ಬಿಜೆಪಿ ಜೊತೆಗೆ ಟಿವಿಕೆ ಕೈಜೋಡಿಸುವ ಬಗ್ಗೆ ತಮಿಳುನಾಡಿನಲ್ಲಿ ಬಿಸಿಬಿಸಿ ಚರ್ಚೆ: ವೈರಲ್ ಆಗ್ತಿದೆ ವಿಜಯ್-ಮೋದಿ ಭೇಟಿಯ ಫೋಟೊ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಮತ ಎಣಿಕೆ ಭರದಿಂದ ಸಾಗುತ್ತಿದ್ದು, ಆರಂಭಿಕ ಟ್ರೆಂಡ್ಗಳಲ್ಲಿ ದಳಪತಿ ವಿಜಯ್ ನೇತೃತ್ವದ 'ತಮಿಳಗ ವೆಟ್ರಿಕ ಕಳಗಂ' (TVK) 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಭಾರಿ ಸಂಚಲನ ಮೂಡಿಸಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನಟ ವಿಜಯ್ ಪರಸ್ಪರ ಭೇಟಿಯಾದ ಹಳೆಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, 'ಬಿಜೆಪಿ ಜೊತೆಗೆ ಟಿವಿಕೆ ಕೈಜೋಡಿಸುವ ಬಗ್ಗೆ ತಮಿಳುನಾಡಿನಲ್ಲಿ ಬಿಸಿಬಿಸಿ ಚರ್ಚೆ' ಶುರುವಾಗಿದೆ.
ಆದರೆ, ಚುನಾವಣೆಗೂ ಮುನ್ನ ಉಭಯ ಪಕ್ಷಗಳ ನಾಯಕರು ನಡೆಸಿದ್ದ ಸಾರ್ವಜನಿಕ ವಾಗ್ದಾಳಿಗಳು ಮತ್ತು ಮುರಿದುಬಿದ್ದಿದ್ದ ಮಾತುಕತೆಗಳನ್ನು ಗಮನಿಸಿದರೆ, ಎಐಎಡಿಎಂಕೆ (AIADMK) ಹಾಗೂ ವಿಜಯ್ ಅವರ ಟಿವಿಕೆ ನಡುವಿನ ಯಾವುದೇ ಮೈತ್ರಿಯು ಕೇವಲ ಆಶಾವಾದದ ಬದಲು ಹಳೆಯ ರಾಜಕೀಯ ಕಹಿ ನೆನಪುಗಳ ಮೇಲೆಯೇ ನಿರ್ಮಾಣವಾಗಬೇಕಾದ ಅನಿವಾರ್ಯತೆಯಿದೆ.

ಚುನಾವಣೆಗೆ ಮೊದಲು ಎರಡೂ ಪ್ರಮುಖ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದವು. ಆದರೆ ಈಗ ಫಲಿತಾಂಶ ಬರುತ್ತಿರುವಾಗ, ವಿಜಯ್ ನೇತೃತ್ವದ ಟಿವಿಕೆ ಪಕ್ಷವು ತನ್ನ ಮೊದಲ ಚುನಾವಣೆಯಲ್ಲೇ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮುನ್ಸೂಚನೆ ನೀಡುತ್ತಿದೆ. ಒಂದು ವೇಳೆ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದಿದ್ದರೆ, ಸರ್ಕಾರ ರಚಿಸಲು ಟಿವಿಕೆ ಪಕ್ಷದ ಬೆಂಬಲ ಬೇಕಾಗಬಹುದು. ಈ ಕಾರಣದಿಂದಾಗಿ, ಅನಿವಾರ್ಯವಾಗಿ ಚುನಾವಣೆಯ ನಂತರ ಮೈತ್ರಿ ನಡೆಯಬಹುದು ಎಂಬ ಚರ್ಚೆ ಈಗ ರಾಜಕೀಯ ವಲಯದಲ್ಲಿ ಶುರುವಾಗಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, 2025ರ ಅಂತ್ಯದ ವೇಳೆಗೆ ಎಐಎಡಿಎಂಕೆ ನಾಯಕರು 2026ರ ವಿಧಾನಸಭಾ ಚುನಾವಣೆಗಾಗಿ ವಿಜಯ್ ಅವರ ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ತೆರೆಯ ಹಿಂದೆ ಮಾತುಕತೆ ನಡೆಸಿದ್ದರು. ಆದರೆ, ಟಿವಿಕೆ ವಿಧಿಸಿದ ಕಠಿಣ ಷರತ್ತುಗಳಿಂದಾಗಿ ಈ ಮಾತುಕತೆಗಳು ಮುರಿದುಬಿದ್ದಿದ್ದವು. ಟಿವಿಕೆ ನಾಯಕರು ಮೈತ್ರಿಯ ನಾಯಕತ್ವ, ವಿಜಯ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವುದು ಮತ್ತು ಒಟ್ಟು 234 ವಿಧಾನಸಭಾ ಸ್ಥಾನಗಳಲ್ಲಿ ಬರೋಬ್ಬರಿ ಅರ್ಧದಷ್ಟು ಸ್ಥಾನಗಳನ್ನು ತಮಗೆ ಬಿಟ್ಟುಕೊಡುವಂತೆ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಹಲವು ಬಾರಿ ರಾಜ್ಯವನ್ನಾಳಿದ ಸುದೀರ್ಘ ಇತಿಹಾಸವಿರುವ ಎಐಎಡಿಎಂಕೆ, ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕಿಳಿಯುತ್ತಿರುವ ಹೊಸ ಪಕ್ಷವೊಂದಕ್ಕೆ ಈ ಮಟ್ಟದ ಪ್ರಾಮುಖ್ಯತೆ ನೀಡಲು ಸಿದ್ಧವಿರಲಿಲ್ಲ.
