ದಾವಣಗೆರೆ: ಉಸಿರುಗಟ್ಟಿಸಿ ಅವಳಿ ಮಕ್ಕಳನ್ನು ಕೊಂದ ಪಾಪಿ ತಂದೆ ಕೊಟ್ಟ ಕಾರಣವೇನು ಗೊತ್ತಾ?
ದಾವಣಗೆರೆ, ಜೂನ್ 1: ಮಕ್ಕಳು ಅಂದರೆ ಎಲ್ಲರಿಗೂ ಪಂಚಪ್ರಾಣ. ಮಕ್ಕಳಾಗಿಲ್ಲ ಎಂಬ ಕೊರಗು ಎಷ್ಟೋ ದಂಪತಿಗೆ ಈಗಲೂ ಕಾಡುತ್ತಿದೆ. ಆದರೆ, ಇಲ್ಲೊಬ್ಬ ಪಾಪಿ ತಂದೆ ಮುದ್ದಾದ ಎರಡು ಮಕ್ಕಳನ್ನು ಕೊಂದು ಹಾಕಿರುವ ಘಟನೆ ನಗರದ ಹೊರವಲಯದ ಚಳಗೇರಿ ಟೋಲ್ ಹತ್ತಿರ ನಡೆದಿದೆ.
ನಾಲ್ಕು ವರ್ಷದ ನಾಲ್ಕು ತಿಂಗಳ ಮಕ್ಕಳಾದ ಅದ್ವೈತ್ ಮತ್ತು ಅನ್ವಿತ್ ಅವಳಿ ಮಕ್ಕಳೇ ತಂದೆಯಿಂದಲೇ ಹತ್ಯೆಗೀಡಾದ ಪುಟಾಣಿಗಳು. ದಾವಣಗೆರೆ ನಗರದ ಆಂಜನೇಯ ಬಡಾವಣೆ ವಾಸಿ ಅಮರ್ (36) ಮಕ್ಕಳನ್ನು ಕೊಂದು ಹಾಕಿದ ನಿಷ್ಕರುಣಿ ತಂದೆ ಎಂದು ಗುರುತಿಸಲಾಗಿದೆ.

ಈತ ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದವನು. ಹರಿಹರದ ಕಾರ್ಗಿಲ್ ಫ್ಯಾಕ್ಟರಿಯಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಕೆಲಸ ಮಾಡುತ್ತಿದ್ದ. ಈತ ವಿಜಯಪುರದ ಜಯಲಕ್ಷ್ಮಿ ಎಂಬಾಕೆಯನ್ನು ಕಳೆದ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ವಿಜಯಲಕ್ಷ್ಮಿ ಮತ್ತು ಅಮರ್ ದಂಪತಿಗೆ ಕಳೆದ ನಾಲ್ಕು ವರ್ಷ ನಾಲ್ಕು ತಿಂಗಳ ಹಿಂದೆ ಅವಳಿ ಗಂಡು ಮಕ್ಕಳ ಜನನವಾಗಿತ್ತು. ಅದ್ವೈತ್ ಮತ್ತು ಅನ್ವಿತ್ ಎಂಬ ಹೆಸರಿಟ್ಟಿದ್ದರು. ಕುಟುಂಬದಲ್ಲಿ ಅಂಥಹ ಬಿರುಕು ಏನು ಇರಲಿಲ್ಲ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ವಿಜಯಲಕ್ಷ್ಮಿ ವಿಜಯಪುರಕ್ಕೆ ಮಕ್ಕಳು ಹಾಗೂ ಪತಿ ಬಿಟ್ಟು ಯಾವುದೋ ಕಾರಣಕ್ಕೆ ಹೋಗಿದ್ದರು. ಆಗಿನಿಂದ ಸ್ವಲ್ಪ ವಿರಸ ಉಂಟಾಗಿತ್ತು. ಮಕ್ಕಳು ಅಮರ್ ತಾಯಿ ಸಾವಿತ್ರಮ್ಮರ ಜೊತೆ ಇದ್ದರು. ಆದರೆ ನಿನ್ನೆ ರಾತ್ರಿ 10.30ರ ಸುಮಾರಿಗೆ ತನ್ನ ಕಾರಿನಲ್ಲಿ ಅದ್ವೈತ್ ಮತ್ತು ಅನ್ವಿತ್ ನನ್ನು ಕರೆದುಕೊಂಡು ಹೋಗಿದ್ದಾನೆ. ಮಕ್ಕಳನ್ನು ಕೊಲೆ ಮಾಡುವುದಾಗಿ ಪತ್ನಿಗೆ ಕರೆ ಮಾಡಿ ಬೆದರಿಸಿದ್ದಾನೆ. ಆ ಆದರೆ ಬೆಳಗಿನ ಜಾವ ಚಳಗೇರಿ ಟೋಲ್ ಸಮೀಪ ಕರೆದುಕೊಂಡು ಹೋಗಿ ಸರ್ವಿಸ್ ರಸ್ತೆಯಲ್ಲಿ ಕಾರು ನಿಲ್ಲಿಸಿ ಮಕ್ಕಳಿಬ್ಬರಿಗೂ ಟಿಕ್ಸೋ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಆ ನಂತರ ಪತ್ನಿಗೆ ಫೋನ್ ಮಾಡಿ ಮಕ್ಕಳನ್ನು ಕೊಂದು ಹಾಕಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ಪೊಲೀಸರಿಗೆ ವಿಷಯ ತಿಳಿಯುತ್ತಿದ್ದಂತೆ ಅಮರ್ ಬಂಧನಕ್ಕೆ ಬಲೆ ಬೀಸಿದ್ದಾರೆ. ಆತನ ಮೊಬೈಲ್ ಲೊಕೇಷನ್ ಆಧರಿಸಿ ಪತ್ತೆ ಹಚ್ಚಿದ್ದಾರೆ. ಬಳಿಕ ವಿಚಾರಣೆ ವೇಳೆ ಮಕ್ಕಳು ಸ್ವಲ್ಪ ಬುದ್ದಿಮಾಂದ್ಯರಾಗಿದ್ದು, ಹಠ ಮಾಡುತ್ತಿದ್ದರು. ಇದನ್ನು ಸಹಿಸಿಕೊಳ್ಳಲಾಗದೇ ಉಸಿರುಗಟ್ಟಿಸಿ ಕೊಂದು ಹಾಕಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಯನ್ನು ಈ ಸಂಬಂಧ ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರಿದಿದೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹತ್ಯೆಗೆ ಬೇರೆ ಏನಾದರೂ ಕಾರಣ ಇರಬಹುದಾ ಎಂಬ ಕುರಿತಂತೆಯೂ ತನಿಖೆ ಮುಂದುವರಿದಿದೆ.












Click it and Unblock the Notifications