ದಾವಣಗೆರೆ; ಕುಂದವಾಡ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಅವ್ಯವಹಾರ?
ದಾವಣಗೆರೆ, ಮಾರ್ಚ್ 14; ದಾವಣಗೆರೆ ಜನರಿಗೆ ಕುಡಿಯುವ ನೀರಿನ ಜೀವಸೆಲೆಯಾದ ಕುಂದವಾಡ ಕೆರೆಯ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕತೆಯಿಂದ ಕೂಡಿದ್ದು, ಈಗ ಮಾಡುತ್ತಿರುವ ಕೆಲಸದಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು. ಇದರಿಂದಾಗಿ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಮಾರ್ಟ್ ಸಿಟಿ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕುಂದವಾಡ ಕೆರೆ ಹೂಳೆತ್ತುವ ಕಾಮಗಾರಿಯನ್ನು ಸುಮಾರು 12 ಕೋಟಿ ರೂಪಾಯಿಗೂ ಹೆಚ್ಚು ಅನುದಾನದಲ್ಲಿ ನಡೆಸಲಾಗುತ್ತಿದೆ. ಹೂಳೆತ್ತುವ ಮೂಲಕ ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗುವಂತೆ ಮಾಡುವುದು ಈ ಕಾಮಗಾರಿಯ ಉದ್ದೇಶ. ಆದರೆ ಕಾಮಗಾರಿ ಹೆಸರಿನಲ್ಲಿ ಮರಗಳನ್ನು ಕಡಿದು ಹಾಕಲಾಗಿದೆ. ಎಲ್ಲಿ ಬೇಕೆಂದರಲ್ಲಿ ಮಣ್ಣು ತೆಗೆದು ಅಲ್ಲಿಯೇ ಬಿಡಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಆದರೆ ಕೆರೆಯಲ್ಲಿನ ಹೂಳು ಸಮರ್ಪಕವಾಗಿ ತೆಗೆಯುತ್ತಿಲ್ಲ. ಅಲ್ಲಲ್ಲಿ ಮಣ್ಣು ತೆಗೆದು ಹಾಗೆಯೇ ಬಿಡಲಾಗಿದೆ. ಮೂರು ಅಡಿ ಆಳದವರೆಗೆ ಹೂಳು ತೆಗೆದು ಹೊರಹಾಕಿದರೆ ಕೆರೆಯಲ್ಲಿ ಹೆಚ್ಚು ನೀರು ಸಂಗ್ರಹವಾಗುವುದರಿಂದ ಜನರಿಗೆ ಅನುಕೂಲವಾಗುತ್ತದೆ. ಆದರೆ ಇಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳು ಅವೈಜ್ಞಾನಿಕ. ಜೊತೆಗೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸಮರ್ಪಕ ತನಿಖೆಯಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಾಮಗಾರಿ ಬಗ್ಗೆ ದೂರು ಬಂದ ಕಾರಣ ದಾವಣಗೆರೆ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ನೇತೃತ್ವದ ತಂಡ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಶಾಸಕರಾದ ಶಾಮನೂರು ಶಿವಶಂಕರಪ್ಪ ಗಮನಕ್ಕೆ ಇದನ್ನು ತರಲಾಗುತ್ತದೆ. ಅವರ ಸಮ್ಮುಖದಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಕರೆಯಿಸಿ ಕಳಪೆ ಕಾಮಗಾರಿ ಬಗ್ಗೆ ತನಿಖೆ ನಡೆಸುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಸುಂದರ ಪರಿಸರ ಹಾಳು ಮಾಡಿದ್ದಾರೆ
