ಹಜ್ ಯಾತ್ರೆ ಮಾಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿ
ದಾವಣಗೆರೆ, ಅಕ್ಟೋಬರ್ 12: ಅವರೆಲ್ಲ ಕೂಲಿನಾಲಿ ಮಾಡಿ ಜೀವನ ನಡೆಸುತ್ತಿರುವ ಜನ. ಒಂದೊಂದು ರೂಪಾಯನ್ನೂ ಕೂಡಿಟ್ಟು ಪವಿತ್ರ ಹಜ್ ಯಾತ್ರೆಗೆ ಹೋಗಬೇಕು ಎನ್ನುವ ಕನಸು ಕಂಡವರು. ಇನ್ನು ಎರಡು ದಿನಗಳಲ್ಲಿ ಹಜ್ ಯಾತ್ರೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ಆಗಿದ್ದೇ ಬೇರೆ. ಹಜ್ ಯಾತ್ರೆಗೆಂದು ನೂರಾರು ಜನರಿಂದ ತೆಗೆದುಕೊಂಡಿದ್ದ ಹಣವನ್ನು ಲಪಟಾಯಿಸಿ ಏಜೆಂಟ್ ಪರಾರಿಯಾಗಿರುವ ಘಟನೆ ಇಂದು ನಡೆದಿದೆ.
ದಾವಣಗೆರೆಯ ಮದೀನಾ ಸರ್ಕಲ್ ನಲ್ಲಿರುವ ಐಮಾನ್ ಅಸೋಸಿಯೇಟ್ ಎನ್ನುವ ಟ್ರಾವೆಲ್ ಏಜೆನ್ಸಿಯಲ್ಲಿ, ಹಜ್ ಯಾತ್ರೆ ನೆಪದಲ್ಲಿ ನೂರಾರು ಜನರಿಂದ ಹಣ ಪೀಕಲಾಗಿದೆ. ಜನರಿಂದ ಸಂಗ್ರಹಿಸಿದ್ದ ಕೋಟ್ಯಂತರ ರೂಪಾಯಿ ಲಪಟಾಯಿಸಿ ಈಗ ಕಚೇರಿಗೆ ಬೀಗ ಹಾಕಿಕೊಂಡು ಏಜೆನ್ಸಿಯ ಟ್ರಾವೆಲಿಂಗ್ ಏಜೆಂಟ್ ಸೈಯದ್ ಸಾಧಿಕ್ ಪರಾರಿಯಾಗಿದ್ದಾನೆ.
ದಾವಣಗೆರೆಯಿಂದ ಇದೇ 13ರಂದು ಭಾನುವಾರ 15 ದಿನಗಳ ಕಾಲ ಹಜ್ ಯಾತ್ರೆಗೆಂದು 130ಕ್ಕೂ ಹೆಚ್ಚು ಜನರ ಬಳಿ ಹಣ ಸಂಗ್ರಹಿಸಲಾಗಿತ್ತು. ಒಬ್ಬೊಬ್ಬರ ಬಳಿ ಮೊದಲಿಗೆ 60 ಸಾವಿರದಂತೆ ಹಣ ಪಡೆದು ನಂತರ ಸೌದಿ ಅರೇಬಿಯಾದ ಸರ್ಕಾರ ತೆರಿಗೆ ಹೆಚ್ಚಿಸಿದೆ ಎಂದು ಹೇಳಿ ಮತ್ತೆ 12 ಸಾವಿರ ಸಂಗ್ರಹಿಸಿದ್ದಲ್ಲದೆ ಪಾಸ್ ಪೋರ್ಟ್ ಅನ್ನು ಸಹ ತನ್ನ ಬಳಿ ತೆಗೆದುಕೊಂಡಿದ್ದಾನೆ. ಇಂದು ವಿಮಾನದ ಟಿಕೆಟ್ ಹಾಗೂ ಪಾಸ್ ಪೋರ್ಟ್ ತೆಗೆದುಕೊಂಡು ಬರಲು ಟ್ರಾವೆಲ್ಸ್ ಏಜೆನ್ಸಿ ಕಚೇರಿ ಬಳಿ ಜನರು ಹೋದರೆ, ಕಚೇರಿ ಖಾಲಿಯಾಗಿರುವುದು ಕಂಡುಬಂದಿದೆ.

ಹಜ್ ಯಾತ್ರೆಗೆ ಕಡಿಮೆ ಖರ್ಚಿನಲ್ಲಿ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ ಸೈಯದ್ ಸಾಧಿಕ್ ಬೆಂಗಳೂರಿನಲ್ಲಿ ಸಭೆ ಮಾಡಿ ನಂಬಿಸಿದ್ದ. ಆ ಮಾತುಗಳನ್ನು ನಂಬಿ ಜನರು ತಾವು ಕೂಡಿಸಿಟ್ಟ ಹಣವನ್ನು ಸೈಯದ್ ಸಾಧಿಕ್ ಕೈಗೆ ಕೊಟ್ಟಿದ್ದರು. ಆದರೆ ಈಗ ಹಜ್ ಯಾತ್ರೆಯೂ ಇಲ್ಲ, ತಾವು ದುಡಿದು ಕೂಡಿಸಿಟ್ಟ ಹಣವೂ ಇಲ್ಲ ಎಂಬಂತಾಗಿದೆ. ಮೋಸ ಹೋದವರು ಈಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.












Click it and Unblock the Notifications