ಚಂದ್ರಶೇಖರ್ ಸಾವು; ಸಾವಿನಲ್ಲಿ ರಾಜಕಾರಣ ಮಾಡ್ತೇನೆ ಎನ್ನುವವರು ವಿಕೃತ ಮನಸಿನವರು, ರೇಣುಕಾಚಾರ್ಯ ಆಕ್ರೋಶ
ದಾವಣಗೆರೆ, ನವೆಂಬರ್, 09: ಸಾವಿನಲ್ಲೂ ಪ್ರಚಾರ, ರಾಜಕಾರಣ ಮಾಡುತ್ತೇನೆ ಎನ್ನುತ್ತಿರುವವರು ವಿಕೃತ ಮನಸಿನವರಾಗಿದ್ದಾರೆ. ಮಗನ ಸಾವಿನ ವಿಚಾರದಲ್ಲಿ ನಾನು ರಾಜಕಾರಣ ಮಾಡುವವನಲ್ಲ. ಚಂದ್ರು ಬದುಕಿದ್ದರೆ ಇದಕ್ಕಿಂತ ಹತ್ತರಷ್ಟು ನೋಡುವಷ್ಟು ಭಾಗ್ಯ ಸಿಗುತಿತ್ತು. ಚಂದ್ರು ಮಾಡಿರುವ ಸೇವೆ ಆಧಾರದ ಮೇಲೆ ಜನರು ಬಂದರು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಹೇಳಿದ್ದಾರೆ.
ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಚಂದ್ರು ಸಾವಿಗೆ ಕಾರಣ ಇಂತಹವರೇ ಎಂದು ನಾನು ಆರೋಪ ಮಾಡಿಲ್ಲ. ನ್ಯಾಯ ಕೇಳುತ್ತಿರುವುದು ಜನರು. ನನಗೆ ಬೇಕಿಲ್ಲ, ಜನರಿಗೆ ಬೇಕು. ಶಾಸಕರ ಪುತ್ರನಿಗೆ ಈ ರೀತಿ ಆದರೆ ಜನಸಾಮಾನ್ಯರ ಪಾಡೇನು? ಯಾರು ರಕ್ಷಣೆ ನೀಡುತ್ತಾರೆ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ ಎಂದು ಹೇಳಿದರು. ಅಪಘಾತ ಆಗಿಲ್ಲ, ಅವನು ಆತ್ಮಹತ್ಯೆ ಮಾಡಿಕೊಳ್ಳುವವನು ಅಲ್ಲ. ಮಗನನ್ನು ಅಪಹರಣ ಮಾಡಿ ಬರ್ಬರ ಹತ್ಯೆ ಮಾಡಿದ್ದಾರೆ. ನನ್ನ ಮೇಲೆ ದ್ವೇಷ ಇದ್ದರೆ ನನ್ನನ್ನು ಬಲಿ ತೆಗೆದುಕೊಳ್ಳಬಹುದಿತ್ತು. ಹೇಡಿಗಳು ಇಂತಹ ಹೇಯ ಕೃತ್ಯ ನಡೆಸಿದ್ದಾರೆ. ಏನೂ ಅರಿಯದ, ತಪ್ಪು ಮಾಡದ, ಮುಗ್ಧ ಕಂದ ಆತ. ದೇವರು ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡುತ್ತಾನೆ ಎಂದರು ದುಃಖ ವ್ಯಕ್ತಪಡಿಸಿದರು.
ಚಂದ್ರಶೇಖರ್ ಸಾವು: ಸ್ಥಳೀಯ ಪೊಲೀಸರ ಮೇಲೆ ನಂಬಿಕೆ ಕಳೆದುಕೊಂಡರಾ ರೇಣುಕಾಚಾರ್ಯ?
