ರಿಸರ್ವ್ ಬೆಟಾಲಿಯನ್ ಗೆ ಸಂಸದ ಸಿದ್ದೇಶ್ವರರಿಂದ ಮನವಿ
ನವದೆಹಲಿ/ದಾವಣಗೆರೆ, ಡಿಸೆಂಬರ್ 19 : ದಾವಣಗೆರೆಯಲ್ಲಿ ಇಂಡಿಯಾ ರಿಸರ್ವ್ ಬೆಟಾಲಿಯನ್ ಸ್ಥಾಪನೆಗೆ ಮಂಜೂರಾತಿ
ನೀಡಬೇಕು ಎಂದು ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಲಿಖಿತ ರೂಪದಲ್ಲಿ ಮನವಿ ಪತ್ರ ಸಲ್ಲಿಸಿದ್ದಾರೆ.
ದಾವಣಗೆರೆ ಕರ್ನಾಟಕ ರಾಜ್ಯದ ಮಧ್ಯಭಾಗದಲ್ಲಿದೆ. ರಾಷ್ಟ್ರೀಯ ಹೆದ್ದಾರಿ - 4 ಜಿಲ್ಲೆಯಲ್ಲಿ ಹಾದು ಹೋಗುತ್ತದೆ. ಜಿಲ್ಲೆಯ ದಾವಣಗೆರೆ, ಹರಿಹರ ಹಾಗೂ ಹೊನ್ನಾಳಿ ತಾಲ್ಲೂಕುಗಳು ಸೂಕ್ಷ್ಮ ಪ್ರದೇಶಗಳಾಗಿದ್ದು, ಇಲ್ಲಿ ಕೋಮು-ಗಲಭೆಗಳು ನಡೆದಿವೆ. ಇತ್ತೀಚಿನ ದಿನಗಳಲ್ಲಿ ಉಗ್ರವಾದಿ ಸಂಘಟನೆಗಳು ಸಕ್ರಿಯವಾಗಿರುವುದೂ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ರಿಸರ್ವ್ ಬೆಟಾಲಿಯನ್ ಅಗತ್ಯವಿದೆ ಎಂದು ಸಚಿವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಸಿದ್ದೇಶ್ವರ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಮೀಸಲು ಪಡೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ರಾಜ್ಯದಲ್ಲಿ ಪ್ರಸಕ್ತ 11 ಕೆ.ಎಸ್.ಆರ್.ಪಿ. ಬೆಟಾಲಿಯನ್ಗಳಿವೆ. ಆದರೆ, ಶಾಂತಿ ಕಾಯ್ದುಕೊಳ್ಳಲು, ನಕ್ಸಲ್ ಮತ್ತು ಉಗ್ರವಾದಿ ಚಟುವಟಿಕೆಗಳನ್ನು ಹತ್ತಿಕ್ಕಲು ಇವು ಸಾಲದು. ಹೀಗಾಗಿ ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಇಂಡಿಯಾ ರಿಸರ್ವ್ ಬೆಟಾಲಿಯನ್ ಸ್ಥಾಪಿಸಬೇಕೆಂದು ಸಿದ್ದೇಶ್ವರ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯಕ್ಕೆ ಹೆಚ್ಚುವರಿ ಮೂರು ಇಂಡಿಯಾ ರಿಸರ್ವ್ ಬೆಟಾಲಿಯನ್ ಗಳನ್ನು ಮಂಜೂರು ಮಾಡುವಂತೆ ಕಳೆದ ಹಲವಾರು ವರ್ಷಗಳಿಂದ ರಾಜ್ಯ ಸರ್ಕಾರ, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಾ ಬಂದಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮ ತಗೆದುಕೊಳ್ಳಬೇಕು. ದಾವಣಗೆರೆ ಹಾಗೂ ತುಮಕೂರುಗಳಲ್ಲಿ ಇಂಡಿಯಾ ರಿಸರ್ವ್ ಬೆಟಾಲಿಯನ್ ಗಳನ್ನು ಸ್ಥಾಪಿಸುವ ಜೊತೆಗೆ ಅದಕ್ಕೆ ಅಗತ್ಯವಾದ ಸಂಪನ್ಮೂಲ ಒದಗಿಸಬೇಕೆಂದು ಕೋರಿದ್ದಾರೆ.












Click it and Unblock the Notifications