ಕುಮಾರಸ್ವಾಮಿ ಹೇಳಿದ್ದೆಲ್ಲವೂ ವೇದವಾಕ್ಯನಾ?: ಎಚ್ಡಿಕೆ ವಿರುದ್ಧ ಬೆಂಕಿಯುಗುಳಿದ ಸಿದ್ದರಾಮಯ್ಯ
ದಾವಣಗೆರೆ, ಜುಲೈ 2: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಬೆಂಕಿಯುಗುಳಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, "ಯಾವ ಪಾಪದ ಕೊಡ ತುಂಬಿದೆಯಂತೆ. ಪದೇ ಪದೇ ಉತ್ತರ ಕೊಡಲು ಆಗದು. ಬೇಕು ಬೇಕು ಅಂತಾನೇ ಸುಳ್ಳು ಹೇಳುತ್ತಿದ್ದಾರೆ. ಶಾಸಕರನ್ನು ಬಿಜೆಪಿಗೆ ನಾನು ಕಳುಹಿಸಿದ್ದೇನೆ ಎಂಬ ಆರೋಪ ಸತ್ಯಕ್ಕೆ ದೂರವಾದುದು. ಎಲ್ಲವನ್ನೂ ಸುಮಾರು ಬಾರಿ ಹೇಳಿಯಾಗಿದೆ. ಕುಮಾರಸ್ವಾಮಿ ಹೇಳಿದ್ದೆಲ್ಲವೂ ವೇದವಾಕ್ಯನಾ,'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಕಾಂಗ್ರೆಸ್ನಲ್ಲಿ ಸಿಎಂ ಆಗಲು ಎಲ್ಲಿ ಹೊಡೆದಾಡಿದ್ದೇವೆ. ಯಾರು ಹೇಳಿದ್ದಾರೆ, ಕುಮಾರಸ್ವಾಮಿ ನಮ್ಮ ಪಕ್ಷದವರಾ? ಕುಮಾರಸ್ವಾಮಿಗೂ ನಮಗೂ ಏನು ಸಂಬಂಧ? ಕಾಂಗ್ರೆಸ್ನಲ್ಲಿ ಯಾವುದೇ ಜಗಳ ಇಲ್ಲ, ಗುಂಪುಗಾರಿಕೆ ಇಲ್ಲ. ಹೊಡೆದಾಟವೂ ಇಲ್ಲ. ನಾವೆಲ್ಲಾ ಒಟ್ಟಾಗಿದ್ದೇವೆ,'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
"ಬಿಜೆಪಿ ಸರ್ಕಾರ 20ರಿಂದ 25 ಪರ್ಸೆಂಟೇಜ್ ಸರ್ಕಾರ. ಲಂಚ ಇಲ್ಲದೇ ಏನು ಕೆಲಸ ನಡೆಯಲ್ಲ. ಯಡಿಯೂರಪ್ಪ ಮಗ ವಿಜಯೇಂದ್ರನೇ ಸಿಎಂ ರೀತಿ ವರ್ತಿಸುತ್ತಿದ್ದಾರೆ. ಇನ್ನು ಸಚಿವ ಶ್ರೀರಾಮುಲು ಪಿಎ ಹಣ ಪಡೆದು ವಂಚಿಸಿರುವುದನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಅರೆಸ್ಟ್ ಕೂಡ ಮಾಡಲಾಗಿದೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ,'' ಎಂದು ಆರೋಪಿಸಿದರು.

ಕೊರೊನಾದಿಂದ ಮೃತಪಟ್ಟವರಿಗೆ 5 ಲಕ್ಷ ರೂ. ನೀಡಿ
"ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಪ್ರವಾಹ ಸೇರಿದಂತೆ ರಾಷ್ಟ್ರೀಯ ವಿಪತ್ತು ಸಂಭವಿಸಿದಾಗ ಐದು ಲಕ್ಷ ರೂಪಾಯಿ ನೀಡಲಾಗುತ್ತದೆ. ಅಂತೆಯೇ ಈಗ ಕೊರೊನಾ ಮಹಾಮಾರಿಯಿಂದ ಸತ್ತವರಿಗೆ ಹೆಚ್ಚಿನ ಪರಿಹಾರ ಕೊಡಬೇಕು ಎಂಬುದು ನಮ್ಮ ಒತ್ತಾಯ,'' ಎಂದು ಹೇಳಿದರು.
"ನಾನು ಸರ್ಕಾರಕ್ಕೆ ಎರಡರಿಂದ ಮೂರು ಬಾರಿ ಪತ್ರ ಬರೆದಿದ್ದೇನೆ. ನಾವು ಒತ್ತಾಯಿಸಿದ ಅಂಶಗಳನ್ನೇ ಸುಪ್ರೀಂ ಕೋರ್ಟ್ ಸಹ ಪ್ರಸ್ತಾಪಿಸಿದೆಯಲ್ಲದೇ, ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸರ್ಕಾರ ಮಾತ್ರ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಇಷ್ಟೊಂದು ಪರಿಹಾರ ನೀಡಲು ಸಾಧ್ಯವಿಲ್ಲವೆಂದು ಸರ್ಕಾರ ಹೇಳುತ್ತಿದೆ,'' ಎಂದು ಕಿಡಿಕಾರಿದರು.

ಇನ್ನು "ಕಾಂಗ್ರೆಸ್ ನನ್ನ ನೇತೃತ್ವದಲ್ಲಿ ಚುನಾವಣೆಗೆ ಹೋಗಬೇಕು, ಮುಂದಿನ ಮುಖ್ಯಮಂತ್ರಿ ನಾನಾಗಬೇಕು ಎಂದು ಯಾರು ಹೇಳಿದ್ದಾರೆ,'' ಎಂದು ಪ್ರಶ್ನಿಸಿದ ಅವರು, "ಕಾಂಗ್ರೆಸ್ ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸುತ್ತದೆ. ಈಗಲೇ ನಾವು ಏನು ಹೇಳಲು ಆಗದು. ಚುನಾವಣೆ ನಡೆಯಬೇಕು. ಶಾಸಕರು ಆಯ್ಕೆಯಾಗಿ ಬಹುಮತ ಬರಬೇಕು. ಬಳಿಕ ಶಾಸಕಾಂಗ ಸಭೆಯಾಗಬೇಕು. ಆಗ ಎಲ್ಲದೂ ನಿರ್ಧಾರ ಆಗಲಿದೆ,'' ಎಂದು ತಿಳಿಸಿದರು.

"ಬ್ಯಾಂಕ್ ಅಕೌಂಟ್ ಮೂಲಕ ಯಡಿಯೂರಪ್ಪ ಅಳಿಯ ಹಣ ಪಡೆದಿದ್ದಾರೆ. ಈ ಮೂಲಕ ಯಡಿಯೂರಪ್ಪ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿದೆ,'' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.











Click it and Unblock the Notifications