ಹಿಂಸಾಚಾರ, ಗಲಾಟೆ ಸಹಿಸಲ್ಲ; ಅಲೋಕ್ ಕುಮಾರ್ ಎಚ್ಚರಿಕೆ
ದಾವಣಗೆರೆ, ಜುಲೈ 8: "ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ಕೆಲವೆಡೆ ಅಹಿತಕರ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯಸವ್ಥೆ ಕಾಪಾಡಲು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ" ಎಂದು ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಹೇಳಿದರು.
"ಕೋಮು ಭಾವನೆ ಕೆರಳಿಸುವಂಥ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹಾಕಿದರೆ, ಜನರಿಂದ ಮಾಹಿತಿ ಸಿಕ್ಕರೆ ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲಿಸಬೇಕೆಂದು ಈಗಾಗಲೇ ಸೂಚನೆ ನೀಡಿದ್ದೇನೆ. ಹಿಂಸಾಚಾರ, ಗಲಾಟೆ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಖಚಿತ" ಎಂದು ಅಲೋಕ್ ಕುಮಾರ್ ಹೇಳಿದರು.
ಕೆರೂರಿನಲ್ಲಿನ ಕೋಮುಸಂಘರ್ಷಕ್ಕೆ ಇಬ್ಬರ ಜಗಳ ಕಾರಣ?
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, "ಸಾಮಾಜಿಕ ಜಾಲತಾಣಗಳಲ್ಲಿ ಕೋಮುಭಾವನೆಗೆ ಧಕ್ಕೆ ಬರುವಂಥ ಸಂದೇಶ ಹರಿಬಿಟ್ಟರೆ ನಿರ್ಲಕ್ಷ್ಯ ವಹಿಸಬಾರದು. ಇಂಥ ಸಮಯದಲ್ಲಿ ಹಾಗೂ ನಿರಂತರವಾಗಿ ಎಲ್ಲಾ ಸಮುದಾಯದ ಮುಖಂಡರ ಜೊತೆ ಸಂಪರ್ಕದಲ್ಲಿರಬೇಕು. ಆಗ ಅಹಿತರ ಘಟನೆ ನಡೆಯದಂತೆ ಎಚ್ಚರ ವಹಿಸಬಹುದು. ಸಣ್ಣ ಸಣ್ಣ ಘಟನೆಗಳು ದೊಡ್ಡದಾಗುವ ಸಂಭವ ಇರುತ್ತದೆ" ಎಂದರು.
"ಹುಬ್ಬಳ್ಳಿಯಲ್ಲಿ ಚಂದ್ರಶೇಖರ್ ಗುರೂಜಿ ಅವರ ಹತ್ಯೆ ಪ್ರತಿಷ್ಠಿತ ಹೊಟೇಲ್ ನಲ್ಲಿ ನಡೆದಿದೆ. ಇದು ಗಂಭೀರವಾದ ವಿಷಯ, ದೊಡ್ಡ ದೊಡ್ಡ ಹೊಟೇಲ್ಗಳು, ಮಾಲ್ ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಕೆ, ಮೆಟಲ್ ಡಿಟೆಕ್ಟರ್, ತರಬೇತಿ ನೀಡಿದ ಸೆಕ್ಯುರಿಟಿ ಗಾರ್ಡ್ ಗಳನ್ನು ನೇಮಕ ಮಾಡಬೇಕು. ಭದ್ರತಾ ಏಜೆನ್ಸಿಗಳು ಹಾಗೂ ಹೊಟೇಲ್, ಮಾಲ್ ಗಳ ಮಾಲೀಕರು ಮುನ್ನಚ್ಚರಿಕೆ ವಹಿಸಬೇಕು. ಪೊಲೀಸ್ ಇಲಾಖೆ ಸೂಚಿಸಿದ ನಿಯಮಾವಳಿ ಪಾಲಿಸಲೇಬೇಕು. ಇಲ್ಲದಿದ್ದರೆ ದಂಡ ವಿಧಿಸುವ ಜೊತೆಗೆ ಪರವಾನಗಿ ರದ್ದು ಮಾಡಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.
