ತಡರಾತ್ರಿ ರೇಣುಕಾಚಾರ್ಯ ತೋರಿದ ಸಮಯ ಪ್ರಜ್ಞೆ: ಉಳಿಯಿತು 20 ಜನರ ಪ್ರಾಣ
ದಾವಣಗೆರೆ, ಮೇ 13: ಇನ್ನೇನು ಕೇವಲ ಮೂರು ಗಂಟೆಗೆ ಬೇಕಾಗುವಷ್ಟು ಮಾತ್ರ ಆಕ್ಸಿಜನ್ ಆಸ್ಪತ್ರೆಯಲ್ಲಿ ಉಳಿದಿತ್ತು. ಸಕಾಲದಲ್ಲಿ ಆಮ್ಲಜನಕ ಸಪ್ಲೈ ಆಗದೇ ಇದ್ದಲ್ಲಿ ಇಪ್ಪತ್ತು ಕೊರೊನಾ ಸೋಂಕಿತ ರೋಗಿಗಳ ಪ್ರಾಣಕ್ಕೆ ತೊಂದರೆಯಾಗುತ್ತಿತ್ತು.
Recommended Video
ಆ ವೇಳೆ, ಪಿಪಿಇ ಕಿಟ್ ಧರಿಸಿ ಹೊನ್ನಾಳಿ ಆಸ್ಪತ್ರೆಯ ವಾರ್ಡ್ ಭೇಟಿಗೆ ಬಂದಿದ್ದ ಎಂ.ಪಿ.ರೇಣುಕಾಚಾರ್ಯ ಅವರಿಗೆ ಆಕ್ಸಿಜನ್ ಕೊರತೆಯ ಮಾಹಿತಿ ಲಭ್ಯವಾಗಿದೆ. ವೈದ್ಯರ ಜೊತೆ ಚರ್ಚಿಸಿದ ರೇಣುಕಾಚಾರ್ಯ ಆಕ್ಸಿಜನ್ ವ್ಯವಸ್ಥೆ ಮಾಡಲು ತಾವೇ ಖುದ್ದಾಗಿ ಹೊರಟಿದ್ದಾರೆ.
ತಡರಾತಿ ಎರಡು ಗಂಟೆಗೆ ತಮ್ಮದೇ ಕಾರಿನಲ್ಲಿ ಹರಿಹರಕ್ಕೆ ಹೊರಟ ರೇಣುಕಾಚಾರ್ಯ, ಹರಿಹರದ ಸದರನ್ ಗ್ಯಾಸ್ ಲಿಮಿಟೆಡ್ ಮಾಲೀಕರ ಜೊತೆ ಮಾತುಕತೆ ನಡೆಸಿ, ತಮ್ಮದೇ ಕಾರಿನಲ್ಲಿ ಆಕ್ಸಿಜನ್ ಸಿಲಿಂಡರ್ ಹಾಕಿಕೊಂಡು ಆಸ್ಪತ್ರೆಗೆ ತಂದು ಕೊಟ್ಟಿದ್ದಾರೆ.

ಅಷ್ಟೇ ಅಲ್ಲದೇ, ಮತ್ತೆ ಪಿಪಿಇ ಕಿಟ್ ಹಾಕಿಕೊಂಡು ಆಸ್ಪತ್ರೆಯ ವಾರ್ಡಿಗೆ ಭೇಟಿ ನೀಡಿ, ಎಲ್ಲಾ ಇಪ್ಪತ್ತು ರೋಗಿಗಳು ಮತ್ತು ಅವರ ಸಂಬಂಧಿಕರ ಜೊತೆ ಮಾತನಾಡಿ, ಧೈರ್ಯ ತುಂಬುವ ಕೆಲಸವನ್ನು ರೇಣುಕಾಚಾರ್ಯ ಮಾಡಿದ್ದಾರೆ.
ಶಾಸಕರ ಸಮಯ ಪ್ರಜ್ಞೆ ವ್ಯಾಪಕ ಪ್ರಶಂಶೆಗೊಳಗಾಗಿದೆ. ಒಂದು ವೇಳೆ, ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಆಗದೇ ಇದ್ದಲ್ಲಿ, ಚಾಮರಾಜನಗರದಲ್ಲಿ ನಡೆದಂತಹ ದುರಂತ ಎದುರಾಗುವ ಸಾಧ್ಯತೆಯಿತ್ತು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಎಂ.ಪಿ.ರೇಣುಕಾಚಾರ್ಯ, ಹೊನ್ನಾಳಿ ಕ್ಷೇತ್ರದ ವ್ಯಾಪ್ತಿಯ ಆಸ್ಪತ್ರೆಯಲ್ಲಿ ಬೆಳಗ್ಗಿನ ಉಪಾಹಾರದ ವ್ಯವಸ್ಥೆಯನ್ನೂ ಮಾಡುತ್ತಿದ್ದಾರೆ.












Click it and Unblock the Notifications