ವರುಣನ ಆರ್ಭಟಕ್ಕೆ ತುಂಬಿದ ಕೆರೆಗಳು: ಕೋಡಿಬಿದ್ದ ನೀರಿನಲ್ಲಿ ಮುಳುಗಿದ ಬೆಳೆಗಳು, ರೈತರ ಗೋಳು
ದಾವಣಗೆರೆ, ಅಕ್ಟೋಬರ್ 13: ಜಿಲ್ಲೆಯಾದ್ಯಂತ ಎಡೆಬಿಡದೇ ಸುರಿಯುತ್ತಿರುವ ವರ್ಷಧಾರೆಯಿಂದ ಬಹುತೇಕ ಕೆರೆಗಳು ಭರ್ತಿಯಾಗಿವೆ. ಆದ್ರೆ ಕೋಡಿ ಬಿದ್ದ ಪರಿಣಾಮ ಬೆಳೆದ ಬೆಳೆಗಳು ನೀರಿನಲ್ಲಿ ನಿಂತಿವೆ. 40 ವರ್ಷಗಳಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ರುದ್ರನರ್ತನ ತೋರಿರುವ ವರುಣನ ಆರ್ಭಟಕ್ಕೆ ಜನರು ಬೆಚ್ಚಿಬೀಳುವ ಜೊತೆಗೆ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಮಳೆ ಹೊಡೆತಕ್ಕೆ 60ಕ್ಕೂ ಹೆಚ್ಚು ಮನೆಗಳು ಒಂದೇ ದಿನದಲ್ಲಿ ಕುಸಿದು ಬಿದ್ದಿವೆ.
ಕಳೆದ ನಾಲ್ಕು ದಶಕಗಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಈ ರೀತಿಯ ಆರ್ಭಟ ಕಂಡು ಬಂದಿರಲಿಲ್ಲ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅನೇಕ ಕೆರೆಗಳು ಮೈದುಂಬಿವೆ. ಆದ್ರೆ ಮೆಕ್ಕೆಜೋಳ, ಸೂರ್ಯಕಾಂತಿ, ರಾಗಿ, ಅಡಿಕೆ, ಈರುಳ್ಳಿ ಜಮೀನುಗಳಲ್ಲಿ ನೀರು ನಿಂತಿದೆ.
ಜಗಳೂರು ತಾಲೂಕು ರಾಜ್ಯದಲ್ಲಿಯೇ ಅತ್ಯಂತ ಬರಪೀಡಿತ ತಾಲೂಕಾಗಿತ್ತು. ಮಳೆ ಇಲ್ಲದೇ ರೈತರು ಅನುಭವಿಸಿದ್ದ ಸಂಕಷ್ಟ ದೇವರೇ ಬಲ್ಲ. ಆದ್ರೆ ದಶಕಗಳಿಂದ ಹೆಚ್ಚಿನ ಮಳೆಯಾಗದ ಕಾರಣ ಬತ್ತಿ ಹೋಗಿದ್ದ ಕೆರೆಗಳಿಗೆ ಜೀವಕಳೆ ಬಂದಿದೆ. ಕೆರೆಗಳು ತುಂಬಿರುವ ಜೊತೆಗೆ ಅಂತರ್ಜಲ ಮಟ್ಟವೂ ಜಾಸ್ತಿ ಆಗುತ್ತಿದೆ. ಮಳೆ ಇಲ್ಲದೇ ಕೊರಗುತ್ತಿದ್ದ ಜನರು ಮಳೆಯ ರುದ್ರನರ್ತನಕ್ಕೆ ಮತ್ತೆ ಬೆಚ್ಚಿ ಬೀಳುವಂತಾಗಿದೆ.

ಕೋಡಿ ಬಿದ್ದ ಬಹುತೇಕ ಕೆರೆ
ಸೂಳೆಕೆರೆ ಬಳಿಕ ಜಿಲ್ಲೆಯ ಎರಡನೇ ದೊಡ್ಡ ಕೆರಯಾಗಿರುವ ಜಗಳೂರು ತಾಲೂಕಿನ ಸಂಗೇನಹಳ್ಳಿ ಕೆರೆ ತುಂಬಿದೆ. ಸಾವಿರ ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಈ ಕೆರೆಯು ಒಂದೂವರೆ ದಶಕದ ಬಳಿಕ ಕೋಡಿ ಬಿದ್ದಿದೆ. 11 ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರು ನಿರ್ಮಾಣ ಮಾಡಿದ್ದ ಅಸಗೋಡು ಕೆರೆ, ಬಿಳಚೋಡು ಕೆರೆ, ತುಪ್ಪದಹಳ್ಳಿ ಕೆರೆ, ರಸ್ತೆಮಾಚಿಕೆರೆ, ಬಚದರಗೊಳ್ಳ ಕೆರೆ, ಹಿರೇಅರಕೆರೆ, ಮಲೆಮಾಚಿಕೆರೆ, ಮಡ್ರಳ್ಳಿ ಹೊಸಕೆರೆ, ಕೆಳಗೋಟೆ ಕೆರೆ, ರಂಗಯ್ಯನದುರ್ಗ ಕೆರೆ, ಹೊಸಕೆರೆಯ ಕೆರೆ ಸೇರಿದಂತೆ ಎಲ್ಲಾ ಕೆರೆಗಳು ಕೋಡಿ ಬಿದ್ದಿವೆ.

