ದಾವಣಗೆರೆ: ಅಪಘಾತದಲ್ಲಿ ಪತ್ರಕರ್ತ ಮಂಜುನಾಥ್ ಸಾವು
ದಾವಣಗೆರೆ, ನವೆಂಬರ್ 20: ಶಿವಮೊಗ್ಗ ಮೂಲದ ಯುವ ಪತ್ರಕರ್ತ ಎಂ. ಸಿ ಮಂಜುನಾಥ್ ಅವರು ಬುಧವಾರದಂದು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಶಿವಮೊಗ್ಗದಲ್ಲಿ ಗುರುವಾರದಂದು ನಡೆಸಲಾಗುತ್ತದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಹಾವೇರಿ ಜಿಲ್ಲೆ ಪ್ರಜಾವಾಣಿ ವರದಿಗಾರರಾಗಿದ್ದ ಮಂಜುನಾಥ್ ಅವರು ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ದಾವಣಗೆರೆ ತಾಲೂಕಿನ ಕೊಡಗನೂರು ಗ್ರಾಮದ ಬಳಿ ಬೈಕಿನಲ್ಲಿ ಸಾಗುತ್ತಿದ್ದಾಗ ಟ್ರ್ಯಾಕರ್ ಗುದ್ದಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಮಾಯಕೊಂಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗ ನಗರದವರಾದ 30 ವರ್ಷ ವಯಸ್ಸಿನ ಮಂಜು ಅವರು ಹಾವೇರಿ ಜಿಲ್ಲೆಗೆ 5 ತಿಂಗಳ ಹಿಂದಷ್ಟೇ ವರ್ಗವಾಗಿದ್ದರು. ಮೃತರ ಅಗಲಿಕೆಗೆ ಸಂತಾಪ ಸೂಚಿಸಿ ಅವರ ಸ್ನೇಹಿತರು, ಕುವೆಂಪು ವಿವಿಯ ಸಹಪಾಠಿಗಳು ನೋವು ತೋಡಿಕೊಂಡಿದ್ದಾರೆ.

ಮಂಜುನಾಥ್ ಅವರ ಬೈಕಿಗೆ ಹುಲ್ಲು ತುಂಬಿಕೊಂಡು ಸಾಗುತ್ತಿದ್ದ ಟ್ರ್ಯಾಕರ್ ಡಿಕ್ಕಿ ಹೊಡೆದ ಬಳಿಕ ಟ್ರ್ಯಾಕರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಟ್ರ್ಯಾಕರ್ ನಲ್ಲಿದ್ದ ಹುಲ್ಲನ್ನು ತೆಗೆದುಕೊಂಡು ಆಪೆ ಆಟೋವೊಂದರಲ್ಲಿ ತುಂಬಿದ್ದಾರೆ. ಮಂಜುನಾಥ್ ಅವರ ಪಾರ್ಥೀವ ಶರೀರವನ್ನು ಹುಲ್ಲಿನ ಮೇಲೆ ಹಾಕಿ ದಾವಣಗೆರೆಯ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಪೊಲೀಸರ ಈ ನಿರ್ಲಕ್ಷ್ಯ ಕ್ರಮಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.












Click it and Unblock the Notifications