ನಾನು ಯಾವಾಗಲೂ ಸಿದ್ದರಾಮಯ್ಯರ ಪರ: ಸಚಿವ ಜಮೀರ್ ಅಹ್ಮದ್ ಹೀಗೆ ಹೇಳಿದ್ದೇಕೆ?, ಇಲ್ಲಿದೆ ಮಾಹಿತಿ
ದಾವಣಗೆರೆ, ಅಕ್ಟೋಬರ್, 31: ಕಾಂಗ್ರೆಸ್ ಹೈಕಮಾಂಡ್ ನುಡಿದಂತೆ ನಡೆಯುವ ಪಕ್ಷ. ಹೈಕಮಾಂಡ್ ಬಯಸಿದರೆ ಸಿದ್ದರಾಮಯ್ಯನವರೇ 5 ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಎಂದು ವಸತಿ ಸಚಿವ ಜಮೀರ್ ಅಹ್ಮದ್ ದಾವಣಗೆರೆಯಲ್ಲಿ ಹೇಳಿದರು.
ಮಾಧ್ಯಮವದರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ನನ್ನ ಅಭಿಪ್ರಾಯಕ್ಕೆ ಹೆಚ್ಚು ಮನ್ನಣೆ ಇರದು. ಹೈಕಮಾಂಡ್ ಪಕ್ಷ ನಮ್ಮದು. ಈಗ ಸಿಎಂ ಖುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯ ಕುಳಿತಿದ್ದಾರೆ. ಖಾಲಿಯಿದ್ದರೆ ಮಾತನಾಡಬಹುದು ಎಂದು ಹೇಳಿದರು.

ನಾನು ಯಾವಾಗಲೂ ಸಿದ್ದರಾಮಯ್ಯರ ಪರ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಊಟಕ್ಕೆ ಕರೆಯುತ್ತಾರೆ. ಪರಮೇಶ್ವರ ಮನೆಯಲ್ಲಿ ಊಟಕ್ಕೆ ಸೇರಿದ್ದರು, ನನ್ನನ್ನು ಕರೆದಿದ್ದರು. ಡಿ.ಕೆ.ಶಿವಕುಮಾರ್ ಅವರನ್ನೂ ಆಹ್ವಾನಿಸಿದ್ದರು. ನಾನು ಹೋಗಿಲ್ಲ ಅಂತಾ ಬೇರೆ ಅರ್ಥ ಬರುತ್ತಾ? ಸತೀಶ್ ಜಾರಕಿಹೊಳಿ, ಶಾಸಕರು ಫೋನ್ ಮಾಡಿದ್ದಾರೆ. ನಿನ್ನೆಯೂ ಸ್ನೇಹಿತರೊಬ್ಬರ ಮನೆಗೆ ಊಟಕ್ಕೆ ಸೇರಿದ್ದೆವು. ಸತೀಶ್ ಜಾರಕಿಹೊಳಿ ಅವರಿಗೆ ಯಾವ ಅಸಮಾಧಾನವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಮೇಶ್ ಜಾರಕಿಹೊಳಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಡಿ.ಕೆ.ಶಿವಕುಮಾರ್ ಮಾಜಿ ಮಂತ್ರಿಯಾಗುತ್ತಾರೆ ಎಂದು ಹೇಳಲು ತನಿಖಾಧಿಕಾರಿನಾ? ಇಲ್ಲವೇ ಜಡ್ಜಾ, 17 ಶಾಸಕರನ್ನು ಆಪರೇಷನ್ ಕಮಲ ಮಾಡಿ ಹೋಗಿ ಸರ್ಕಾರ ರಚಿಸಲು ಎಷ್ಟು ತಿಂಗಳಾಯ್ತು? ಏನೆಲ್ಲಾ ಸಂಕಷ್ಟ ಅನುಭವಿಸಿದರು? ಹೋದವರನ್ನೇ ಕೇಳಿ ಹೇಳುತ್ತಾರೆ. ರಮೇಶ್ ಜಾರಕಿಹೊಳಿ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಬೇಕು. 50 ಶಾಸಕರನ್ನು ಆಪರೇಷನ್ ಮಾಡುವುದು ಸುಲಭ ಸಾಧ್ಯನಾ? ನೀವೇ ಹೇಳಿ ಎಂದು ಪ್ರಶ್ನಿಸಿದರು.
