ದಾವಣಗೆರೆಯ ಮೂಗ ಯುವತಿ ವಿವಾಹಕ್ಕೆ 2 ಲಕ್ಷ ರೂ. ನೆರವು
ದಾವಣಗೆರೆ, ನವೆಂಬರ್, 15: ರಾಜ್ಯ ರಾಜಕೀಯದಲ್ಲಿ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಭರ್ಜರಿ ತಯಾರಿಗಳು ನಡೆಯುತ್ತಲೇ ಇವೆ. ಹಾಗೆಯೇ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ವಿ. ಪಟೇಲ್ ಅವರು ಚನ್ನಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ನಿಂದ ಸ್ಪರ್ಧಿಸುವ ಆಸೆಯನ್ನು ಹೊಂದಿದ್ದರು. ಅವರು ಕೆಪಿಸಿಸಿಗೆ ಟಿಕೆಟ್ ಪಡೆಯಲು ಅರ್ಜಿ ಸಲ್ಲಿಕೆಗೆ 2 ಲಕ್ಷ ರೂಪಾಯಿ ಅನ್ನು ಮೀಸಲಿಟ್ಟಿದ್ದರು. ಇದೀಗ ಅವರು ಟಿಕೆಟ್ಗಾಗಿ ಮೀಸಲಿಟ್ಟ ಹಣವನ್ನೇ ಮೂಗ ಯುವತಿಯ ಮದುವೆಗೆ ನೀಡಿದ್ದು, ಈ ಮೂಲಕ ಬಡವರಿಗೆ ನೆರವಾಗಬೇಕು ಎಂಬ ಸಂದೇಶವನ್ನು ಸಾರಿದ್ದಾರೆ.
ಚನ್ನಗಿರಿ ತಾಲೂಕಿನ ಬೆಳಲಗೆರೆ ಗ್ರಾಮದ ಅಖಾಡದ ರಂಗಪ್ಪ ಮತ್ತು ಯಲ್ಲಮ್ಮಗೆ ಒಂದು ಗಂಡು ಸೇರಿ ಆರು ಮಕ್ಕಳಿದ್ದರು. ಈ ಪೈಕಿ ಒಬ್ಬರನ್ನು ಹೊರತುಪಡಿಸಿದರೆ ಉಳಿದ ಐವರಿಗೂ ವಾಕ್ ದೋಷ ಇದೆ. ರಂಗಪ್ಪ ಹಾಗೂ ರಂಗಪ್ಪನ ಮಗ ಈಗಾಗಲೇ ಸಾವನ್ನಪ್ಪಿದ್ದಾರೆ. ಕೊನೆ ಮಗಳು 27 ವರ್ಷದ ಕೆಂಚಮ್ಮಗೆ ಹರಪನಹಳ್ಳಿ ತಾಲೂಕು ಉಚ್ಚಂಗಿದುರ್ಗದ ಸಮೀಪ ವಡ್ಡಳ್ಳಿ ಮಂಜುನಾಥ್ ಎಂಬ ವಾಕ್ ದೋಷ ಇರುವ ಯುವಕನೊಂದಿಗೆ ಸುಮಾರು ಎಂಟು ತಿಂಗಳ ಹಿಂದೆ ವಿವಾಹ ನಿಶ್ಚಯವಾಗಿತ್ತು.
ದಾವಣಗೆರೆ; ಚನ್ನಗಿರಿ & ಹರಿಹರದಲ್ಲಿ ಕೆಲಸ ಖಾಲಿ ಇದೆ
ಕುಟುಂಬಕ್ಕೆ ನೆರವಾದ ತೇಜಸ್ವಿ ವಿ.ಪಟೇಲ್
ವಿವಾಹಕ್ಕೆ ತುಂಬಾ ಅಗತ್ಯವಿರುವ ಮಾಂಗಲ್ಯ ಸರ ಮಾಡಿಸಲು ಸುಮಾರು 2 ಲಕ್ಷ ರೂಪಾಯಿ ಹೊಂದಿಸಲು ಈ ಕುಟುಂಬ ತುಂಬಾ ಕಷ್ಟಪಡುತಿತ್ತು. ಈ ಕುಟುಂಬ ಒಮ್ಮೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ತೇಜಸ್ವಿ ಪಟೇಲ್ ಅವರ ಬಳಿ ಬಂದಿದ್ದರು. ಆಗ ವಾಕ್ ದೋಷ ಇರುವ ವಧು- ವರರ ಮದುವೆ ನಿಶ್ಚಯವಾಗಿದೆ ಎಂದು ಕುಟುಂಬದವರು ಹೇಳಿದ್ದರು.
ಬಡತನದಿಂದ ಕಂಗೆಟ್ಟಿದ್ದ ಕೆಂಚ್ಚಮ್ಮ
ಕೆಂಚಮ್ಮನ ಕುಟುಂಬದವರು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದವರಾಗಿದ್ದರು. ಆದ್ದರಿಂದ ಕೆಂಚಮ್ಮನ ಕುಟುಂಬದವರಿಗೆ ತೇಜಸ್ವಿ ವಿ. ಪಟೇಲ್ ಅವರು ಬುಡಕಟ್ಟು ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಂದ ಧನ ಸಹಾಯ ಮಾಡಿಸಬಹುದೆಂಬ ಯೋಚನೆಯನ್ನು ಹೊಂದಿದ್ದರು. ಹಾಗೂ ಕೆಂಚಮ್ಮನ ಮದುವೆಗೆ ಸರ್ಕಾರದಿಂದ ಹಣ ಕೊಡಿಸುವ ಭರವಸೆಯನ್ನು ನೀಡಿದ್ದರು.
