Karnataka Budget 2023: ದಾವಣಗೆರೆ ಜಿಲ್ಲೆಗೆ ಸಿಕ್ಕಿದೇನು? ಸಂಪೂರ್ಣ ವಿವರ ಇಲ್ಲಿದೆ
ಬಸವರಾಜ ಬೊಮ್ಮಾಯಿ ಅವರು ಬಜೆಟ್ನಲ್ಲಿ ದಾವಣಗೆರೆ ಜಿಲ್ಲೆಗೆ ಏನೆಲ್ಲ ಘೋಷಣೆ ಮಾಡಿದ್ದಾರೆ ಅನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ದಾವಣಗೆರೆ, ಫೆಬ್ರವರಿ, 17: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ರಾಜ್ಯ ಬಜೆಟ್ನಲ್ಲಿ ದಾವಣಗೆರೆ ಜಿಲ್ಲೆಗೆ ವಿಮಾನ ನಿಲ್ದಾಣ ಅನುಷ್ಠಾನ, ವಿಶ್ವಕನ್ನಡ ಸಾಹಿತ್ಯ ಸಮ್ಮೇಳ ಒಳಗೊಂಡಂತೆ ಹಲವು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದಾರೆ.
ಮೂರನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಾವಣಗೆರೆಯಲ್ಲಿ ಆಯೋಜಿಸಲು ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಈಗಾಗಲೇ ಕಾರ್ಯಸಾಧ್ಯತಾ ವರದಿಯನ್ನು ಸಿದ್ದಪಡಿಸಲಾಗಿದೆ. ಈ ವರ್ಷದಲ್ಲಿ ದಾವಣಗೆರೆ ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸುವುದಾಗಿ ಬಜೆಟ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ
ಕೇಂದ್ರ ಸರ್ಕಾರವು 2023-24ನೇ ಸಾಲಿನ ಆಯವ್ಯಯದಲ್ಲಿ ಚಿಕ್ಕಮಂಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಮಾನ್ಯತೆ ದೊರೆತಿದೆ. ಪ್ರಸಕ್ತ ಸರ್ಕಾರದ ತೀವ್ರ ಪ್ರಯತ್ನದ ಫಲವಾಗಿ ರಾಷ್ಟ್ರೀಯ ಯೋಜನೆ ಮಾನ್ಯತೆ ದೊರೆತ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 5,300 ಕೋಟಿ ರೂ. ಸಹಾಯಧನ ಘೋಷಣೆ ಮಾಡಿದೆ. ಈ ಯೋಜನೆಯನ್ನು ತೀವ್ರ ಅನುಷ್ಠಾನಕ್ಕೆ ಕ್ರಮವಹಿಸುವುದಾಗಿ ಬಜೆಟ್ನಲ್ಲಿ ಪ್ರಸ್ತಾಪ ಮಾಡಲಾಗಿದೆ.

ಆರು ಪಥದ ಹೆದ್ದಾರಿ ಅಭಿವೃದ್ಧಿ
2,611 ರೂ. ಕೋಟಿ ವೆಚ್ಚದಲ್ಲಿ ಚಿತ್ರದುರ್ಗ-ದಾವಣಗೆರೆ -ಹಾವೇರಿ ಮಾರ್ಗದ ಆರು ಪಥದ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿ ತೀವ್ರಗೊಳಿಸಲಾಗುವುದು. ಹಾಗೆಯೇ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿರುವ ಸಂತ ಸೇವಾಲಾಲ್ರವರ ಜನ್ಮಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು 5 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ. ಚನ್ನಗಿರಿ ತಾಲೂಕಿನ ಹೊದಿಗೆರೆಯಲ್ಲಿರುವ ಶಿವಾಜಿ ಮಹಾರಾಜ್ ಸಮಾಧಿ ಸ್ಥಳದ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಅನುದಾನವನ್ನು ಘೋಷಿಸಿದ್ದಾರೆ.
ಯೋಜನೆಗಳ ವಿವರ ಇಲ್ಲಿದೆ
ದಾವಣಗೆರೆ ನಗರದಲ್ಲಿ ಹೊಸ ಎಸ್.ಡಿ.ಆರ್.ಎಫ್ ಕಂಪನಿ ಮಂಜೂರು ಮಾಡಲಾಗಿರುತ್ತದೆ. ಬಜೆಟ್ನಲ್ಲಿ ನೂತನ ಭೂ ಸಿರಿ ಯೋಜನೆಯಡಿ ರೈತರಿಗೆ ಸಹಾಯಧನ, ಸಹಸ್ರ ಸರೋವರ ಯೋಜನೆಯಡಿ ಕೆರೆ ಅಭಿವೃದ್ಧಿ, ನೀರು ಸಂರಕ್ಷಣೆಗೆ ಜಲನಿಧಿ ಹೊಸ ಯೋಜನೆ, ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ತಲಾ 1,000 ರೂಪಾಯಿ ಗೌರವಧನ ಹೆಚ್ಚಳ, ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆಯಡಿ ಉನ್ನತ ಶಿಕ್ಷಣಕ್ಕೆ ಸರ್ಕಾರಿ ಕಾಲೇಜುಗಳಲ್ಲಿ ಪೂರ್ಣ ಶುಲ್ಕ ವಿನಾಯಿತಿ, ಶಾಲಾ- ಕಾಲೇಜುಗಳಿಗೆ ಹೋಗಲು ಬಸ್ಗಳನ್ನು ಅಲಂಬಿಸಿರುವ ವಿದ್ಯಾರ್ಥಿಗಳಿಗೆ "ಮಕ್ಕಳ ಬಸ್" ಯೋಜನೆಯನ್ನು ಆರಂಭಿಸಲಾಗುವುದು. ಒಂದು ಸಾವಿರ ಹೊಸ ಬಸ್ಗಳ ಕಾರ್ಯಾರಂಭ ಮಾಡಲಾಗುತ್ತದೆ ಎಂದು ಘೋಷಿಸಿದರು.

ಹಾಗೆಯೇ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ ಸಿಇಟಿ ಮೂಲಕ ಸರ್ಕಾರಿ ಕೋಟಾದಡಿ ವೃತ್ತಿ ಶಿಕ್ಷಣ ಪ್ರವೇಶ ಪಡೆದ ವಿದ್ಯಾರ್ಥಿಗಳ ಪೂರ್ಣ ಶುಲ್ಕ ಪಾವತಿಸಲು ಪ್ರಮುಖ ಯೋಜನೆಯನ್ನು ಆರಂಭಿಸಲಾಗಿದೆ. ಇದಕ್ಕಾಗಿ ಹಳ್ಳಿ ಮುತ್ತು ಯೋಜನೆ ಆರಂಭ ಮಾಡಲಾಗಿದೆ. ಇನ್ನು ಪರಿಸರ ಸಮತೋಲನಕ್ಕಾಗಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಅರಣ್ಯೀಕರಣಕ್ಕೆ ಉತ್ತೇಜನದ ಪ್ರಸ್ತಾಪದಂತಹ ಹಲವು ವಿನೂತನ ಕಾರ್ಯಕ್ರಮಗಳನ್ನು ಘೋಷಿಸಿದರು.












Click it and Unblock the Notifications