ತಮಿಳುನಾಡಿನಿಂದ ಅಕ್ರಮವಾಗಿ ತಂದ 102 ಕೆಜಿ ಬೆಳ್ಳಿ ಗೆಜ್ಜೆ ವಶಪಡಿಸಿಕೊಂಡ ದಾವಣಗೆರೆ ಪೊಲೀಸ್
"ನಗರಗಳಲ್ಲಿ ಪೊಲೀಸ್ ಬೀಟ್ ಮತ್ತಷ್ಟು ಹೆಚ್ಚಿಸಬೇಕು. ವಾಹನ ಸವಾರರ ಮೇಲೆ ಅನುಮಾನ ಬಂದರೆ ಆತನನ್ನು ವಿಚಾರಣೆ ನಡೆಸಿ ಪರಿಶೀಲಿಸಬೇಕು. ಆತನ ನಡವಳಿಕೆಯಲ್ಲಿ ಬದಲಾವಣೆ ಕಂಡು ಬಂದರೆ ವಶಕ್ಕೆ ಪಡೆದು ವಿಚಾರಿಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿನ ಹೊಟೇಲ್ ಗಳು, ಮಾಲ್ ಗಳಲ್ಲಿ ಸಿಸಿಟಿವಿ, ಮೆಟಲ್ ಡಿಟೆಕ್ಟರ್, ಹ್ಯಾಂಡ್ ಮೆಡಲ್ ಡಿಟೆಕ್ಟರ್ ಕಡ್ಡಾಯವಾಗಿ ಅಳವಡಿಸಬೇಕು. ಸೆಕ್ಯುರಿಟಿ ಗಾರ್ಡ್ ಪರಿಶೀಲನೆಗೊಳಪಡಿಸಿ ಒಳಗಡೆ ಬಿಡಬೇಕು. ಇಂಥ ವ್ಯವಸ್ಥೆ ಜಾರಿಗೆ ಬರಬೇಕಿದೆ" ಎಂದರು.
ಅಮೃತ್ ಪೌಲ್ ಬಂಧನ ದುರದೃಷ್ಟಕರ
ಪಿಎಸ್ ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಬಂಧನವಾಗಿರುವುದು ದುರದೃಷ್ಟಕರ. ಕಾನೂನಿನ ಮುಂದೆ ಎಲ್ಲರೂ ಒಂದೇ. ಪೊಲೀಸ್ ಇಲಾಖೆಗೆ ಮುಜುಗರ ಎಂಬ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಹಳಷ್ಟು ಠಾಣೆಗಳಲ್ಲಿ ಪಿಎಸ್ ಐ, ಇಬ್ಬರು ಎಎಸ್ ಐ ನೇಮಕ ಮಾಡಲಾಗಿದೆ. ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಯದ್ವಾ ತದ್ವಾ ಮಾಡಲು ಆಗಲ್ಲ. ತರಬೇತಿಯೂ ಅವಶ್ಯಕ. ಈ ನಿಟ್ಟಿನಲ್ಲಿ ಕೆಲಸ ಆಗುತ್ತಿದೆ. ಎಲ್ಲಾ ಹುದ್ದೆಗಳನ್ನು ನೇಮಕ ಮಾಡಲಾಗುತ್ತಿದೆ. ರಾಜ್ಯಮಟ್ಟದಲ್ಲಿ ಮೇಲಾಧಿಕಾರಿಗಳು, ಸರಕಾರ, ಗೃಹ ಸಚಿವರು ಚರ್ಚಿಸಿ ನಿರ್ಧಾರ ಮಾಡುತ್ತಾರೆ ಎಂದ ಅವರು, ದಾವಣಗೆರೆ ಜಿಲ್ಲೆಯಲ್ಲಿ ಯಾವ ಠಾಣೆಗಳನ್ನು ಮೇಲ್ದರ್ಜಗೇರಿಸಬೇಕೆಂಬ ಪಟ್ಟಿ ಕಳುಹಿಸಿಕೊಟ್ಟರೆ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.
