇಶ್ ಬೀಲಗಿ ಆದೇಶ ನೀಡಿದ್ದಾರೆ. ಬಟ್ಟೆ, ದಿನಸಿ, ಕೈಗಾರಿಕೆ ಸೇರಿದಂತೆ ಬಹುತೇಕ ಆರ್ಥಿಕ ವಹಿವಾಟು ಇಂದು ಪ್ರಾರಂಭವಾಗಿದೆ. ಆದರೆ ಮಹಾನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ ಹಾಗೂ ಆಟೋ, ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿಲ್ಲ.
ಕಂಟೈಮೆಂಟ್ ಝೋನ್ ಗಳ ಸುತ್ತ ಒಂದು ನೂರು ಮೀಟರ್ ಪ್ರದೇಶ ಹೊರತುಪಡಿಸಿ ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ. ಕೈಗಾರಿಕೆಗಳು, ಕಟ್ಟಡ ಕಾಮಗಾರಿ ಚಟುವಟಿಕೆ, ಅವಶ್ಯಕ ಸಾಮಗ್ರಿ ಪೂರೈಸುವ ಮಾರುಕಟ್ಟೆ, ಬಟ್ಟೆ ಅಂಗಡಿಗಳಲ್ಲಿ ವ್ಯಾಪಾರ ಕೊಂಚಮಟ್ಟಿಗೆ ಮಾತ್ರ ಕಂಡುಬಂದಿತು.











Click it and Unblock the Notifications