ದಾವಣಗೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಜಾಗ ಹಸ್ತಾಂತರ ವಿಚಾರ; ಡಿಆರ್ಆರ್ ವಿದ್ಯಾರ್ಥಿಗಳ ಆಕ್ರೋಶ
ದಾವಣಗೆರೆ, ಜನವರಿ, 10: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಡಿ.ಆರ್.ಆರ್ ಸರ್ಕಾರಿ ಪಾಲಿಟೆಕ್ನಿಕ್ ಜಾಗವನ್ನು ಹಸ್ತಾಂತರ ಮಾಡಲು ಸರ್ಕಾರ ನಿರ್ಧರಿಸಲಾಗಿದೆ. ಹಾಗೆಯೇ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಜಮೀನು ಹಸ್ತಾಂತರ ವಿರೋಧಿಸಿ ಡಿ.ಆರ್.ಆರ್ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಕಾಲೇಜು ಮುಂಭಾಗದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಹದಡಿ ರಸ್ತೆಯ ಗ್ರಾಮಾಂತರ ಪೊಲೀಸ್ ಠಾಣೆ ಎದುರಿನಲ್ಲಿ ಇರುವ ಡಿ.ಆರ್.ಆರ್ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಯಾವುದೇ ಕಾರಣಕ್ಕೂ ಪಾಲಿಟೆಕ್ನಿಕ್ಗೆ ಸಂಬಂಧಪಟ್ಟ ಜಾಗವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹಸ್ತಾಂತರ ಮಾಡಬಾರದು ಎಂದು ಆಗ್ರಹಿಸಿದರು.
ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ
ಈ ವೇಳೆ ಮಾತನಾಡಿದ ಡಿ.ಆರ್.ಆರ್.ವಿದ್ಯಾರ್ಥಿಗಳ ಸಂಘದ ಪ್ರಮುಖರು, ಸರ್ಕಾರ ಆದೇಶ ನೀಡಿದ ಜಾಗದಲ್ಲಿ ಡಿ.ಆರ್.ಆರ್ ಪಾಲಿಟೆಕ್ನಿಕ್ಗೆ ಸಂಬಂಧಿಸಿದ ಮೆಕ್ಯಾನಿಕಲ್ ವರ್ಕ್ ಶಾಪ್, ಮಹಿಳಾ ವಿದ್ಯಾರ್ಥಿನಿಲಯ ಹಾಗೂ ಆಟದ ಮೈದಾನವಿದೆ. ಆದರೆ, ಈ ಮೈದಾನದಲ್ಲಿ ಕಟ್ಟಡವನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ಅಲ್ಲದೇ ಪಾಲಿಟೆಕ್ನಿಕ್ ಪ್ರಾಚಾರ್ಯರ ಗಮನಕ್ಕೆ ಬಾರದಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧಿಕಾರಿಗಳು ನಮ್ಮ ಸಂಸ್ಥೆಯ ಒಳಗೆ ಅತಿಕ್ರಮಣ ಮಾಡಿ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.

ಹೋರಾಟ ತೀವ್ರಗೊಳಿಸುವ ಎಚ್ಚರಿಕೆ
ದಾವಣಗೆರೆಯ ಡಿ.ಆರ್.ಆರ್ ಪಾಲಿಟೆಕ್ನಿಕ್ ಸಂಸ್ಥೆಯ 3 ಹೆಕ್ಟೇರ್ ಜಮೀನನ್ನು ಸರ್ಕಾರಿ ಕಾಲೇಜಿಗೆ ನೀಡಬೇಕೆನ್ನುವುದು ಏಕಪಕ್ಷೀಯ ನಿರ್ಧಾರವಾಗಿದೆ. ಕೇವಲ ಪಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ನೀಡಿದ ಚೆಕ್ ಬಂದಿ ಆಧಾರದ ಮೇಲೆ ಸರ್ಕಾರ ಈ ಆದೇಶ ನೀಡಿದೆ. ಇದು ಸರಿಯಲ್ಲ ಎಂದು ಕಿಡಿಕಾರಿದರು. ಜಿಲ್ಲಾಧಿಕಾರಿಗಳು, ಇಲ್ಲವೇ ಇದಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಪ್ರಥಮ ದರ್ಜೆ ಕಾಲೇಜಿನವರಿಗೆ ಬೇರೆ ಕಡೆ ಜಾಗ ನೀಡಬೇಕು. ಇಲ್ಲವಾದರೆ ಮುಷ್ಕರ ಕೈ ಬಿಡುವುದಿಲ್ಲ. ಮುಂಬರುವ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಸಂಘದ ಮುಖಂಡರಾದ ಕುರುಬರಹಳ್ಳಿ ನಿಂಗರಾಜ್, ವಿ. ಎಂ. ಸಚಿನ್, ಮಹಾಂತೇಶ್, ಸುಮಂತ್, ಪ್ರಸಾದ್, ಗೌರಿ, ದಿವ್ಯಾ, ಸ್ವಪ್ನ, ಚಿನ್ಮಯ್, ಸನತ್, ವರುಣ್, ದೀಕ್ಷಿತ್ ಸೇರಿದಂತೆ ಮೆಕ್ಯಾನಿಕಲ್, ಸಿವಿಲ್, ಸಿಪಿಕೆ, ಸಿಪಿಇ, ಇ ಅಂಡ್ ಇ, ಇಸಿ, ಸಿಎಸ್ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.












Click it and Unblock the Notifications