ಮಾತುಕತೆಗಳು ವಿಫಲವಾದ ನಂತರ, ಎಐಎಡಿಎಂಕೆ ಮತ್ತೆ ಬಿಜೆಪಿ ನೇತೃತ್ವದ ಎನ್ಡಿಎ (NDA) ಒಕ್ಕೂಟದತ್ತ ವಾಲಿತು. ಇತ್ತ, ವಿಜಯ್ ತಮ್ಮ ನಿರ್ಧಾರಕ್ಕೆ ಬದ್ಧರಾಗಿ ಎಲ್ಲಾ 234 ಸ್ಥಾನಗಳಲ್ಲೂ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದರು. ಅಲ್ಲಿಂದ ಮುಂದೆ ಉಭಯ ಪಕ್ಷಗಳ ನಡುವಿನ ಸಾರ್ವಜನಿಕ ಬಾಂಧವ್ಯ ಹದಗೆಡುತ್ತಾ ಹೋಯಿತು. ಎಐಎಡಿಎಂಕೆ ಜೊತೆಗಿನ ಮೈತ್ರಿ ವದಂತಿಗಳನ್ನು ಟಿವಿಕೆ ಸತತವಾಗಿ "ಸಂಪೂರ್ಣ ಸುಳ್ಳು" ಎಂದು ತಳ್ಳಿಹಾಕಿ, ತಾನು ಸ್ವತಂತ್ರವಾಗಿ ಹೋರಾಡುವುದಾಗಿ ಸ್ಪಷ್ಟಪಡಿಸಿತು. ಪ್ರಚಾರದ ಕಣದಲ್ಲಿ ವಿಜಯ್ ಅವರ ಭಾಷಣಗಳು ನೇರವಾಗಿ ಆಡಳಿತಾರೂಢ ಡಿಎಂಕೆ ಮತ್ತು ಬಿಜೆಪಿ ವಿರುದ್ಧ ಹರಿಹಾಯುವುದರ ಜೊತೆಗೆ, ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟದಿಂದ ಅಂತರ ಕಾಯ್ದುಕೊಳ್ಳುವ ತಂತ್ರವನ್ನು ಅನುಸರಿಸಿದವು.
ಅದೇ ಹಾದಿ ಹಿಡಿದ ಎಐಎಡಿಎಂಕೆ
ಎಐಎಡಿಎಂಕೆ ನಾಯಕರು ಕೂಡ ಅದೇ ಹಾದಿಯನ್ನು ಹಿಡಿದರು. ಮಾರ್ಚ್ 2026ರಲ್ಲಿ, ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ವಿಜಯ್ ನೇತೃತ್ವದ ಟಿವಿಕೆ ಜೊತೆಗಿನ ಯಾವುದೇ ಮೈತ್ರಿಯನ್ನು ಸಾರ್ವಜನಿಕವಾಗಿ ತಳ್ಳಿಹಾಕಿ, ಆ ಬಗ್ಗೆ ಹರಿದಾಡುತ್ತಿದ್ದ ಸುದ್ದಿಗಳು ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಹೇಳಿದ್ದರು. ಆ ನಂತರದ ವಾರಗಳಲ್ಲಿ ಎರಡೂ ಪಕ್ಷಗಳ ನಾಯಕರ ನಡುವೆ ನಡೆದ ಬಹಿರಂಗ ವಾಗ್ದಾಳಿಗಳು, ಚುನಾವಣಾ ಪೂರ್ವ ಮೈತ್ರಿಯ ಬಾಗಿಲು ಶಾಶ್ವತವಾಗಿ ಮುಚ್ಚಿದೆ ಎಂಬುದರ ಸ್ಪಷ್ಟ ಸಂದೇಶವನ್ನು ನೀಡಿದ್ದವು.
