ಮಾಜಿ ಶಾಸಕ, ನೇತ್ರ ತಜ್ಞ ತಿಪ್ಪೇಸ್ವಾಮಿ ಸಮಾಧಿ ಧ್ವಂಸ: ನ.24ರಂದು ಬೃಹತ್ ಪ್ರತಿಭಟನೆ
ದಾವಣಗೆರೆ, ನವೆಂಬರ್22: ಮಾಜಿ ಶಾಸಕ, ಖ್ಯಾತ ನೇತ್ರ ತಜ್ಞ ಡಾ. ಬಿ. ಎಂ. ತಿಪ್ಪೇಸ್ವಾಮಿ ಸೇರಿದಂತೆ ಅವರ ಕುಟುಂಬದ ಮೂವರ ಸಮಾಧಿಗಳನ್ನು ಕಿಡಿಗೇಡಿಗಳು ಧ್ವಂಸ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಭೂಕಬಳಿಕೆದಾರರಿಂದ ಸಮಾಧಿಗಳ ಧ್ವಂಸ ನಡೆದಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಮಾದಿಗ ಜನಾಂಗದ ಮುಖಂಡರು ಹಾಗೂ ಡಾ. ಬಿ. ಎಂ.ತಿಪ್ಪೇಸ್ವಾಮಿ ಅವರ ಕುಟುಂಬ ಸದಸ್ಯರು ನವೆಂಬರ್ 24ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ದಾವಣಗೆರೆ ನಗರದ ಶಿವಕುಮಾರ್ ಬಡಾವಣೆಯ ವಿದ್ಯುತ್ ನಗರ ಸಮೀಪದಲ್ಲಿರುವ 20 ಗುಂಟೆ ಜಾಗದಲ್ಲಿ ಡಾ. ಬಿ. ಎಂ. ತಿಪ್ಪೇಸ್ವಾಮಿ ಅವರ ಸಮಾಧಿ ಮಾಡಲಾಗಿತ್ತು. ಇದರ ಪಕ್ಕದಲ್ಲಿಯೇ ಬಿ. ಟಿ. ಮೋಹನ್, ತಾಯಿ ಯಲ್ಲಮ್ಮ, ಪುತ್ರ ಮಲ್ಲಿಕಾರ್ಜುನ್ ಅವರ ಸಮಾಧಿ ಮಾಡಲಾಗಿತ್ತು.
ಗಂಗಗೊಂಡನಹಳ್ಳಿಯಲ್ಲಿ ಕೊಲೆ: ಶಿರಲಿಗಪುರ ಕಣಿವೆ ಬಳಿ ಪತ್ನಿ ಶವ ಹೂತಿಟ್ಟ ಪತಿಯ ಬಂಧನ
ಕಳೆದ ಭಾನುವಾರ ಕೆಲವರು ಜೆಸಿಬಿ ತಂದು ಸಮಾಧಿ ಒಡೆದು ಹಾಕಿದ್ದಾರೆ. ಹೀಗಾಗಿ ಕೂಡಲೇ ತಪ್ಪು ಎಸಗಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನವೆಂಬರ್ 24ರಂದು ಸಮಾಧಿ ಸ್ಥಳದಿಂದ ಎ. ಸಿ. ಕಚೇರಿಯವರೆಗೆ ಮೆರವಣಿಗೆಯಲ್ಲಿ ಬಂದು ಮನವಿ ಸಲ್ಲಿಸಲಾಗುವುದು ಎಂದು ತಿಪ್ಪೇಸ್ವಾಮಿ ಪುತ್ರಿ ಜಾಹ್ನವಿ ತಿಳಿಸಿದ್ದಾರೆ.
ಯಾವುದೇ ಮುನ್ಸೂಚನೆ ಇಲ್ಲದೆ ಮಾಜಿ ಶಾಸಕರ ಸಮಾಧಿ ಧ್ವಂಸ
ಘಟನೆಯ ಬಗ್ಗೆ ಮಾತನಾಡಿರುವ ಜಾಹ್ನವಿ,"ಭಾನುವಾರ ಮಧ್ಯಾಹ್ನ 11 ಗಂಟೆ ಸುಮಾರಿಗೆ ಯಾವುದೇ ಮುನ್ಸೂಚನೆ ಇಲ್ಲದೇ, ಜೆಸಿಬಿಯಿಂದ ಸಮಾಧಿ ಧ್ವಂಸ ಮಾಡಿರುವುದು ಕುಟುಂಬ ಸದಸ್ಯರು ಹಾಗೂ ಮಾದಿಗ ಸಮಾಜಕ್ಕೆ ಆಘಾತ ಉಂಟು ಮಾಡಿದೆ. ತಿಪ್ಪೇಸ್ವಾಮಿ ಅವರು ಮಾದಿಗ ಸಮಾಜದಲ್ಲಿ ಹುಟ್ಟಿ ದೇಶ ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆದು ವೈದ್ಯಕೀಯ ಕಾಲೇಜಿನ ಮುಖ್ಯಸ್ಥರಾಗಿ ಹಲವರಿಗೆ ಬೆಳಕು ನೀಡಿದವರು. ಖ್ಯಾತ ನೇತ್ರ ತಜ್ಞರು ಹೌದು. ಕೆಪಿಎಸ್ಸಿ ಸದಸ್ಯರಾಗಿ ವಿದ್ಯಾವಂತ ಯುವಕರಿಗೆ ಸರ್ಕಾರಿ ಸೇವೆಗೆ ಸೇರಿಕೊಳ್ಳಲು ಜಾಗೃತಿ ಮೂಡಿಸಿದವರು. 1985ರಲ್ಲಿ ಭರಮಸಾಗರದ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿ ಶಾಸಕರಾಗಿ ಅತ್ಯುತ್ತಮ ಕೆಲಸ ನಿರ್ವಹಿಸಿದವರು. ಅಂಥವರ ಸಮಾಧಿಗೆ ರಕ್ಷಣೆ ಇಲ್ಲ ಎಂದರೆ ಭೂಗಳ್ಳರು ಎಷ್ಟರ ಮಟ್ಟಿಗೆ ಪ್ರಭಾವಿಗಳಿದ್ದಾರೆ ಎಂಬುದು ಗೊತ್ತಾಗುತ್ತದೆ" ಎಂದು ಆತಂಕ ವ್ಯಕ್ತಪಡಿಸಿದರು.
