ದಾವಣಗೆರೆ ಮುಸ್ಲಿಂ ಚಿಂತಕರ ಚಾವಡಿಯಲ್ಲಿ ಮೇಲ್ಜಾತಿ ಮೇಲೆ ಕಿಡಿ
ದಾವಣಗೆರೆ, ಆಗಸ್ಟ್ 08 : ಬಹುಸಂಖ್ಯಾತ ಕೆಳಸಮುದಾಯಗಳು ಸಹಬಾಳ್ವೆಯ ಮೂಲಕ ಭಾರತೀಯ ಪರಂಪರೆಗೆ ಮೌಲ್ಯ ತರುತ್ತಿದ್ದರೂ, ಮೇಲ್ಜಾತಿಯ ಸಮುದಾಯಗಳು ಕೂಡುದುಡಿಮೆಯ ಪರಂಪರೆಯ ಮೇಲೆ ಹಲ್ಲೆ ನಡೆಸುತ್ತಿವೆ ಎಂದು ದಾವಣಗೆರೆಯ 'ಮುಸ್ಲಿಂ ಚಿಂತಕರ ಚಾವಡಿ' ಆರೋಪಿಸಿದೆ.
ಸೋಮವಾರ, ಆಗಸ್ಟ್ 8ರಂದು ದಾವಣಗೆರೆಯಲ್ಲಿ ನಡೆದ ಮುಸ್ಲಿಂ ಚಿಂತಕರ ಚಾವಡಿಯ ಪ್ರಥಮ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ, ಗುಜರಾತ್ ಸೇರಿದಂತೆ ದೇಶವ್ಯಾಪಿಯಾಗಿ ದಲಿತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ತೀವ್ರವಾಗಿ ಖಂಡಿಸಲಾಯಿತು.

ಈ ಮೇಲ್ಜಾತಿಯ ಸಮುದಾಯಗಳು ಸಂಸ್ಕೃತಿ, ಧರ್ಮ, ದೇವರುಗಳ ಹೆಸರಿನಲ್ಲಿ ರಾಜಕೀಯದಾಟ ಆಡುತ್ತಿವೆ, ಗೋರಕ್ಷಣೆಯ ಹೆಸರಿನಲ್ಲಿ ದಲಿತರು ಮತ್ತು ಮುಸ್ಲಿಂ ಮೇಲಿನ ದಬ್ಬಾಳಿಕೆಯೂ ಒಂದು. ಮೇಲ್ಜಾತಿಯ ಆಹಾರ ಪದ್ಧತಿಯನ್ನು ಬಹುಸಂಖ್ಯಾತರ ಮೇಲೆ ಹೇರುವ ಮತೀಯವಾದಿ ಹುನ್ನಾರದ ವಾಸನೆ ಬಡಿಯುತ್ತಿದೆ ಎಂದು ಆರೋಪಿಸಿತು.[ನನ್ನನ್ನು ಶೂಟ್ ಮಾಡ್ತೀರಾ ಮಾಡಿ, ಆದ್ರೆ ದಲಿತರನ್ನಲ್ಲ: ಮೋದಿ]
ಹರಿಯಾಣದ ಜಜ್ಝರ್, ಉತ್ತರ ಪ್ರದೇಶದ ದಾದ್ರಿ, ಗುಜರಾತಿನ ಊನಾ, ಕರ್ನಾಟಕದ ಆದಿ ಉಡುಪಿ ಮತ್ತು ಈಚೆಗೆ ಕೊಪ್ಪ ತಾಲೂಕಿನ ಜಯಪುರಗಳಲ್ಲಿ ಹಲ್ಲೆ ಮತ್ತು ಕೊಲೆಗಳು ನಡೆದವು. ಇವು ಅಮಾನುಷ. ದಲಿತರ ಮತ್ತು ಮುಸ್ಲಿಮರ ಮೇಲಿನ ಸಂಘಟಿತ ಕ್ರೌರ್ಯವನ್ನು ಮುಸ್ಲಿಂ ಚಿಂತಕರ ಚಾವಡಿ ಖಂಡಿಸುತ್ತದೆ ಎಂದು ಸಮಿತಿಯ ಅಧ್ಯಕ್ಷ ಪ್ರೊ, ಮುಜಾಫರ್ ಅಸ್ಸಾದಿ ಕಿಡಿಕಾರಿದರು.