ಚುನಾವಣೋತ್ತರ ಮೈತ್ರಿ ಸಾಧ್ಯವೇ?
ಪಕ್ಷ ಸ್ಥಾಪನೆಯಾಗಿ ಕೇವಲ ಎರಡು ವರ್ಷಗಳಾಗಿರುವ ಟಿವಿಕೆ, 234 ಸದಸ್ಯ ಬಲದ ವಿಧಾನಸಭೆಯಲ್ಲಿ ಸಂಪೂರ್ಣ ಬಹುಮತ ಪಡೆಯದಿದ್ದರೂ, ವಿಜಯ್ ಅವರನ್ನು ರಾಜ್ಯ ರಾಜಕಾರಣದ ಉನ್ನತ ಮಟ್ಟಕ್ಕೆ ಕೊಂಡೊಯ್ಯುವಂತಹ ಚೊಚ್ಚಲ ಸಾಧನೆ ಮಾಡುವತ್ತ ದಾಪುಗಾಲು ಹಾಕಿದೆ. ಈಗ ಉಳಿದಿರುವ ಬಹುದೊಡ್ಡ ಪ್ರಶ್ನೆಯೆಂದರೆ ಚುನಾವಣೋತ್ತರ ಮೈತ್ರಿ. ಒಂದು ವೇಳೆ ವಿಧಾನಸಭೆಯಲ್ಲಿ ಅತಂತ್ರ ಫಲಿತಾಂಶ ಬಂದು, ಟಿವಿಕೆ ದೊಡ್ಡ ಮಟ್ಟದ ಸ್ಥಾನಗಳನ್ನು ಗೆದ್ದರೆ, ಈ ಹಿಂದಿನ ಲೆಕ್ಕಾಚಾರಗಳು ಬದಲಾಗಬಹುದು. ಈ ಹೊತ್ತಿನಲ್ಲೇ ಮೋದಿ-ವಿಜಯ್ ಫೋಟೋ ವೈರಲ್ ಆಗುತ್ತಿರುವುದು, ಬಿಜೆಪಿ ಮಧ್ಯಪ್ರವೇಶಿಸಿ ಎಐಎಡಿಎಂಕೆ-ಟಿವಿಕೆ ನಡುವೆ ಮೈತ್ರಿ ಸೇತುವೆ ನಿರ್ಮಿಸುವ ಸಾಧ್ಯತೆಗಳ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ.
ಆದರೆ, ಹಾಗೆ ಆಗಬೇಕಾದರೆ ಎರಡೂ ಪಕ್ಷಗಳು ತಮ್ಮ ಹಿಂದಿನ ನಿಲುವುಗಳನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳಬೇಕಾಗುತ್ತದೆ. ಈ ಹಿಂದೆ ವಿಜಯ್ ಅವರ ನಾಯಕತ್ವದ ಬೇಡಿಕೆಗಳನ್ನು ತಿರಸ್ಕರಿಸಿದ್ದ ಎಐಎಡಿಎಂಕೆ, ಇದೀಗ ವಿಜಯ್ ಅವರನ್ನು ಬಹುತೇಕ ಸಮಾನ ಶಕ್ತಿ ಕೇಂದ್ರವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಅದೇ ರೀತಿ, ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟದ ವಿರುದ್ಧ ಸತತವಾಗಿ ವಾಗ್ದಾಳಿ ನಡೆಸಿದ್ದ ಟಿವಿಕೆ ಕೂಡ ತನ್ನ ನಿಲುವಿನಿಂದ ಹಿಂದೆ ಸರಿದು, ಅವರೊಂದಿಗೆ ಕೈಜೋಡಿಸಲು ಸಿದ್ಧವಾಗಬೇಕಾಗುತ್ತದೆ. ಅಂತಿಮವಾಗಿ ತಮಿಳುನಾಡಿನ ಅಧಿಕಾರದ ಗದ್ದುಗೆ ಯಾರ ಪಾಲಾಗಲಿದೆ ಮತ್ತು ಅತಂತ್ರ ಸ್ಥಿತಿ ನಿರ್ಮಾಣವಾದರೆ ವಿಜಯ್ ಮುಂದಿನ ನಡೆ ಏನು ಎಂಬುದು ಇನ್ನೇನು ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗಲಿದೆ.












Click it and Unblock the Notifications