ರಸ್ತೆ ಸಂಚಾರ ಸಂಪೂರ್ಣ ಬಂದ್
ಭರಮಸಾಗರ ಹಾಗೂ ಅಣಜಿ ಕೆರೆ ತುಂಬಿ ತುಪ್ಪದಹಳ್ಳಿ ಕೆರೆಗೆ ನೀರು ಹರಿದುಬರುತ್ತಿದೆ. ತುಪ್ಪದಹಳ್ಳಿ ಕೆರೆಯು ತುಂಬಿ ಹರಿಯುತ್ತಿರುವುದರಿಂದ ಸೊಕ್ಕೆ - ಅಣಜಿ ನಡುವಿನ ರಸ್ತೆ ಸಂಪೂರ್ಣ ಬಂದ್ ಆಗಿದೆ. ಇನ್ನು 670 ಕೋಟಿ ರೂಪಾಯಿ ವೆಚ್ಚದಲ್ಲಿ 57 ಕೆರೆಗಳ ತುಂಬಿಸುವ ಯೋಜನೆಯಡಿ ತುಪ್ಪದಹಳ್ಳಿ ಕೆರೆಗೆ ಮಾತ್ರ ಪೈಪ್ ಲೈನ್ ಅಳವಡಿಸುವ ಕೆಲಸ ಪೂರ್ತಿಯಾಗಿದೆ. ಉಳಿದ ಕೆಲಸ ನಡೆಯುತ್ತಿದೆ. ಮೂವತ್ತು ವರ್ಷಗಳಲ್ಲಿ ಐತಿಹಾಸಿಕ ಜಗಳೂರು ಕೆರೆಗೆ ಶೇಕಡಾ 60ರಷ್ಟು ನೀರು ಹರಿದು ಬಂದಿದೆ. ಜಿಲ್ಲಾ ಪಂಚಾಯಿತಿ ಹಾಗೂ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೊಳಪಡುವ 15ಕ್ಕೂ ಹೆಚ್ಚು ಕೆರೆಗಳು ತುಂಬಿ ತುಳುಕುತ್ತಿವೆ.

60ಕ್ಕೂ ಹೆಚ್ಚು ಮನೆಗಳಿಗೆ ಹಾನಿ
ಜಿಲ್ಲೆಯಲ್ಲಿ ಕಳೆದ ಒಂದು ದಿನದಲ್ಲಿ ಸುರಿದ ಮಳೆಗೆ 60ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ದಾವಣಗೆರೆ ತಾಲೂಕಿನ ಹಳೇಚಿಕ್ಕನಹಳ್ಳಿ ಗ್ರಾಮದಲ್ಲಿ ಗುಡಿಸಲುಗಳಿಗೆ ನೀರು ನುಗ್ಗಿದೆ. ದಾವಣಗೆರೆ ವ್ಯಾಪ್ತಿಯಲ್ಲಿ 15, ಹರಿಹರದಲ್ಲಿ 8, ಹೊನ್ನಾಳಿಯಲ್ಲಿ 5, ಜಗಳೂರಿನಲ್ಲಿ 13, ನ್ಯಾಮತಿಯಲ್ಲಿ 19 ಮನೆಗಳು ಹಾನಿಗೀಡಾಗಿವೆ. ಮಳೆಯಿಂದಾಗಿ ಚಿಕ್ಕಬೂದಿಹಾಳು ಗ್ರಾಮದ ಮೀನಾಕ್ಷಮ್ಮ ಎಂಬುವರ ಮನೆಗೆ ನೀರುನುಗ್ಗಿ ದವಸಧಾನ್ಯಗಳು ನೀರುಪಾಲಾಗಿವೆ.

ಚನ್ನಗಿರಿ ತಾಲೂಕಿನಲ್ಲೂ ಮಳೆ ಅಬ್ಬರ
ದಾವಣಗೆರೆ ನಗರದ ಎಪಿಎಂಸಿ ಎತ್ತಿನ ಸಂತೆ ಸಮೀಪದ ಹಳೇಚಿಕ್ಕನಹಳ್ಳಿಯ ಗುಡಿಸಲುಗಳಿಗೆ ನೀರು ನುಗ್ಗಿ, ನಿವಾಸಿಗಳು ಪರದಾಡುವಂತಾಯಿತು. ಕಾಳಜಿ ಕೇಂದ್ರದಲ್ಲಿ ನಿವಾಸಿಗಳಿಗೆ ಆಶ್ರಯ ಕಲ್ಪಿಸಲಾಗಿದೆ.
ಇನ್ನು ಚನ್ನಗಿರಿ ತಾಲೂಕಿನ ಸಂತೇವೆನ್ನೂರಿನ ದುರ್ಗಾಂಬಿಕಾ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದ್ದು, ಜನರ ಪರದಾಟ ಹೇಳತೀರದ್ದಾಗಿದೆ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ಮುಂದೆ ಹೋಗುತ್ತಿಲ್ಲ. ಗ್ರಾಮ ಪಂಚಾಯತಿ ಗಮನಕ್ಕೆ ತಂದಿದ್ದರೂ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.












Click it and Unblock the Notifications