ಈ ಹಲ್ಲೆಗಳು ಆಹಾರ ಪದ್ಧತಿ ಸಂಸ್ಕೃತಿ ಹೇರಿಕೆ ಮಾತ್ರವಾಗಿಲ್ಲ. ಭಾರತದ ಬಹುಸಂಖ್ಯಾತ ಚರ್ಮೋದ್ಯಮ, ಕೃಷಿ ಹಾಗೂ ಪಶುಪಾಲನೆಗೆ ಸಂಬಂಧಿಸಿದ ಸಂಗತಿಯೂ ಆಗಿದೆ. ಈ ಗುಂಪುಗಳು ಕೋಟ್ಯಂತರ ಜನರ ಆರ್ಥಿಕತೆಯನ್ನು ನಾಶಮಾಡುತ್ತಿವೆ. ದನದ ಮೇಲಿನ ಮತೀಯವಾದಿಗಳ ಭಕ್ತಿ ರೈತವಿರೋಧಿಯಾಗಿಯೂ ಇದೆ. ಲಕ್ಷಾಂತರ ರೈತರ ಆತ್ಮಹತ್ಯೆಗಳ ಬಗ್ಗೆ ಕಿಂಚಿತ್ತೂ ಸಂಕಟಪಡದ ಈ ಗೋರಕ್ಷಕ' ಸಂಘಟನೆಗಳು, ಪ್ರಾಣಿಯ ಮೇಲೆ ತೋರುತ್ತಿರುವ ಈ ಪ್ರೀತಿ ಹಾಸ್ಯಾಸ್ಪದವಾಗಿದೆ ಎಂದು ವ್ಯಂಗ್ಯವಾಡಿದರು.
ಊನಾದಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಭಾರತದ ಚರಿತ್ರೆ ಮತ್ತು ವರ್ತಮಾನಕ್ಕೆ ಅಂಟಿದ ಕಳಂಕ. ಈ ಹಲ್ಲೆಗಳ ಬಳಿಕ ದಲಿತರು ತೋರಿರುವ ಪ್ರತಿರೋಧವು, ಈ ತನಕ ಭಾರತದ ಬೇರೆಬೇರೆ ಸಮುದಾಯಗಳು ಈತನಕ ಮೂಕವಾಗಿ ಸವೆಸಿದ ಹಿಂಸೆ ಮತ್ತು ನೋವಿಗೆ ಹೊಸ ತಿರುವನ್ನು ನೀಡಿದೆ. ಮನುಷ್ಯ ವಿರೋಧಿ ಮತೀಯ ರಾಜಕಾರಣಕ್ಕೆ ತಕ್ಕ ತಿರುಗೇಟು ನೀಡಿದೆ ಎಂದು ಸಮಿತಿ ಆಕ್ರೋಶ ಪಡಿಸಿದೆ.
ಕಾರ್ಯಕಾರಿ ಸಭೆಯಲ್ಲಿ ಮಾರ್ಗದರ್ಶಕ ಮಂಡಳಿಯ ಪ್ರಮುಖರಾದ ಫ್ರೊ, ರಹಮತ್ ತರೀಕೆರೆ, ಡಾ. ರಮ್ಜಾನ್ ದರ್ಗಾ, ಹಿರಿಯ ಸಾಹಿತಿ ಭಾನು ಮುಸ್ತಾಕ್, ಅಬ್ದುಸ್ಸಲಾಂ ಪುತ್ತಿಗೆ ಉಪಸ್ಥಿತರಿದ್ದರು.












Click it and Unblock the Notifications