ಶ್ರೀರಾಮುಲು ಅವರ ಖಾತೆ ಬದಲಾವಣೆ: ಕೆ.ಎಸ್ ಈಶ್ವರಪ್ಪ ಹೇಳಿದ್ದು ಹೀಗೆ
ದಾವಣಗೆರೆ, ಅಕ್ಟೋಬರ್ 12: ರಾಜ್ಯ ಬಿಜೆಪಿ ಸರ್ಕಾರದ ದಿಢೀರ್ ಬೆಳವಣಿಗೆಯಲ್ಲಿ ಸಚಿವ ಸ್ಥಾನ ಬದಲಾವಣೆಯಾಗಿದ್ದು, ಈ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ""ಸಚಿವ ಸ್ಥಾನ ಬದಲಾಯಿಸುವುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರವಾಗಿದೆ. ಸಚಿವ ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆ ಸೂಕ್ತ. ಅಲ್ಲದೇ, ಅವರು ಶೋಷಿತರ ಸೇವೆಗೆ ಸೂಕ್ತ ವ್ಯಕ್ತಿ'' ಎಂದರು.
ಬಿಎಸ್ವೈ ಸಂಪುಟದಲ್ಲಿ ಖಾತೆ ಬದಲಾವಣೆ; ಕಾರಣ ಬಿಚ್ಚಿಟ್ಟ ಡಿಕೆಶಿ!
ಇದೇ ವೇಳೆ ಮಾಜಿ ಸಿಎಂ ಗಳಾದ ಎಚ್.ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಜಾತಿ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಸಚಿವ ಈಶ್ವರಪ್ಪ, ಅವರಿಬ್ಬರೂ ಬರೀ ಜಾತಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಲ್ಲಿ ಇದ್ದರು, ಇಲ್ಲದಿದ್ದರೂ ಮುಸ್ಲಿಂಮರು ಕಾಂಗ್ರೆಸ್ ಗೆ ಮತ ಹಾಕುತ್ತಾರೆ. ಕಾಂಗ್ರೆಸ್ ಅಂದ್ರೆ ಮುಸ್ಲಿಂ, ಹಿಂದೂ ಅಂದ್ರೆ ಬಿಜೆಪಿ ಎಂದರು. ಇನ್ನು ಈ ಸಂದರ್ಭದಲ್ಲಿ ಜಾತಿ ಮಾಡುವ ಸಿದ್ದು ಹಾಗೂ ಕುಮಾರಸ್ವಾಮಿ ಇಬ್ಬರು ಆಯಾ ಜಾತಿಗೆ ಏನು ಸಹಾಯ ಮಾಡಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಶಿರಾ ಹಾಗೂ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಇದೇ ವೇಳೆ ಹೇಳಿದರು. ಈ ಹಿಂದೆ ಬಿಜೆಪಿ ಟಿಕೆಟ್ ಕೊಡಲು ಹೋದರೂ ಅಭ್ಯರ್ಥಿಗಳು ಸಿಗುತ್ತಿರಲಿಲ್ಲ. ಬಿಜೆಪಿಯಿಂದ ಚುನಾವಣೆಗೆ ನಿಂತರೆ ಠೇವಣಿ ಹೋಗುತ್ತದೆ ಎಂದು ಭಯ ಬೀಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ, ಆದಷ್ಟು ಬೇಗ ಅಭ್ಯರ್ಥಿ ಹೆಸರು ಘೋಷಿಸಲಾಗುತ್ತದೆ ಎಂದರು.
Recommended Video
ಇನ್ನು ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಅವರಿಗೆ ಟಿಕೆಟ್ ಕೊಡುವುದು ಸೂಕ್ತ ಎಂದ ಈಶ್ವರಪ್ಪ, ಮುನಿರತ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ನಾವೆಲ್ಲ ಸಚಿವರಾಗಿದ್ದು, ಮುನಿರತ್ನ ಅವರಿಗೆ ಅನ್ಯಾಯ ಆಗಬಾರದು ಎಂದರು.