ಈ ಜಾಗ ನಮ್ಮ ಕುಟುಂಬಕ್ಕೆ ಪೂಜ್ಯಸ್ಥಾನ ಎಂದ ತಿಪ್ಪೇಸ್ವಾಮಿ ಪುತ್ರಿ
"1978ರಲ್ಲಿ ನಿರುದ್ಯೋಗಿ ವಿದ್ಯಾವಂತರಾಗಿದ್ದ ತಿಪ್ಪೇಸ್ವಾಮಿ ಹಿರಿಯ ಪುತ್ರ ಬಿ. ಟಿ. ಮಲ್ಲಿಕಾರ್ಜುನ್ ಅವರಿಗೆ ಸರ್ಕಾರದಿಂದ ಸ್ವ - ಉದ್ಯೋಗಕ್ಕಾಗಿ ದಾವಣಗೆರೆ ನಿಟುವಳ್ಳಿಯಲ್ಲಿ 2 ಎಕರೆ 11 ಗಂಟೆ ಭೂಮಿ ಮಂಜೂರಾಗಿತ್ತು. ಈ ಸ್ಥಳವನ್ನು ಡೈರಿ ಹಾಗೂ ಇತರೆ ಸ್ವಯಂ ಉದ್ಯೋಗಕ್ಕೆ ಉಪಯೋಗಿಸಲಾಗುತಿತ್ತು. 1990ರಲ್ಲಿ ತಿಪ್ಪೇಸ್ವಾಮಿ ಅವರು ಮೃತಪಟ್ಟಾಗ ಈ ಜಮೀನಿನ ಒಂದು ಭಾಗದಲ್ಲಿ ಅಂತ್ಯಕ್ರಿಯೆ ಮಾಡಿ ಸಮಾಧಿ ನಿರ್ಮಾಣ ಮಾಡಲಾಗಿತ್ತು. ನಂತರ 1999ರಲ್ಲಿ ಅವರ ಪತ್ನಿ ಯಲ್ಲಮ್ಮರನ್ನು ಸಹ ಈ ಸ್ಥಳದಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗಿತ್ತು. 2016ರಲ್ಲಿ ಅವರ ಹಿರಿಯ ಮಗ ಮಲ್ಲಿಕಾರ್ಜುನ್ ಸಹ ಸಾವನ್ನಪ್ಪಿದ್ದು, ಇಲ್ಲಿಯೇ ಸಮಾಧಿ ಮಾಡಲಾಗಿತ್ತು. ಈ ಕಾರಣದಿಂದ ಈ ಜಾಗ ನಮ್ಮ ಕುಟುಂಬಕ್ಕೆ ಪೂಜ್ಯಸ್ಥಾನ. ಇಲ್ಲಿ ಪೂಜೆ ನೆರವೇರಿಸಿಕೊಂಡು ಬರಲಾಗುತಿತ್ತು," ಎಂದು ಜಾಹ್ನವಿ ತಿಳಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ 254 ಸಿಸಿಟಿವಿ ಕ್ಯಾಮೆರಾ ಕಣ್ಗಾವಲು: ಏನೆಲ್ಲಾ ವಿಶೇಷತೆ ಇದೆ?
ಜಾಗದ ಖಾತೆ ನಮ್ಮ ಹೆಸರಿನಲ್ಲಿದೆ
ಮಾತು ಮುಂದುವರಿಸಿದ ಅವರು, "ವೈಯಕ್ತಿಕ ಉದ್ದೇಶಕ್ಕೆ ಬಳಸದೇ ಈ 20 ಗುಂಟೆ ಜಾಗದಲ್ಲಿ ಡಾ. ತಿಪ್ಪೇಸ್ವಾಮಿಯವರ ಸ್ಮಾರಕ ಸ್ಥಾಪಿಸುವ ಉದ್ದೇಶ ಹೊಂದಲಾಗಿತ್ತು. ಆದರೆ, ಈ ಭೂಮಿಗೆ ಸಂಬಂಧಿಸಿದಂತೆ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದು, 2002ರಲ್ಲಿ ಮಲ್ಲಿಕಾರ್ಜುನ್ ಅವರಿಗೆ ಮಂಜೂರಾದ ಭೂಮಿ ನ್ಯಾಯಸಮ್ಮತ ಎಂಬುದಾಗಿ ಹೈಕೋರ್ಟ್ ಆದೇಶ ನೀಡಿದೆ. ಮಲ್ಲಿಕಾರ್ಜುನ್ ಮರಣ ನಂತರ ಅವರ ಪತ್ನಿ ಪುಷ್ಪಲತಾ, ಮಕ್ಕಳಾದ ರಾಹುಲ್ ಹಾಗೂ ನಕುಲ್ ಅವರ ಹೆಸರಿಗೆ ವರ್ಗಾವಣೆಯಾಗಿದೆ. ಕೆಲವರು ನಕಲಿ ಪಾಣಿ ಸೃಷ್ಟಿಸಿದ್ದರೂ, ಖಾತೆ ನಮ್ಮ ಹೆಸರಿನಲ್ಲಿದೆ," ಎಂದು ಹೇಳಿದರು.
ಸಮಾಧಿ ಧ್ವಂಸ ಸಂಬಂಧ ಎಫ್ಐಆರ್ ದಾಖಲು
"ಹುಲ್ಲುಮನಿ ಗಣೇಶ್ ಮತ್ತು ಇತರರು ಸೇರಿಕೊಂಡು ಸಮಾಧಿ ಧ್ವಂಸ ಮಾಡುವಾಗ ಎಷ್ಟೇ ಬೇಡಿಕೊಂಡರೂ ಕೇಳದೇ ಒಡೆದು ಹಾಕಿದರು. ಕುಟುಂಬದವರು ಪ್ರತಿಭಟಿಸಿದಾಗ ನಮ್ಮ ಮೇಲೆ ಹಲ್ಲೆ ನಡೆಸುವ ಪ್ರಯತ್ನವೂ ನಡೆದಿದೆ. ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. 32 ವರ್ಷಗಳಿಂದ ಅಲ್ಲೇ ಇದ್ದ ಡಾ. ತಿಪ್ಪೇಸ್ವಾಮಿಯವರ ಸಮಾಧಿ ಇದ್ದರೂ ಯಾರೂ ಬಂದಿರಲಿಲ್ಲ. ಆದರೆ ಈಗ ಏಕಾಏಕಿಯಾಗಿ ಬಂದು ಧ್ವಂಸ ಮಾಡಿರುವುದು ಅಕ್ಷಮ್ಯ," ಎಂದು ಹೇಳಿದರು.
ಆರೋಪಿಗಳನ್ನು ಬಂಧಿಸುವಂತೆ ತಿಪ್ಪೇಸ್ವಾಮಿ ಕುಟುಂಬಸ್ಥರ ಆಗ್ರಹ
ಇನ್ನು ನವೆಂಬರ್ 24ರಂದು ನಡೆಯುವ ಪ್ರತಿಭಟನೆಯಲ್ಲಿ ದಾವಣಗೆರೆ, ಚಿತ್ರದುರ್ಗ ಸೇರಿದಂತೆ ರಾಜ್ಯದ ದಲಿತ ಸಂಘರ್ಷ ಸಮಿತಿ ಮುಖಂಡರು, ಪದಾಧಿಕಾರಿಗಳು ಸೇರಿದಂತೆ ಹಲವರು ಆಗಮಿಸಲಿದ್ದಾರೆ. ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಧ್ವಂಸಗೊಳಿಸಿರುವ ಸಮಾಧಿಗಳನ್ನು ಪುನರ್ ನಿರ್ಮಾಣ ಮಾಡಬೇಕು ಎಂದು ತಿಪ್ಪೇಸ್ವಾಮಿ ಪುತ್ರಿ ಜಾಹ್ನವಿ ಒತ್ತಾಯಿಸಿದರು.
ಮಂಗಳವಾರ ನಡೆದದ ಸುದ್ದಿ ಗೋಷ್ಠಿಯಲ್ಲಿ ಮಾಜಿ ಶಾಸಕ ತಿಪ್ಪೇಸ್ವಾಮಿ ಅವರ ಸೊಸೆ ಬಿ. ಎಂ. ಪುಷ್ಪಲತಾ, ಮೊಮ್ಮಗ ರಾಹುಲ್, ಗೋದಾವರಿ, ನಿವೃತ್ತ ಎಸ್ಪಿ ರವಿನಾರಾಯಣ್, ಪಾಲಿಕೆ ಸದಸ್ಯ ಗೋಣೆಪ್ಪ, ಸುವರ್ಣಮ್ಮ, ಗಾಯತ್ರಿ, ಮಂಜುನಾಥ್, ಆಲೂರು ನಿಂಗರಾಜ್ ಮತ್ತಿತರರು ಹಾಜರಿದ್ದರು.