ಒಂದು ವರ್ಷದ ಹಿಂದೆ ಕೊಲೆ ಬೆದರಿಕೆ
ನನಗೆ ಕೊಲೆ ಬೆದರಿಕೆ ಕರೆ ಬಂದು ಒಂದು ವರ್ಷವಾಗಿದೆ. ದುಬೈನಿಂದ ಕರೆ ಮಾಡಿದ್ದ ನಂಬರ್ ಇದೆ. ನನಗೂ ಮತ್ತು ನನ್ನ ಮಗನಿಗೂ ಕೊಲೆ ಬೆದರಿಕೆ ಹಾಕಿದ್ದರು. ಕೊಚ್ಚಿ ಕೊಂದು ಹಾಕುತ್ತೇವೆ ಎಂಬ ಬೆದರಿಕೆಯನ್ನು ಹಾಕಿದ್ದರು. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬಂದಿದೆ. ಶಾಸಕರ ಕುಟುಂಬಕ್ಕೆ ಹೀಗಾದರೆ ಜನರಿಗೆ ರಕ್ಷಣೆ ಸಿಗುತ್ತಾ? ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಯುತ್ತದೆ. ಡ್ರೋನ್ ಮೂಲಕ ಶವ ಪತ್ತೆ ಹಚ್ಚಿದ್ದು, ಸಿಸಿಟಿವಿ ದೃಶ್ಯಾವಳಿ ಸಿಗುವಂತೆ ಮಾಡಿದ್ದು ನಮ್ಮವರೇ. ನಾಪತ್ತೆ ಆದ ಮಾರನೇ ದಿನ ಬೆಳಗ್ಗೆ 6:45ಕ್ಕೆ ಚಂದ್ರಶೇಖರ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆಮೇಲೆ ರಾತ್ರಿ 12:5ಕ್ಕೆ ಲೋಕೇಶನ್ ತೋರಿಸಿತ್ತು ಎಂದು ಹೇಳುತ್ತಿದ್ದಾರೆ. ಹಾಗಾದರೆ ಅನುಮಾನ ಮೂಡುವುದಿಲ್ಲವೇ? ಎಂದು ಪ್ರಶ್ನಿಸಿದರು.
ಬಸವರಾಜ ಬೊಮ್ಮಾಯಿ ಅವರು ಬಂದು ಸಾಂತ್ವನ ಹೇಳಿದ್ದಾರೆ. ಅವರು ಎಲ್ಲಾ ರೀತಿಯ ಮಾಹಿತಿಯನ್ನು ಕಲೆ ಹಾಕಿದ್ದಾರ. ನಂತರ ಅವರು ವಾಸ್ತಾವಾಂಶ ಮನವರಿಕೆ ಆಗಿದೆ. ನಾನು ನಿಮ್ಮ ಜೊತೆಗಿದ್ದೇನೆ. ಚಂದ್ರು ಸಾವಿನ ಬಗ್ಗೆ ಸರಿಯಾಗಿ ತನಿಖೆ ಆಗುತ್ತದೆ. ಎಲ್ಲಾ ಆಯಾಮದಲ್ಲಿಯೂ ತನಿಖೆ ಮಾಡಿ ಸಾವಿಗೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚುತ್ತೇವೆ ಎಂದಿದ್ದಾರೆ. ಸಿಎಂ ನನ್ನ ಮಗನ ಸಾವಿಗೆ ನ್ಯಾಯ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಂದ್ರು ಕಾರು ಪತ್ತೆ ಹಚ್ಚಿದ್ದು ನಾವು, ಪೊಲೀಸರು ಮಾಡಿದ್ದೇನು: ಬಿಜೆಪಿ ಕಾರ್ಯಕರ್ತರ ಪ್ರಶ್ನೆ
ಬೆದರಿಕೆ ಹಾಕಿದ ವ್ಯಕ್ತಿಯ ಬಗ್ಗೆ ಮಾಹಿತಿ ಇದೆ
ಮರಣೋತ್ತರ ಪರೀಕ್ಷೆ ಹಾಗೂ ಎಫ್ಎಸ್ಎಲ್ ವರದಿ ಬರಲು ತಡವಾಗುತ್ತಿದೆಯ ಅಲ್ಲವಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ವೈದ್ಯನು ಅಲ್ಲ, ಪೊಲೀಸ್ ಅಧಿಕಾರಿಯೂ ಅಲ್ಲ. ಸಾಮಾನ್ಯ ಮನುಷ್ಯನಾಗಿದ್ದೇನೆ. ನ್ಯಾಯ ಎಲ್ಲರಿಗೂ ಒಂದೇ. ಯಲಹಂಕದ ವಿಶ್ವನಾಥ್ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ. ಇದು ಎಲ್ಲರಿಗೂ ಗೊತ್ತಾಗಬೇಕು. ಬೆದರಿಕೆ ಹಾಕಿದ ವ್ಯಕ್ತಿ ಯಾರಂತಲೂ ಮಾಹಿತಿ ಇದೆ. ತನಿಖೆ ಮಾತ್ರ ಇನ್ನು ಚುರುಕು ಪಡೆದಿಲ್ಲ. ಆರೋಪಿಗಳನ್ನು ಪತ್ತೆ ಹಚ್ಚಿಲ್ಲ. ಕ್ಷೇತ್ರದ ಜನರ ಕಣ್ಮಣಿ ಚಂದ್ರಶೇಖರ್ ಸ್ಮರಣಾರ್ಥ ನವೆಂಬರ್ 10ರಂದು ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಕ್ರೀಡಾಪಟುಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ರೇಣುಕಾಚಾರ್ಯ ತಿಳಿಸಿದರು.