ಯಾವ ಒಬ್ಬ ಶಾಸಕರೂ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಲ್ಲ. ಬಿಜೆಪಿಯ ಶಾಸಕರೇ ಕಾಂಗ್ರೆಸ್ಗೆ ಬರಲು ತುದಿಗಾಲ ಮೇಲೆ ನಿಂತಿದ್ದಾರೆ. ರಮೇಶ್ ಜಾರಕಿಹೊಳಿ ಮೊದಲು ಅವರ ಪಕ್ಷದ ಶಾಸಕರನ್ನು ಉಳಿಸಿಕೊಳ್ಳಲಿ. ಯಾವ ಕಾಂಗ್ರೆಸ್ ಶಾಸಕ ಬಿಜೆಪಿಗೆ ಹೋಗಲು ಸಿದ್ದರಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಒಂಟಿಕಾಲ ಮೇಲೆ ನಮ್ಮ ಪಕ್ಷಕ್ಕೆ ಬರಲು ಬಿಜೆಪಿ ಶಾಸಕರು ಸಜ್ಜಾಗಿದ್ದಾರೆ ಎಂದರು.
ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು
ಸಿಎಂ ಸಿದ್ದರಾಮಯ್ಯ ಅವರು ಒಳ್ಳೆಯ ಆಡಳಿತ ಕೊಡುತ್ತಿದ್ದಾರೆ. ಸಿಎಂ ಬದಲಾವಣೆ ವಿಚಾರ ಹೈಕಮಾಂಟ್ಗೆ ಬಿಟ್ಟ ವಿಚಾರ. ಬದಲಾವಣೆ ಮಾಡಲಾಗುತ್ತದೆ ಎಂಬುದು ಮಾಧ್ಯಮ ಸೃಷ್ಟಿ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ದಾವಣಗೆರೆಯಲ್ಲಿ ಹೇಳಿದರು.
ಮಾಧ್ಯಮವದರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಯಾವ ಬಣ ಇಲ್ಲ, ಇರುವುದೊಂದೇ ಬಣ. ಅದು ಕಾಂಗ್ರೆಸ್ ಬಣ. ನಾನು ರಮೇಶ್ ಜಾರಕಿಹೊಳಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರನ್ನೂ ನೋಡಿದ್ದೇನೆ. ಅವರವರ ಅಭಿಪ್ರಾಯ ಹೇಳಿದ್ದಾರೆ. ಕಾಂಗ್ರೆಸ್ನಲ್ಲಿ ನಾವೆಲ್ಲರೂ ಒಟ್ಟಿಗೆ ಹೋಗುತ್ತಿದ್ದೇವೆ. ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಪತನಗೊಳಿಸುವುದು ತಿರುಕನ ಕನಸು. ಅದು ಈಡೇರದು. ಈ ಹಿಂದೆ 17 ಶಾಸಕರನ್ನು ಕರೆದುಕೊಂಡು ಹೋಗಿ ಸರ್ಕಾರ ರಚನೆ ಮಾಡಿದ್ದರು. ಮುಂಚಿನಿಂದಲೂ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆ. ಇದು ಸಾಧ್ಯವಾಗದು. 40ಕ್ಕೂ ಹೆಚ್ಚು ಶಾಸಕರನ್ನು ಕರೆದುಕೊಂಡು ಹೋಗಿ ಸರ್ಕಾರ ಬೀಳಿಸುವುದು ಅಷ್ಟು ಸುಲಭದ ಕೆಲಸವೂ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಲೋಕಸಭೆ ಚುನಾವಣೆಗೆ ಇನ್ನೂ ಸಮಯಾವಕಾಶ ಇದೆ. ಕಾಂಗ್ರೆಸ್ನಲ್ಲಿ ಹೇಗೆ ಟಿಕೆಟ್ ನೀಡಲಾಗುತ್ತದೆ ಎಂಬುದು ನಿಮಗೆ ಗೊತ್ತಲ್ವಾ. ಟೈಂ ಇದೆ ನೋಡೋಣ ಏನೇನಾಗುತ್ತೆ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ ಅವರು ಈಗ ರಾತ್ರಿ ಮಲಗುವುದಿಲ್ಲ ಅಂತಲ್ಲ. ಸ್ಮಾರ್ಟ್ ಸಿಟಿ ಯೋಜನೆ ನಾನೇ ಮಾಡಿಸಿದ್ದು ಎನ್ನುವವರು ಎಷ್ಟು ರೂಪಾಯಿ ತಂದಿದ್ದಾರೆ. ಒಂದು ರೂಪಾಯಿನೂ ತಂದಿಲ್ಲ. ಸ್ಮಾರ್ಟ್ ಸಿಟಿ ಪರಿಶೀಲನೆ ಮಾಡಲು ಇವರು ಯಾರು? ಜೆಪಿ ಅಂದ್ರೆ ಯಾರು? ಇವನು ಏನಾಗಿದ್ದಾನೆ ನಮ್ಮ ದುಡ್ಡು ಎನ್ನಲು. ಮೊದಲು ರಾಜ್ಯ ಸರ್ಕಾರದ ಶೇಕಡಾ 50ರಷ್ಟು ಹಣ, ಆಮೇಲೆ ಕೇಂದ್ರ ಸರ್ಕಾರದ ಶೇಕಡಾ 50ರಷ್ಟು ಹಣ ಬರುತ್ತದೆ. ಮೊದಲು ತಿಳುವಳಿಕೆಯಿಂದ ಮಾತನಾಡಲಿ. ಲೋಕಸಭಾ ಸದಸ್ಯರಿರಲಿ, ಬೆಂಬಲಿಗರಿರಲಿ. ಎಲ್ಲಿಂದ ಅನುದಾನ ಬಂತು? ಯಾರು ಪ್ರಾರಂಭ ಮಾಡಿದ್ದು ಎಂದು ತಿಳಿದುಕೊಳ್ಳಲಿ. ಹುಲ್ಲು ಕಾಳಿನಷ್ಟು ಪ್ರಯತ್ನ ಮಾಡಿಲ್ಲ ಎಂದು ಹೇಳಿದರು.
ಎಂಪಿ ಅನುದಾನ ಎಲ್ಲೆಲ್ಲಿ ಕೊಟ್ಟಿದ್ದಾರೆ ಎಂಬ ಪಟ್ಟಿ ಕೊಡಲಿ. ನಾನು ಮಾಡಿದ್ದೀನಿ ಅಂತಾರೆ. ಶೇಕಡಾ 40 ರಷ್ಟು ಕಮೀಷನ್ ತಿನ್ನುವ ಹಾಗೆ ಇಲ್ಲ. ನಾನು ಮನೆಯಿಂದ ತಂದುಕೊಡಲ್ಲ, ಅವರೂ ಮನೆಯಿಂದ ತಂದುಕೊಡಲ್ಲ. ಊರು ಹೊಲಸು ಮಾಡಿಟ್ಟಿದ್ದಾರೆ. ಎಷ್ಟು ಚೆನ್ನಾಗಿ ಮಾಡಬಹುದಿತ್ತು. ಸರ್ಕಾರದಿಂದ ಹಣ ತಂದು ಕಾರ್ಪೊರೆಷನ್ ಹೊರೆ ಕಡಿಮೆ ಮಾಡಬಹುದಿತ್ತು. ಆದರೆ ಅದನ್ನು ಮಾಡಿಲ್ಲ. ಕೇಳಿದವರಿಗೆ ಕೊಟ್ಟು 20, 40 ಕಮೀಷನ್ ಪಡೆದು ಯೋಜನೆ ಹಾಳು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಕಾಲದ ಹಳೆ ಕಾಮಗಾರಿ ತನಿಖೆ ನಡೆಯುತ್ತಿದೆ. ಎರಡರಿಂದ ಮೂರು ಮುಗಿದಿವೆ. ಪಾರ್ಕ್ ಜಾಗ ಒತ್ತುವರಿ ಬಿಡಿಸಿದ್ದೇವೆ. ಸಿಡಿಪಿ ಯೋಜನೆ ಕೆಡಿಸಿದ್ದನ್ನು ಸರಿಪಡಿಸುತ್ತಿದ್ದೇವೆ. ಹೊಸದಾಗಿ ಸಿಡಿಪಿ ಯೋಜನೆ ಬದಲಾವಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ರೈತರಿಗೆ ಅನ್ಯಾಯ ಆಗಬಾರದು. ಎಲ್ಲರಿಗೂ ಸಮಾನವಾಗಿ ಆಗಬೇಕು. ಆದಷ್ಟು ಬೇಗ ಆಗುತ್ತದೆ ಎಂದರು.












Click it and Unblock the Notifications