ಕುಂದವಾಡ ಕೆರೆ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಜನರಿಗೆ ಇರುವ ನೀರಿನ ಆಧಾರ. ಕೆರೆಯಲ್ಲಿನ ಹೂಳು ಸಮರ್ಪಕವಾಗಿ ತೆಗೆದಿಲ್ಲ. ಐಲ್ಯಾಂಡ್ ರೀತಿ ಇದ್ದ ಸುಂದರ ಪರಿಸರ ಹಾಳು ಮಾಡಿದ್ದಾರೆ. ಸ್ಮಾರ್ಟ್ ಸಿಟಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ. ಇಂಜಿನಿಯರ್ಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಈಗ ಮಾಡುತ್ತಿರುವ ಕಾಮಗಾರಿಯಿಂದ ಕನಿಷ್ಟ ಅಂದರೂ ಕೆರೆಯ ವಿಸ್ತೀರ್ಣ ಮೂರು ಎಕರೆ ಕಡಿಮೆಯಾಗಲಿದೆ. ಅಧಿಕಾರಿಗಳು ಅಲ್ಲೇ ಇದ್ದ ಮಣ್ಣು ತೆಗೆದು ಅಲ್ಲಿಯೇ ಹಾಕುವ ಕೆಲಸ ಮಾಡುತ್ತಿದ್ದಾರೆ. ನಿತ್ಯವೂ ವಾಕಿಂಗ್ ಬರುತ್ತೇವೆ. ಇದನ್ನು ನೋಡಿದರೆ ಮನಸ್ಸಿಗೆ ಬೇಸರವಾಗುತ್ತದೆ. ಕಳಪೆ ಕಾಮಗಾರಿ, ಗುಣಮಟ್ಟ ಇಲ್ಲ ಎಂಬ ಬಗ್ಗೆ ಹೇಳಿದರೂ ಯಾರೂ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಆರೋಪ ವಾಯುವಿಹಾರಿಗಳದ್ದು.

ಕಳಪೆ ಕಾಮಗಾರಿ ಆರೋಪ
ದಾವಣಗೆರೆ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ನೇತೃತ್ವದ ತಂಡ ಭೇಟಿನೀಡಿದಾಗ ವಾಯು ವಿಹಾರಿಗಳು ಈ ವೇಳೆ ಕಾಮಗಾರಿ ಕಳಪೆಯಿಂದ ಕೂಡಿದೆ. ಮಣ್ಣು ತೆಗೆದು ಹೊರ ಹಾಕುತ್ತಿಲ್ಲ. ಹೆಸರಿಗಷ್ಟೇ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ. ಚೆನ್ನಾಗಿ ಇದ್ದ ಕೆರೆ ಹಾಳು ಮಾಡಲಾಗುತ್ತಿದೆ. ಹೊಸ ಪರಿಕರ ಬಳಕೆ ಮಾಡಿಲ್ಲ. ಹಳೆಯ ಪರಿಕರಗಳನ್ನು ಬಳಕೆ ಮಾಡಲಾಗುತ್ತಿದೆ. ವಾಕಿಂಗ್ ಮಾಡಲು ಆಗದ ರೀತಿ ಇದೆ. ಕಲ್ಲುಗಳನ್ನು ಅಳವಡಿಕೆ ಮಾಡಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಈ ಬಗ್ಗೆ ವಿರೋಧ ಪಕ್ಷದ ನಾಯಕರಾದ ನೀವು ಧ್ವನಿ ಎತ್ತಬೇಕೆಂದು ಮನವಿ ಮಾಡಿದರು.