ಮಾದಕ ವಸ್ತುಸೇವಿಸುವವರ ವಿರುದ್ದವೂ ಕೇಸ್
ಮಾದಕ ವಸ್ತುಗಳ ಸೇವನೆ ಮಾಡುವವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು. ಎನ್ಡಿಪಿಎಸ್ ಆ್ಯಕ್ಟ್ ಪ್ರಕಾರ ಕ್ರಮ ಜರುಗಿಸುತ್ತೇವೆ. ಗ್ರಾಹಕರು ನೌಕರಿ, ವಿದ್ಯಾರ್ಥಿಗಳಿರುತ್ತಾರೆ ಎಂಬ ಕಾರಣಕ್ಕೆ ಅವರ ಭವಿಷ್ಯ ದೃಷ್ಟಿಯಿಂದ ಸಡಿಲಿಕೆ ಇತ್ತು. ಇನ್ನು ಮುಂದೆ ಸೇವನೆ ಮಾಡುವವರ ವಿರುದ್ಧವೂ ಕ್ರಮ ಖಚಿತ. ಹಿಂದೆ ಗಾಂಜಾ, ಮಾದಕ ವಸ್ತುಗಳ ಸರಬರಾಜು ಮಾಡುವವರನ್ನು ಪತ್ತೆ ಹಚ್ಚಿ ಈಗ ಏನೆಲ್ಲಾ ಮಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆಯುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸ್ಕೂಲ್, ಕಾಲೇಜಿನಲ್ಲಿ ಮಾದಕ ವಸ್ತುಗಳ ಪೂರೈಕೆ ಬಗ್ಗೆ ಆರು ಇಲ್ಲವೇ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಕೇಳಿದರೆ ಮಾಹಿತಿ ಸಿಗುತ್ತದೆ. ಪಿಯುಸಿ, ಪದವಿ ವಿದ್ಯಾರ್ಥಿಗಳು ಮಾಹಿತಿ ನೀಡೋದು ಕಷ್ಟ ಎಂದು ಅಭಿಪ್ರಾಯಪಟ್ಟರು.
ಆನ್ ಲೈನ್ ನಲ್ಲಿ ಮೋಸ ಹೋಗುವವರು ಹೆಚ್ಚಾಗುತ್ತಿದೆ
ಡಕಾಯಿತಿ ಕಡಿಮೆಯಾಗಿ ಚೀಟಿಂಗ್ ಪ್ರಕರಣಗಳು ಜಾಸ್ತಿಯಾಗಿದೆ. ಆನ್ ಲೈನ್ ನಲ್ಲಿ ಮೋಸ ಹೋಗುವವರು ಹೆಚ್ಚಾಗುತ್ತಿದ್ದಾರೆ. ಹತ್ತು ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರು ನುರಿತರಾಗಬೇಕು. ಚೀಟಿಂಗ್ ಮಾಡುವವರು ಈಗ ಸೈಬರ್ ಕ್ರೈಮ್ ಮಾಡ್ತಿದ್ದಾರೆ. ಪರಿಶೀಲನೆ ಮಾಡದೇ ಕಾರ್ಡ್ ಬ್ಲಾಕ್ ಮಾಡಿದರೆ ಸಿವಿ ನಂಬರ್ ಅನ್ನು ಜನರು ಕೊಟ್ಟು ಬಿಡ್ತಾರೆ. ಇದನ್ನು ನೀಡಬಾರದು. ಈ- ಮೇಲ್, ಮೆಸೇಜ್, ಫೋನ್ ಕಾಲ್ ಬಂದರೂ ಹುಷಾರಾಗಿರಬೇಕು. ಸೈಬರ್ ಕ್ರೈಮ್ ಬಗ್ಗೆ ಅರಿವು ಮೂಡಿಸಲು ಬಕ್ರೀದ್ ಹಬ್ಬದ ನಂತರ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿವರಿಸಿದರು.
ದಾವಣಗೆರೆ ಪೊಲೀಸರನ್ನು ಹೊಗಳಿದ ಎಡಿಜಿಪಿ
ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ಗಂಭೀರ ವಿಚಾರ ಇಲ್ಲ. ಇದು ಸಂತಸದ ವಿಚಾರ. ಕೋಮು ಗಲಭೆಗಳು ಆಗಿಲ್ಲ. ಎಲ್ಲಾ ರೀತಿಯಲ್ಲಿಯೂ ಉತ್ತಮ ಕೆಲಸ ನಿರ್ವಹಿಸಲಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಅಲೋಕ್ ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು. ಗಂಭೀರವಾದ ಸಮಸ್ಯೆ ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಇಲ್ಲ. ಕಾನೂನು ಮತ್ತು ಸುವ್ಯವಸ್ಥೆ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಹಂಚಿಕೊಂಡಿದ್ದೇನೆ ಎಂದರು.