ದಾವಣಗೆರೆ: ಆಂಬುಲೆನ್ಸ್ ಸಿಬ್ಬಂದಿ ಬೇಜವಬ್ದಾರಿಗೆ ಕಾರ್ಮಿಕ ಬಲಿ
ದಾವಣಗೆರೆ, ಜನವರಿ 09: ಆಂಬುಲೆನ್ಸ್ ಸಿಬ್ಬಂದಿಯ ಬೇಜವಬ್ದಾರಿ ವರ್ತನೆಯಿಂದಾಗಿ ಕಾರ್ಮಿಕ ನಾಗರಾಜು (37) ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ತುರ್ಚಘಟ್ಟ ಗ್ರಾಮಸ್ಥರು ಮತ್ತು ಮೃತನ ಸಂಬಂಧಿಕರು ದಾವಣಗೆರೆ ಜಿಲ್ಲಾ ಆಸ್ಪತ್ರೆ ಮುಂದೆ ಪ್ರತಿಭಟನೆ ಮಾಡಿದ್ದಾರೆ.
ಅಪಘಾತವೊಂದರಲ್ಲಿ ಅಸ್ವಸ್ಥನಾಗಿದ್ದ ನಾಗರಾಜುವನ್ನು ಪರೀಕ್ಷಿಸಿದ ಆಂಬುಲೆನ್ಸ್ ಸಿಬ್ಬಂದಿ ಮೃತನಾಗಿದ್ದಾನೆ ಎಂದು ಘೋಷಿಸಿ ಆಂಬುಲೆನ್ಸ್ಗೆ ಹತ್ತಿಸಿಕೊಳ್ಳದ ಕಾರಣ ಆತ ಮೃತನಾಗಿದ್ದಾನೆ, ಆಂಬುಲೆನ್ಸ್ ಸಿಬ್ಬಂದಿಯ ಬೇಜವಾಬ್ದಾರಿತನದಿಂದಲೇ ನಾಗರಾಜು ಜೀವ ಹೋಗಿದೆ ಎಂದು ಸಂಬಂಧಿಗಳು ಆರೋಪಿಸಿದ್ದಾರೆ.
ದಾವಣಗೆರೆಯ ತುರ್ಚಘಟ್ಟ ಗ್ರಾಮದಲ್ಲಿ ಪೈಪ್ ಲೈನ್ ಕಾಮಗಾರಿ ನಡೆಯುವಾಗ ಮೂವರು ಕಾರ್ಮಿಕರ ಮೇಲೆ ಮಣ್ಣಿನ ರಾಶಿ ಬಿದ್ದು ತೀರ್ವವಾಗಿ ಅಸ್ವಸ್ಥರಾಗಿದ್ದರು, ಅಲ್ಲಿದ್ದ ಇತರ ಕಾರ್ಮಿಕರು ಕೂಡಲೆ ಆಂಬುಲೆನ್ಸ್ಗೆ ಕರೆ ಮಾಡಿ ಅಸ್ವಸ್ಥರನ್ನು ಆಂಬುಲೆನ್ಸ್ಗೆ ಹತ್ತಿಸುತ್ತಿರುವಾಗ ಚಿಂತಾಜನಕ ಸ್ಥಿತಿಯಲ್ಲಿದ್ದ ನಾಗರಾಜುವನ್ನು ಪರೀಕ್ಷೆ ಮಾಡಿದ ಆಂಬುಲೆನ್ಸ್ ಸಿಬ್ಬಂದಿ ಈತ ಮೃತಪಟ್ಟಿದ್ದಾನೆ ಈತನನ್ನು ಆಂಬುಲೆನ್ಸ್ ಗೆ ಹತ್ತಿಸಿಕೊಂಡರು ಪ್ರಯೋಜನ ಇಲ್ಲ ಎಂದು ಹೇಳಿ ನಾಗರಾಜುವನ್ನು ಅಲ್ಲೆ ಬಿಟ್ಟು ಇಬ್ಬರನ್ನು ಮಾತ್ರ ಹತ್ತಿಸಿಕೊಂಡು ದಾವಣಗೆರೆ ಆಸ್ಪತ್ರೆಗೆ ಬಂದಿದ್ದಾರೆ.

ಆಂಬುಲೆನ್ಸ್ ಸಿಬ್ಬಂದಿಯ ವರ್ತನೆಯಿಂದ ದಾರಿ ಕಾಣದ ಗ್ರಾಮಸ್ಥರು ಖಾಸಗಿ ಕಾರು ಮಾಡಿಕೊಂಡು ಅಸ್ವಸ್ಥನಾಗಿದ್ದ ನಾಗರಾಜು ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದಾರೆ, ಅಲ್ಲಿ ಆತನನ್ನು ಪರೀಕ್ಷೆ ಮಾಡಿದ ಆಸ್ಪತ್ರೆ ವೈದ್ಯರು ಅರ್ಧ ಗಂಟೆ ಬೇಗ ತಂದಿದ್ದರೆ ಬದುಕಿಸಬಹುದಿತ್ತೇನೊ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಂಬುಲೆನ್ಸ್ನಲ್ಲಿ ಹತ್ತಿಸಿಕೊಂಡಿದ್ದರೆ ನಾಗರಾಜು ಸಮಯಕ್ಕೆ ಸರಿಯಾಗಿ ಆಸ್ಪತ್ರೆ ತಲುಪುತಿದ್ದ ಆಂಬುಲೆನ್ಸ್ ನವರು ಬೇಜವಬ್ದಾರಿತನ ತೋರಿದ್ದರಿಂದಲೇ ಜೀವ ಹೋಗಿದೆ ಎಂದು ಮೃತನ ಸಂಬಂಧಿಗಳು ಆರೋಪಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಬಂದಿದ್ದು, ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.












Click it and Unblock the Notifications