ಹರಿಹರದಿಂದ ಮುಂದಿನ ಚುನಾವಣೆಗೆ ಸಿದ್ದರಾಮಯ್ಯ ಸ್ಪರ್ಧೆ?
ದಾವಣಗೆರೆ,12: "ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹರಿಹರದಿಂದ ಸ್ಪರ್ಧಿಸಲು ಬಯಸಿದರೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧ" ಎಂದು ಹರಿಹದರ ಕಾಂಗ್ರೆಸ್ ಶಾಸಕ ಎಸ್. ರಾಮಪ್ಪ ಘೋಷಿಸಿದರು.
ಮಂಗಳವಾರ ಶಾಮನೂರು ಶಿವಶಂಕರಪ್ಪರ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಅಪರೂಪದ ವ್ಯಕ್ತಿಯಾದ ಮಾಜಿ ಸಿಎಂ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರಿಂದ ಶಕ್ತಿ ಇದೆ. ತಾಲೂಕಿನ ಜನರ ಅಪೇಕ್ಷೆ ಇದೆ. ವಿಜೃಂಭಣೆಯಿಂದ ಗೆಲ್ಲಿಸಲು ಮತದಾರರು ಹಾಗೂ ನಾವು ಆಹ್ವಾನ ನೀಡುತ್ತೇವೆ" ಎಂದರು.
"ಹರಿಹರದಲ್ಲಿಅವರು ಶಾಸಕರಾದರೆ ನಾನೇ ಶಾಸಕನಾದಂತೆ. ನಾನು ಇನ್ನೂ ಕೇಳಿಲ್ಲ, ಕೇಳಿಕೊಳ್ಳುತ್ತೇನೆ. ಯಾರೂ ಸಹ ಒಂದೇ ಬಾರಿ ಶಾಸಕ ಸಾಕು ಎಂದು ಹೇಳಲ್ಲ. ನೀವು ಅರ್ಥ ಮಾಡಿಕೊಳ್ಳಿ. ಸಿದ್ದರಾಮಯ್ಯರ ಮೇಲಿನ ಪ್ರೀತಿ, ಅಭಿಮಾನ ಹೆಚ್ಚಿದೆ. ಕಟ್ಟಕಡೆಯ ಸಮಾಜಕ್ಕೂ ಅನುಕೂಲ ಮಾಡಿಕೊಟ್ಟಿದ್ದಾರೆ" ಎಂದು ಶಾಸಕರು ಬಣ್ಣಿಸಿದರು.

"50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಡುತ್ತೇವೆ. ಸರ್ವೇಯಲ್ಲಿ ಮತ್ತೆ ನಾನೇ ಗೆಲ್ಲುತ್ತೇನೆ ಎಂಬುದು ಹೈಕಮಾಂಡ್ಗೂ ಗೊತ್ತಿದೆ. ಸಿದ್ದರಾಮಯ್ಯ ಸ್ಪರ್ಧೆ ಮಾಡದಿದ್ದರೆ ನನಗೆ ಟಿಕೆಟ್ ಸಿಗುತ್ತದೆ, ನಾನೇ ಗೆಲ್ಲುತ್ತೇನೆ. ಆಕಾಂಕ್ಷಿಗಳಿದ್ದಾರೆ, ಅವರಾರಿಗೂ ಟಿಕೆಟ್ ಸಿಗಲ್ಲ" ಎಂದು ಹೇಳಿದರು ಎಸ್. ರಾಮಪ್ಪ ಹೇಳಿದರು.
"ಸಿದ್ದರಾಮಯ್ಯ ಒಂದು ಜಾತಿಗೆ ಸೀಮಿತರಾದವರಲ್ಲ. ಕಾಂಗ್ರೆಸ್ ಮುಖಂಡ ಚಿಮ್ಮನಕಟ್ಟೆ ಬಾದಾಮಿಯಲ್ಲಿ ಸಿದ್ದರಾಮಯ್ಯರ ಬಗ್ಗೆ ಆ ರೀತಿ ಮಾತನಾಡಬಾರದಿತ್ತು. ನಾವು ಎಂದಿಗೂ ಆ ರೀತಿ ಹೇಳುವುದಿಲ್ಲ. ನಮ್ಮ ಕ್ಷೇತ್ರದಲ್ಲಿ ಗೆದ್ದರೆ ಸಾವಿರಾರು ಕೋಟಿ ಅನುದಾನ ತರುತ್ತಾರೆ. ಕ್ಷೇತ್ರದ ಅಭಿವೃದ್ಧಿ ಖಚಿತ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ನನಗೆ 40 ಕೋಟಿ ರೂಪಾಯಿ ನೀಡುವುದಾಗಿ ಆಫರ್ ಬಂದಿತ್ತು. ನಮ್ಮ ಮನೆಗೆ ಬಂದಿದ್ದರೂ ಒಳಗಡೆ ಬಿಟ್ಟುಕೊಂಡಿಲ್ಲ. ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ ಕಾಂಗ್ರೆಸ್ನಲ್ಲಿದ್ದೇನೆ. ಬಿಜೆಪಿಯವರು ಅಪಪ್ರಚಾರ ಮಾಡಲು ಯತ್ನಿಸಿದರೂ ಆಗಲಿಲ್ಲ" ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications