ನಮ್ಮ ಬೇಡಿಕೆ ಗೌರವಿಸದಿದ್ದರೆ ಸರ್ಕಾರಕ್ಕೆ ಪೆಟ್ಟು ಕೊಡುವುದು ಶತಸಿದ್ಧ: ಪಂಚಮಸಾಲಿ ಮುಖಂಡ ಎಚ್.ಎಸ್. ಶಿವಶಂಕರ್
ದಾವಣಗೆರೆ, ಡಿಸೆಂಬರ್ 21: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗೆ ಒತ್ತಾಯಿಸಿ ಡಿಸೆಂಬರ್ 22ರಂದು ಬೆಳಗಾವಿಯ ಸುವರ್ಣಸೌಧದ ಎದುರಿನ ನೂರು ಎಕರೆ ಜಾಗದಲ್ಲಿ ವಿರಾಟ್ ಮಹಾಶಕ್ತಿ ಸಮಾವೇಶ ಏರ್ಪಡಿಸಲಾಗಿದೆ ಎಂದು ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಶಿವಶಂಕರ್ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಿರಾಟ್ ಮಹಾಶಕ್ತಿ ಸಮಾವೇಶಕ್ಕೆ ಸುಮಾರು 15 ಲಕ್ಷಕ್ಕೂ ಹೆಚ್ಚು ಪಂಚಮಸಾಲಿಗಳು ಆಗಮಿಸಲಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಭರವಸೆ ಹುಸಿಯಾಗಿದೆ. ಈ ಕಾರಣಕ್ಕೆ ಪಂಚಮಸಾಲಿಗಳ ಶಕ್ತಿ ತೋರಿಸುತ್ತೇವೆ ಎಂದು ತಿಳಿಸಿದರು.
ನಟ ದರ್ಶನ್ ಮೇಲೆ ಚಪ್ಪಲಿ ಎಸೆತ ವಿರೋಧಿಸಿ ದಾವಣಗೆರೆಯಲ್ಲಿ ಅಭಿಮಾನಿಗಳ ಪ್ರತಿಭಟನೆ
ಸಮಾವೇಶದಲ್ಲಿ ಸುಮಾರು 10 ಲಕ್ಷ ಜನರಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದೇವೆ. ದಾವಣಗೆರೆ ಜಿಲ್ಲೆಯೊಂದರಿಂದಲೇ ಒಂದು ಸಾವಿರ ಕ್ವಿಂಟಾಲ್ ಅಕ್ಕಿ ನೀಡಲಾಗುತ್ತದೆ. ಅದೇ ರೀತಿಯದಲ್ಲಿ ಸಮಾಜದ ಮುಖಂಡರು ದಾನ ನೀಡುತ್ತಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ತಮ್ಮ ಕೈಯಲ್ಲಾದಷ್ಟು ಸಹಾಯ ಮಾಡಿದ್ದಾರೆ. ಒಟ್ಟಾರೆ ಸಮಾಜದವರೆಲ್ಲರ ಸಹಕಾರದಿಂದ ಬೆಳಗಾವಿಯಲ್ಲಿ ಶಕ್ತಿ ಪ್ರದರ್ಶಿಸುತ್ತೇವೆ ಎಂದರು.
ಮೀಸಲಾತಿ ಸಿಗುವವರೆಗೆ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ
ಸುಮಾರು 27 ವರ್ಷಗಳಿಂದಲೂ 2ಎ ಮೀಸಲಾತಿಗೆ ಬೇಡಿಕೆ ಇದೆ. ಆದರೆ ಕಳೆದ ಎರಡು ವರ್ಷಗಳ ಹಿಂದೆ ಕೂಡಲಸಂಗಮದ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ನಿರಂತರ ಹೋರಾಟದ ಫಲವಾಗಿ ಸರ್ಕಾರ ನಮಗೆ ನಾಲ್ಕೈದು ಬಾರಿ ಆಶ್ವಾಸನೆ ನೀಡಿತ್ತು. 2ಎ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರೂ, ಈಗ ಬೇಡಿಕೆ ಈಡೇರಿಸಲು ಮುಂದಾಗುತ್ತಿಲ್ಲ. ಇಷ್ಟು ಪರಿಣಾಮಕಾರಿ ಹೋರಾಟ ಮಾಡದಿದ್ದರೆ ಸರ್ಕಾರ ಕಣ್ತೆರೆಯುತ್ತಿರಲಿಲ್ಲ ಎಂದು ಹೇಳಿದರು.