ಶಾಸಕರ ಕುಟುಂಬಕ್ಕೆ ಸಿಎಂ ಸಾಂತ್ವನ
ಹೊನ್ನಾಳಿಯ ಶಾಸಕ ಎಂ. ಪಿ. ರೇಣುಕಾಚಾರ್ಯರ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರೇಣುಕಾಚಾರ್ಯ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಮನೆಯಲ್ಲಿನ ಚಂದ್ರಶೇಖರ್ ಭಾವಚಿತ್ರಕ್ಕೆ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಸಚಿವ ಗೋವಿಂದ ಕಾರಜೋಳ ಪುಷ್ಪ ನಮನ ಸಲ್ಲಿಸಿದರು. ರೇಣುಕಾಚಾರ್ಯ ಸಹೋದರ ಎಂ.ಪಿ. ರಮೇಶ್ ಪತ್ನಿ, ರೇಣುಕಾಚಾರ್ಯರ ಪತ್ನಿ ಹಾಗೂ ಸಂಬಂಧಿಕರಿಗೆ ಸಾಂತ್ವನ ಹೇಳಿದ ಸಿಎಂ, ರೇಣುಕಾಚಾರ್ಯ ಅವರಿಂದ ಚಂದ್ರಶೇಖರ್ ಬಗ್ಗೆ ಮಾಹಿತಿ ಪಡೆದುಕೊಂಡರು. ಕ್ಷೇತ್ರದ ಜನರ ಜೊತೆಗಿನ ಒಡನಾಟ, ಪೊಲೀಸ್ ತನಿಖೆ ಸೇರಿದಂತೆ ಇತರೆ ಮಾಹಿತಿಯನ್ನು ಪಡೆದರು.
ಸಹೋದರನಾಗಿ ಇಲ್ಲಿಗೆ ಬಂದಿದ್ದೇನೆ
ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಚಂದ್ರುನನ್ನು ಬಹಳಷ್ಟು ಹಚ್ಚಿಕೊಂಡಿರುವ ರೇಣುಕಾಚಾರ್ಯರು ನೋವಿನಲ್ಲಿದ್ದಾರೆ. ಸಿವಿಲ್ ಎಂಜಿನಿಯರ್ ಆಗಿದ್ದರೂ ದೊಡ್ಡಪ್ಪನಿಗೆ ಸಹಾಯ ಮಾಡಬೇಕು ಅಂತಾ ನಡೆಯುವ ಎಲ್ಲಾ ಬೆಳವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದ. ಹೀಗೆ ಜನರ ಪ್ರೀತಿ ಗಳಿಸಿದ್ದವನಾಗಿದ್ದ. ರೇಣುಕಾಚಾರ್ಯರ ಅರ್ಧ ಭಾರವನ್ನು ತೆಗೆದುಕೊಂಡಿದ್ದ. ಆತನಿಗೆ ಈ ರೀತಿ ಆಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ರೇಣುಕಾಚಾರ್ಯರಿಗೆ ಆಘಾತ ಆಗಿದೆ. ಫೋನ್ನಲ್ಲಿ ಈ ಬಗ್ಗೆ ಮಾತನಾಡಿದಾಗ ಅವರನ್ನು ಸಮಾಧಾನಪಡಿಸಲು ಯತ್ನಿಸಿದ್ದೆ. ಮನಸು ತಡೆಯಲು ಆಗಲಿಲ್ಲ. ಆದ್ದರಿಂದ ಸಹೋದರನಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.