ದಾವಣಗೆರೆ: ಕೊಡಗನೂರು ಕೆರೆ ಏರಿ, ರಸ್ತೆಯಲ್ಲಿ ಬಿರುಕು, ಆತಂಕದಲ್ಲಿ ಜನರು
ದಾವಣಗೆರೆ, ಅಕ್ಟೋಬರ್, 18: ಜಿಲ್ಲೆಯಲ್ಲಿ ಭಾರಿ ಮಳೆ ಸುರಿದ ಕಾರಣ ಎಲ್ಲಾ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಹಳ್ಳಕೊಳ್ಳಗಳು ತುಂಬಿ ಹರಿದಿದ್ದು, ಮಳೆ ನಿಂತ ಮೇಲೆ ಕೂಡಾ ಸಮಸ್ಯೆಯ ಸರಮಾಲೆಗಳು ಸೃಷ್ಟಿ ಆಗುತ್ತಲೇ ಇವೆ.
ದಾವಣಗೆರೆ ಜಿಲ್ಲೆಯಲ್ಲಿ ಈ ವರ್ಷದಲ್ಲಿ ಕಂಡುಕೇಳರಿಯದಂತಹ ಮಳೆ ಸುರಿದಿದೆ. ಇದರಿಂದಾಗಿ ಜಿಲ್ಲೆಯಲ್ಲಿ ನಷ್ಟ ಹೆಚ್ಚುತ್ತಲೇ ಇದೆ. ಕೆಲವೆಡೆ ಕೆರೆ ಏರಿಗಳು ಸಹ ಕುಸಿಯಲು ಆರಂಭಿಸಿವೆ. ಇದು ಜನರು ಮತ್ತು ರೈತರಲ್ಲಿ ಆತಂಕ ಮೂಡಿಸಿದೆ. ದಾವಣಗೆರೆ ತಾಲೂಕಿನ ಕೊಡಗನೂರು ಗ್ರಾಮದ ಕೆರೆಯು ಅತಿ ದೊಡ್ಡ ಕೆರೆ ಆಗಿದೆ. ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಇದು ಒಂದಾಗಿದ್ದು, ಸಾವಿರಾರು ಹೆಕ್ಟೇರ್ ಪ್ರದೇಶಗಳಿಗೆ ನೀರುಣಿಸುತ್ತದೆ.
ಜಗಳೂರು; ವರ್ಷದಲ್ಲಿ ಮೂರನೇ ಬಾರಿ ಕೋಡಿ ಬಿದ್ದ ಅಣಜಿ ಕೆರೆ, ಮನೆಗಳಿಗೆ ನುಗ್ಗಿದ ನೀರು
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಸುಮಾರು 800 ಹೆಕ್ಟೇರ್ ಪ್ರದೇಶದಲ್ಲಿರುವ ಈ ಕೆರೆ ತುಂಬಿ ತುಳುಕುತ್ತಿದೆ. ಕೆರೆಯೇರಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ರಸ್ತೆ ಬಿರುಕು ಬಿಟ್ಟಿದ್ದು, ವಾಹನ ಸವಾರರು ಸಂಚರಿಸಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವ ಸಮಯದಲ್ಲಾದರೂ ಕೆರೆ ಏರಿ ಒಡೆದು ಮನೆಗಳಿಗೆ ನೀರು ನುಗ್ಗಬಹುದು ಎಂಬ ಭೀತಿಯೂ ಜನರಲ್ಲಿ ಮೂಡಿದೆ. ಒಂದು ವೇಳೆ ಕೆರೆ ಏರಿ ಒಡೆದರೆ ಭಾರಿ ಅನಾಹುತ ಸಂಭವಿಸುತ್ತದೆ. ಹಲವು ಗ್ರಾಮಗಳು ಜಲಾವೃತವಾಗಲಿವೆ. ಅಲ್ಲದೆ ಗ್ರಾಮಗಳು ಜಲಾವೃತವಾದರೆ ಅಪಾಯವೂ ಕಾದಿದೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ಮುಂದುವರೆದ ಮಳೆ ಆರ್ಭಟ
ಕೆರೆ ಏರಿ ಮತ್ತು ರಸ್ತೆಯಲ್ಲಿ ಪದೇ ಪದೇ ಬಿರುಕು ಕಾಣಿಸಿಕೊಳ್ಳುತ್ತಿರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಅಧಿಕಾರಿಗಳು ಕೂಡಲೇ ಈ ಬಗ್ಗೆ ಅರಿತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಿರುಕು ಬಿಟ್ಟಿರುವ ಕೆರೆ ಏರಿ ಮತ್ತು ರಸ್ತೆಯನ್ನು ಆದಷ್ಟು ಬೇಗ ದುರಸ್ತಿಪಡಿಸಬೇಕು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಭಾರಿ ಸಮಸ್ಯೆ ಎದುರಾಗುವುದು ಖಚಿತ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ - ಹೊಳಲ್ಕೆರೆ ರಸ್ತೆ ಬಂದ್
ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ದಾವಣಗೆರೆ - ಹೊಳಲ್ಕೆರೆ ಮಾರ್ಗದ ರಸ್ತೆ ಬಂದ್ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವಾಹನ ಸಂಚಾವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಲ್ಲಿನ ಸ್ಥಳೀಯರು ತಿಳಿಸಿದ್ದಾರೆ. ನಿತ್ಯವೂ ಈ ಮಾರ್ಗದಲ್ಲಿ ಕಾರು, ಬಸ್, ಬೈಕ್ ಸೇರಿದಂತೆ ನೂರಾರು ವಾಹನಗಳು ಓಡಾಡುತ್ತವೆ. ಇದೀಗ ರಸ್ತೆ ಬಿರುಕು ಬಿಟ್ಟಿರುವುದರಿಂದ ಯಾವ ವಾಹನವೂ ಇಲ್ಲಿ ಓಡಾಡುವಂತಿಲ್ಲ. ಜನರು ಎಚ್ಚರ ವಹಿಸುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದೆ.
ಸಮಸ್ಯೆ ಬಗೆಹರಿಸುವಂತೆ ಭರವಸೆ
ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಬಸವಂತಪ್ಪ ಸ್ಥಳಕ್ಕೆ ಭೇಟಿ ನೀಡಿದರು. ಕೆರೆ ಏರಿ ಮತ್ತು ರಸ್ತೆಯಲ್ಲಿ ಬಿರುಕು ಬಿಟ್ಟಿರುವುದನ್ನು ವೀಕ್ಷಿಸಿದರು. ಸ್ಥಳೀಯರ ಜೊತೆ ಸಮಾಲೋಚನೆ ನಡೆಸಿ, ಆಗಿರುವ ಸಮಸ್ಯೆ ಕುರಿತಂತೆ ಮಾಹಿತಿ ಪಡೆದರು. ಸಣ್ಣ ನೀರಾವರಿ ಇಲಾಖೆಯ ಸಿಬ್ಬಂದಿಯನ್ನು ಸ್ಥಳಕ್ಕೆ ಬರುವಂತೆ ಸೂಚಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಎಇಇಗಳಾದ ರಾಧಾಕೃಷ್ಣ, ಶೆಟ್ಟಿ ಶಿವಮೂರ್ತಿ, ಎಇ ಪ್ರವೀಣ್ ಕುಮಾರ್ ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು ಮುಂದೆ ಆಗುವ ಅನಾಹುತವನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.
ಅಪಾಯದ ಮಟ್ಟದಲ್ಲಿ ನೀರು ಸಂಗ್ರಹ
ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಭಾರಿ ಮಳೆ ಸುರಿದ ಪರಿಣಾಮ ಹಳ್ಳ-ಕೊಳ್ಳಗಳ ಮೂಲಕ ನೀರು ರಭಸವಾಗಿ ಹರಿದು ಬರುತ್ತಲೇ ಇದೆ. ಇದರಿಂದಾಗಿ ಕೆರೆಗಳು ಉಕ್ಕಿ ಹರಿದಿದ್ದು, ಹಳೆಯ ಕಾಲದ ಕೆರೆಗಳಲ್ಲಿ ಅಪಾಯದ ಮಟ್ಟದಲ್ಲಿ ನೀರು ಸಂಗ್ರಹವಾಗಿದೆ. ಕೆರೆ ಕೋಡಿಗಳು ಬಿದ್ದಿದ್ದು, ಜಮೀನುಗಳಿಗೆ ನುಗ್ಗಿ ಬೆಳೆಗಳು ಹಾನಿಯಾಗುತ್ತಲೇ ಇವೆ. ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.