ಈ ಹೋರಾಟದಲ್ಲಿ ಕೆಲವರು ಬಂದರು, ಹೋದರು. ಆದರೆ, ಸ್ವಾಮೀಜಿಯವರು ಮಾತ್ರ ನಿರಂತವರಾಗಿ ಪ್ರತಿಭಟನೆ, ಸತ್ಯಾಗ್ರಹ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಜಾಗೃತಗೊಳಿಸುವ ಕೆಲಸ ಮುಂದುವರಿಸುತ್ತಲೇ ಇದ್ದಾರೆ. ಈಗಲೂ ಸಹ ಇದೇ ನಿಟ್ಟಿನಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ. ಮೀಸಲಾತಿ ಸಿಗುವವರೆಗೆ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ, ಮುಂದುವರಿಯುತ್ತದೆ. ಕೂಡಲಸಂಗಮದ ಶ್ರೀಗಳ ಹೋರಾಟ ಇತರೆ ಸಮಾಜಗಳಿಗೂ ಮಾದರಿ. ಎಲ್ಲಾ ಸಮಾಜಗಳಿಗೂ ಬೇಡಿಕೆಗನುಗುಣವಾಗಿ ಮೀಸಲಾತಿ ನೀಡಬೇಕು ಎಂಬ ಹಕ್ಕೊತ್ತಾಯ ನಮ್ಮದು ಎಂದರು.
ನಮ್ಮ ಬೇಡಿಕೆ ಗೌರವಿಸದಿದ್ದರೆ ಸರ್ಕಾರಕ್ಕೆ ಪೆಟ್ಟು ಕೊಡುವುದು ಶತಃಸಿದ್ಧ
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2 ಮೀಸಲಾತಿ ನೀಡುವಂತೆ ಮನವಿ ಮಾಡಿದ್ದೆವು. ಆದರೂ ಬೇಡಿಕೆ ಈಡೇರಿಸಲಿಲ್ಲ. ಆ ಬಳಿಕ ಹೋರಾಟಕ್ಕೆ ಪೆಟ್ಟು ಕೊಡಲು ಯತ್ನಿಸಿದರು. ಆದರೆ ಕೊನೆಗೆ ಅನಿವಾರ್ಯವಾಗಿ ವಿಧಾನಮಂಡಲ ಅಧಿವೇಶನದಲ್ಲಿ ಬೆಂಬಲಿಸಿದರು. ಇನ್ನು ಎರಡು ದಿನಗಳ ಕಾಲಾವಕಾಶ ಇದೆ. ಯಾವ ನಿರ್ಧಾರಕ್ಕೆ ಬರುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ. ನಮ್ಮ ಬೇಡಿಕೆ ಗಮನಿಸದಿದ್ದರೆ, ಗೌರವಿಸದಿದ್ದರೆ ಸರ್ಕಾರಕ್ಕೆ ಪೆಟ್ಟು ಕೊಡುವುದು ಶತಃಸಿದ್ಧ. ನಮ್ಮ ಹಕ್ಕು ನಾವು
ಕೇಳಿದ್ದೇವೆ. ಇತರೆ ಸಮಾಜಗಳು ಅವರ ಹಕ್ಕು ಕೇಳಲಿ. ಯಾಕೆ ತಾರತಮ್ಯ ಮಾಡಲಾಗುತ್ತದೆ. ಗಾಣಿಗ, ಬಣಜಿಗ ಸಮಾಜಕ್ಕೆ ಈಗಾಗಲೇ ಮೀಸಲಾತಿ ನೀಡಲಾಗಿದೆ. ಹೋರಾಟ ಮಾಡದಿದ್ದರೂ ಸೌಲಭ್ಯ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೈಯಕ್ತಿಕ ಪ್ರತಿಷ್ಠೆ ಬಿಟ್ಟು ಹೋರಾಟಕ್ಕೆ ಬನ್ನಿ
ಬಣ್ಣ ಮಾಸುತ್ತದೆ ಎಂದು ಕೆಲವರು ಎಸಿಯಲ್ಲಿ ಕುಳಿತಿದ್ದಾರೆ. ಹೊರಗಡೆ ಬರುತ್ತಿಲ್ಲ. ಸಮಾಜದಲ್ಲಿ ಹುಟ್ಟಿ ಋಣ ತೀರಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ವಚನಾನಂದ ಸ್ವಾಮೀಜಿ ಹಾಗೂ ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರೇನೂ ಬಡಿದಾಡಿಕೊಂಡಿಲ್ಲ. ಎಲುಬಿಲ್ಲದ ನಾಲಗೆ ಏನೇನೋ ಮಾತನಾಡುತ್ತದೆ. ನಮ್ಮ ಉದ್ದೇಶ ಒಂದೇ. ಅದೂ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗಬೇಕು ಎನ್ನುವುದು. ಸಮಾಜಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಕೆಲವರು ಕಾನೂನು ಬದ್ಧ, ತಾಂತ್ರಿಕ ಹೋರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ. ವೈಯಕ್ತಿಕ ಪ್ರತಿಷ್ಠೆ ಬಿಟ್ಟು ಹೋರಾಟಕ್ಕೆ ಬನ್ನಿ. ಕೆಲವರು ಪಾದಯಾತ್ರೆಗೆ ಬಂದರು ಹೋದರು. ಯಾರೇ ಬಾರದಿದ್ದರೂ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್ ಹೇಳಿದ್ದಾರೆ.
ಟಿಕೆಟ್ ಘೋಷಣೆಗೂ ಮುನ್ನವೇ ಕ್ಷೇತ್ರದಾದ್ಯಂತ ಸಂಚಾರ ಮಾಡುತ್ತಿದ್ದೇನೆ
ಮುಂದಿನ ವಿಧಾನಸಭಾ ಚುನಾವಣೆ ಬಗ್ಗೆ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಲ್ಲಿ ಈಗಾಗಲೇ ಹೊನ್ನಾಳಿ, ಚನ್ನಗಿರಿ, ಹರಿಹರ, ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿಗಳನ್ನು ಜೆಡಿಎಸ್ ಪ್ರಕಟಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಉತ್ತಮ ಸಾಧನೆ ಮಾಡಲಿದೆ. ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ. ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರಿದ್ದಾರೆ. ಹರಿಹರಕ್ಕೆ ಮಾತ್ರ ನಾನು ಸೀಮಿತವಾಗಿಲ್ಲ. ಟಿಕೆಟ್ ಘೋಷಣೆಗೂ ಮುನ್ನವೇ ಕ್ಷೇತ್ರದಾದ್ಯಂತ ಸಂಚಾರ ಮಾಡುತ್ತಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ. ರಾಜಕೀಯವಾಗಿ ಯಾರ ಬಗ್ಗೆಯೂ ಮಾತನಾಡಲು ಹೋಗಲ್ಲ. ಜನರ ಮನಸು ಗೆಲ್ಲುವುದಷ್ಟೇ ನನ್ನ ಯೋಚನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ಗೌರವಾಧ್ಯಕ್ಷ ಹೊಳೆಸಿರಿಗೆರೆ ಪರಮೇಶ್ವರಪ್ಪ ಗೌಡ, ಜಿಲ್ಲಾಧ್ಯಕ್ಷ ಗೋಪನಾಳ್ ಅಶೋಕ್, ಮಹಾನಗರ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಅಭಿ ಕಾಟನ್ ಮಾಲೀಕ ಬಕ್ಕೇಶ್, ಮಲ್ಲಿಕಾರ್ಜುನ್, ಮುರುಘರಾಜೇಂದ್ರ ಬ್ಯಾಂಕ್ ನ ಉಪಾಧ್ಯಕ್ಷ ಓಂಕಾರಪ್ಪ, ಭರತ್, ಮಂಜುನಾಥ್, ಕಮಲಾಪುರ ಮಹಾದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.