ಕಾನೂನು ಎಲ್ಲ ಪಕ್ಷಕ್ಕೂ ಒಂದೇ; ಡಿಕೆಶಿ ಬಗ್ಗೆ ಸಿಸಿ ಪಾಟೀಲ್ ಹೇಳಿದ್ದೇನು?
ದಾವಣಗೆರೆ, ಆಗಸ್ಟ್ 30: "ಕಾನೂನು ಎಲ್ಲಾ ಪಕ್ಷಕ್ಕೂ ಒಂದೇ, ಡಿ.ಕೆ.ಶಿವಕುಮಾರ್ ಗೆ ಒಂದು ಕಾನೂನು, ಬೇರೆಯವರಿಗೆ ಒಂದು ಕಾನೂನು ಇಲ್ಲ" ಎಂದು ದಾವಣಗೆರೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿಸಿ ಪಾಟೀಲ್ ಕಾಂಗ್ರೆಸ್ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ.
ದಾವಣಗೆರೆಯ ಹರಿಹರ ತಾಲ್ಲೂಕಿನ ಬಳಿ ಇರುವ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಭೇಟಿ ನೀಡಿದ ಅವರು, ಪೀಠದ ಗುರುಗಳಾದ ವಚನಾನಂದ ಶ್ರೀಗಳ ಆರ್ಶಿರ್ವಾದ ಪಡೆದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಕಾಂಗ್ರೆಸ್ ನವರು ಕೇವಲ ಆರೋಪ ಮಾಡುತ್ತಿದ್ದಾರೆ. ಇಡಿ ಹಾಗೂ ಐಟಿ ದಾಳಿಯನ್ನು ಕೇಂದ್ರ ಸರ್ಕಾರ, ಕಾಂಗ್ರೆಸ್ ನಾಯಕರ ಮೇಲೆ ನಡೆಸುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ ಕಾನೂನಿನ ಮುಂದೆ ಎಲ್ಲರೂ ಒಂದೇ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತೆ. ಅದು ಕಾಂಗ್ರೆಸ್ ಆಗಿರಲಿ, ಬಿಜೆಪಿ ಆಗಿರಲಿ" ಎಂದರು.

"ಯಡಿಯೂರಪ್ಪನವರಿಗೆ ರಾಜಕೀಯ ಅನುಭವ ಸಾಕಷ್ಟಿದೆ. ಅವರು ಸರಿಯಾಗಿ ಅಡಳಿತ ಮಾಡಿಕೊಂಡು ಹೋಗುತ್ತಾರೆ. ಈಗ ಪಕ್ಷದಲ್ಲಿ ಏನಾದರು ಸಮಸ್ಯೆ ಇದ್ದರೆ ಅದನ್ನು ವರಿಷ್ಠರು, ಯಡಿಯೂರಪ್ಪ ಬಗೆಹರಿಸುತ್ತಾರೆ. ಸರ್ಕಾರ ಯಶಸ್ವಿಯಾಗಿ ನಡೆಯುತ್ತೆ" ಎಂದು ಹೇಳಿದರು.
"ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ನಾನು ಕಮೆಂಟ್ ಮಾಡಲ್ಲ. ಹಿಂದಿನ ಮುಖ್ಯಮಂತ್ರಿಗೂ ಈಗಿನ ಮುಖ್ಯಮಂತ್ರಿಗೂ ವ್ಯತ್ಯಾಸ ಏನು ಎಂಬುದನ್ನು ಜನರು ನೋಡುತ್ತಾರೆ. ಅಲ್ಲದೇ ಸರ್ಕಾರ ಮೇಲೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೆ" ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಭಾಗದ ಶಾಸಕರ ಸಭೆ ಕರೆದು, ಇಲಾಖೆಗೆ ಹೊಸ ಕಾಯಕಲ್ಪ ನೀಡುವ ಕುರಿತೂ ಮಾತನಾಡಿದರು. ಮರಳು ನೀತಿ ಸಮಗ್ರ ಮಾಹಿತಿ ಪಡೆದು, ಅಕ್ರಮ ಮರಳು ಗಣಿಗಾರಿಕೆಯನ್ನು ಸಂಪೂರ್ಣ ತಡೆಯುವುದರ ಜೊತೆಗೆ ಜನರಿಗೆ ಸಮರ್ಪಕ ಮರಳು ಪೂರೈಕೆ ಮಾಡುವ ಕುರಿತು ಮಾಹಿತಿ ನೀಡಿದರು.












Click it and Unblock the Notifications