ಅಧಿಕಾರಿಗಳಿಗೆ ಪೋನ್ ಕರೆ
ಸ್ಥಳದಿಂದಲೇ ಸ್ಮಾರ್ಟ್ ಸಿಟಿಯ ಸೂಪರಿಟೆಂಡೆಂಟ್ ಇಂಜಿನಿಯರ್ ಸತೀಶ್ಗೆ ಗಡಿಗುಡಾಳ್ ಮಂಜುನಾಥ್ ಕರೆ ಮಾಡಿದರು. ಈ ವೇಳೆ ಸ್ಥಳೀಯರು ಹೂಳೆತ್ತುವ ಕಾಮಗಾರಿ ಬಗ್ಗೆ ಮಾಡಿದ ಆರೋಪದ ಬಗ್ಗೆ ಪ್ರಶ್ನಿಸಿದರು. ಈ ರೀತಿಯಾಗಿ ಕಾಮಗಾರಿ ನಡೆಸಿದರೆ ಹೇಗೆ?, ಜನರ ಹಿತ ಕಾಯುವುದನ್ನು ಬಿಟ್ಟು ಸಮಸ್ಯೆ ಸೃಷ್ಟಿಸುತ್ತಿದ್ದೀರಾ?. ಸ್ಥಳಕ್ಕೆ ಭೇಟಿ ನೀಡಿ ಆಗಿರುವ ಅವಾಂತರ ಸರಿಪಡಿಸಿ. ಸಮರ್ಪಕವಾಗಿ ಕೆಲಸ ಮಾಡಿ. ಕೆರೆ ಅಭಿವೃದ್ಧಿ ಕುರಿತು ಏನೆಲ್ಲಾ ಕೆಲಸ ಆಗಿವೆ?. ಯಾವ ರೀತಿಯಲ್ಲಿ ಮಾಡುತ್ತಿದ್ದೀರಾ?, ಕೋರ್ಟ್ ಆದೇಶ ಪಾಲನೆ ಮಾಡಲಾಗುತ್ತಿದೆಯಾ? ಎಂಬ ಬಗ್ಗೆ ಸೂಕ್ತ ಮಾಹಿತಿ ನೀಡುವಂತೆ ತಾಕೀತು ಮಾಡಿದರು.

ಹಣ ಲೂಟಿ ಮಾಡಲಾಗುತ್ತಿದೆಯೇ?
ಸ್ಮಾರ್ಟ್ ಸಿಟಿ ನಿರ್ದೇಶಕರಾಗಿ ಕಾಂಗ್ರೆಸ್ ಕಾರ್ಪೊರೇಟರ್ಗಳನ್ನು ಎರಡು ವರ್ಷ ಆಗುತ್ತಾ ಬಂದರೂ ನೇಮಕ ಮಾಡಿಲ್ಲ. ಪಾಲಿಕೆಯಿಂದ ಹೆಸರು ಕಳುಹಿಸಿ ಆಮೇಲೆ ಬೇರೆ ರೀತಿಯದ್ದೇ ರಾಜಕಾರಣ ಮಾಡಲಾಗುತ್ತಿದೆ. ನಿರ್ದೇಶಕರಾಗಿ ತೆಗೆದುಕೊಳ್ಳದಿರುವುದೇಕೆ?. ಇದರ ಹಿಂದಿನ ಉದ್ದೇಶವೇನು?, ಹಣ ಲೂಟಿ ಮಾಡಲು ಈ ರೀತಿ ಮಾಡಲಾಗುತ್ತಿದೆಯಾ? ಎಂದು ಗಡಿಗುಡಾಳ್ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಕೆರೆ ವ್ಯಾಪ್ತಿಯ ವಾರ್ಡ್ ಕಾರ್ಪೊರೇಟರ್ ಶಿಲ್ಪಾ ಜಯಪ್ರಕಾಶ್ ಪತಿ ಜಯಪ್ರಕಾಶ್ ವಾಕಿಂಗ್ಗೆ ಬಂದಿದ್ದರು. ಆಗ ಇಲ್ಲಿ ಆಗುತ್ತಿರುವ ಕಾಮಗಾರಿ ಬಗ್ಗೆ ಗಡಿಗುಡಾಳ್ ಮಂಜುನಾಥ್ ಗಮನಕ್ಕೆ ತಂದರು. ಈ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳ ಜೊತೆ ಚರ್ಚಿಸೋಣ ಎಂದು ಜಯಪ್ರಕಾಶ್ ಹೇಳಿದರು.












Click it and Unblock the Notifications