ಮಧ್ಯ ಕರ್ನಾಟಕದಲ್ಲಿ ಇಂದು ಅಮಿತ್ ಶಾ ರೋಡ್ ಶೋ
ದಾವಣಗೆರೆ, ಏಪ್ರಿಲ್ 29: ಹೈದರಾಬಾದ್ ಕರ್ನಾಟಕದ ಚುನಾವಣಾ ಪ್ರಚಾರ ಮುಗಿಸಿರುವ ಅಮಿತ್ ಶಾ ಇಂದು ಮಧ್ಯ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ ಶಾ 3 ನೇ ಬಾರಿ ಮಧ್ಯ ಕರ್ನಾಟಕ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಮಧ್ಯ ಕರ್ನಾಟಕದ ಕಾಂಗ್ರೆಸ್ ಪ್ರಾಬಲ್ಯ ಇರುವ ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಇಂದು ಅಮಿತ್ ಶಾ ಪ್ರವಾಸ ಕೈಗೊಳ್ಳಲಿದ್ದು, ಗೆಲುವಿನ ರಣತಂತ್ರ ರೂಪಿಸಲಿದ್ದಾರೆ.
ಬೆಳಗ್ಗೆ 10.40ಕ್ಕೆ ದಾವಣಗೆರೆಯ ನಗರ ದೇವತೆ ದುಗ್ಗಮ್ಮ ದೇವಿಯ ದರ್ಶನ ಪಡೆದು ನಗರದ ಪ್ರಮುಖ ಬೀದಿಗಳಲ್ಲಿ 1 ಗಂಟೆಗಳ ಕಾಲ ಬೃಹತ್ ರೋಡ್ ಶೋ ನಡೆಸುವ ಮೂಲಕ ಕಾಂಗ್ರೆಸ್ ಭದ್ರ ಕೋಟೆಯಲ್ಲಿ ರಣಕಹಳೆ ಮೊಳಗಿಸಲಿದ್ದಾರೆ.

ಅಲ್ಲಿಂದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿಗೆ ತೆರಳಲಿರುವ ಶಾ ಮಧ್ಯಾಹ್ನ 2.30 ಕ್ಕೆ ಬೃಹತ್ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಬಿಜೆಪಿಯ ಕೊಡುಗೆ ಏನು, ಸರ್ಕಾರ ಅಧಿಕಾರಕ್ಕೆ ಬಂದ್ರೆ ಜಿಲ್ಲೆಗೆ ಯಾವೆಲ್ಲ ಯೋಜನೆಗಳನ್ನು ಕೊಡ್ತೇವೆ ಅನ್ನೋದರ ಜೊತೆಗೆ ರಾಜ್ಯ ಸರ್ಕಾರದ ಐದು ವರ್ಷಗಳ ವೈಫಲ್ಯ ಎತ್ತಿ ಹಿಡಿಯಲಿದ್ದಾರೆ.
ಹಿರಿಯೂರು ಬಹಿರಂಗ ಸಭೆ ಬಳಿಕ ತುಮಕೂರಿಗೆ ತೆರಳಲಿರುವ ಷಾ ಎಸ್ಐಟಿ ಮುಖ್ಯ ದ್ವಾರದ ಮೂಲಕ ರೋಡ್ ಶೋ ಆರಂಭಿಸಲಿದ್ದಾರೆ. ನಗರದ ಗಂಗೋತ್ರಿ ರಸ್ತೆ ಮೂಲಕ ತೆರಳುವ ರೋಡ್ ಶೋ ಭೈರವೇಶ್ವರ ಬ್ಯಾಂಕ್ ಬಳಿ ಅಂತ್ಯಗೊಳ್ಳಲಿದೆ. ರೋಡ್ ಶೋ ಬಳಿಕ ಶ್ರೀದೇವಿ ಮೆಡಿಕಲ್ ಕಾಲೇಜು ಆಡಿಟೋರಿಯಂನಲ್ಲಿ ಪ್ರಮುಖ ಪದಾಧಿಕಾರಿಗಳ ಸಂಘಟನಾತ್ಮಕ ಸಭೆ ನಡೆಸಲಿದ್ದಾರೆ..
In Pics:ವಿಜಯಪುರದಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ
ಅಮಿತ್ ಶಾ ಒಂದು ತಿಂಗಳ ಅವಧಿಯಲ್ಲಿ ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ 2ನೇ ಬಾರಿಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಮೂರು ಜಿಲ್ಲೆಗಳಲ್ಲೂ ಕಾಂಗ್ರೆಸ್ ನ ಪ್ರಭಾವಿ ನಾಯಕರಿದ್ದು, ಬಿಜೆಪಿ ನಾಯಕರಿಗೆ ಶಕ್ತಿ ತುಂಬಲು ಶಾ ಮತ್ತು ಮೋದಿ ನಿರಂತರ ಪ್ರವಾಸ ಮಾಡುತ್ತಿದ್ದಾರೆ.
ಕೆಪಿಸಿಸಿ ಖಾಯಂ ಖಜಾಂಚಿ, ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಪ್ರಾಬಲ್ಯದ ದಾವಣಗೆರೆಯಲ್ಲಿ ಸಮಾವೇಶ, ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಕಾರ್ಯಕರ್ತರಿಗೆ ಬೂಸ್ಟ್ ನೀಡಲಿದ್ದಾರೆ.
ಇನ್ನೂ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಟಾಂಗ್ ಕೊಡಲು ಎರಡನೇ ಬಾರಿ ಬಹಿರಂಗ ಸಮಾವೇಶ ನಡೆಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತವರು ಜಿಲ್ಲೆ ತುಮಕೂರಿಗೆ ಶಾ ಎರಡನೇ ಬಾರಿಗೆ ಭೇಟಿ ನೀಡಲಿದ್ದಾರೆ. ತಿಂಗಳ ಹಿಂದೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ಶಾ ಶ್ರೀಗಳ ಆಶೀರ್ವಾದ ಪಡೆದು ನಮಗೆ ರಾಜಕೀಯವಾಗಿ ಶಕ್ತಿ ಬಂದಿದೆ ಅಂತ ಹೇಳಿಕೆ ನೀಡಿದ್ದರು.
ಶಾ ತಂಡ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವುದು ಬಿಜೆಪಿ ನಾಯಕರ ಶಕ್ತಿ ದುಪ್ಪಟ್ಟು ಮಾಡಿದೆ.












Click it and Unblock the Notifications