ಹಣದ ಜವಾಬ್ದಾರಿ ಹೊತ್ತಿದ್ದ ತೇಜಸ್ವಿ ವಿ.ಪಟೇಲ್
ಬಳಿಕ ಈ ಇಲಾಖೆಗಳನ್ನು ಸಂಪರ್ಕಿಸಿದಾಗ ಇಂತಹ ಜೋಡಿಗೆ ಯಾವುದೇ ವಿಶೇಷ ಯೋಜನೆ ಇಲ್ಲ ಎಂಬುದು ಗೊತ್ತಾಗಿದೆ. ನನ್ನನ್ನೆೇ ನಂಬಿ ವಿವಾಹಕ್ಕೆ ಸಿದ್ಧತೆ ಮಾಡಿಕೊಂಡಿರುವುದರಿಂದ ಅವರಿಗೆ ಹಣ ವ್ಯವಸ್ಥೆ ಮಾಡುವ ಜವಾಬ್ದಾರಿ ಹೆಚ್ಚಾಯಿತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚನ್ನಗಿರಿಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಬೇಕೆಂಬುದು ಅಭಿಮಾನಿಗಳ ಒಲವು ಆಗಿದೆ. ಈ ಪ್ರಯುಕ್ತ ಕಾಂಗ್ರೆಸ್ ಪಕ್ಷದಲ್ಲಿ ಅರ್ಜಿ ಹಾಕಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆ. ಕೆಪಿಸಿಸಿ ಕಚೇರಿಯಲ್ಲಿ 2 ಲಕ್ಷ ರೂಪಾಯಿ ಡಿಡಿಯೊಂದಿಗೆ ಅರ್ಜಿ ಹಾಕಬೇಕಿದೆ. ಈ ಮಧ್ಯೆ ಕೆಪಿಸಿಸಿ ಕಚೇರಿಗೆ ಎರಡು ಲಕ್ಷ ತುಂಬಾ ಚಿಕ್ಕ ಮೊತ್ತ ಆಗಿದೆ. ಅದೇ ಎರಡು ಲಕ್ಷ ರೂಪಾಯಿಯನ್ನು ಕೆಂಚಮ್ಮ ಕುಟುಂಬಕ್ಕೆ ನೀಡಿದರೆ ಒಳ್ಳೆಯದಾಗುತ್ತದೆ ಎಂಬ ಭಾವನೆಯಿಂದ ಆ ಡಿಡಿಯನ್ನು ನೀಡಿದ್ದೇನೆ ಎಂದು ತೇಜಸ್ವಿ ಪಟೇಲ್ ಹೇಳಿದ್ದಾರೆ.
ಬಡಕುಟುಂಬಕ್ಕೆ ನೆರವಾದ ತೇಜಸ್ವಿ
ಕೆಂಚಮ್ಮನಿಗೆ ಬಹಿರಂಗ ವೇದಿಕೆಯಲ್ಲಿ ಡಿಡಿ ಮೂಲಕ ಹಣವನ್ನು ನೀಡಿದ್ದೇನೆ. ಡಿಡಿ ಜೆರಾಕ್ಸ್ ಪ್ರತಿಯೊಂದಿಗೆ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಹಾಕಬೇಕು. ಕೆಂಚಮ್ಮಗೆ ನೀಡಿರುವ ಡಿಡಿ ಕೆಪಿಸಿಸಿ ಕಚೇರಿಗೆ ಕೊಡಲಾಗಿದೆ ಎಂದು ಭಾವಿಸಿ ಅರ್ಜಿಯನ್ನು ಪರಿಗಣಿಸುವಂತೆ ಮನವಿ ಮಾಡುವ ಆಲೋಚನೆಯೂ ಇದೆ. ಕೆಪಿಸಿಸಿಯು ನೂತನ ಕಟ್ಟಡ ನಿರ್ಮಿಸಲು ಅರ್ಜಿ ಜೊತಗೆ ಎರಡು ಲಕ್ಷ ಪಡೆಯುತ್ತಿದೆ. ಈ ಹಣ ನೀಡುತ್ತಿರುವುದು ಬಡ ಮಹಿಳೆಯ ಜೀವನ ಕಟ್ಟಿಕೊಳ್ಳುವುದಕ್ಕೆ ಆಗುತ್ತದೆ ಎನ್ನುವ ಭಾವನೆ ನನ್ನದು. ಕೆಪಿಸಿಸಿ ನನ್ನ ಅಭಿಲಾಷೆಗೆ ಸಹಮತ ವ್ಯಕ್ತಪಡಿಸದಿದ್ದಲ್ಲಿ ದಾವಣಗೆರೆಯಲ್ಲಿ ಅಧಿಕೃತವಾಗಿ ಡಾ. ಶಾಮನೂರು ಶಿವಶಂಕರಪ್ಪನವರ ಮೂಲಕ ಡಿಡಿಯನ್ನು ಪುನಃ ನೀಡಲಾಗವುದು. ಆಗ ಕೆಪಿಸಿಸಿಯೇ ಕೆಂಚ್ಚಮ್ಮಗೆ ಹಣದ ನೆರವು ನೀಡಿದಂತೆ ಆಗುತ್ತದೆ ಎಂದು ತೇಜಸ್ವಿ ವಿ.ಪಟೇಲ್ ತಿಳಿಸಿದ್ದಾರೆ.