ದಾವಣಗೆರೆಯಿಂದ ಧಾರವಾಡದ ಇಟಿಗಟ್ಟಿವರೆಗೆ ರಸ್ತೆ ಅಪಘಾತ ತಡೆಯಲು ಜಾಗೃತಿ ಜಾಥಾ
ದಾವಣಗೆರೆ, ಫೆಬ್ರವರಿ 4: ಧಾರವಾಡದ ಇಟಿಗಟ್ಟಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ದಾವಣಗೆರೆಯ 13 ಮಂದಿ ಮೃತಪಟ್ಟಿದ್ದಾರೆ. ಈ ರೀತಿ ಘಟನೆಗಳು ಮರುಕಳಿಸದಂತೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿಯೊಂದು ಜೀವವು ಅತ್ಯಮೂಲ್ಯ ಎಂಬ ಧ್ಯೇಯ ವಾಕ್ಯದಡಿ ಫೆ.6 ರಂದು ಜಾಗೃತ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಆರೈಕೆ ಆಸ್ಪತ್ರೆಯ ಮೃತ ಪ್ರೀತಿ ಪತಿ ಡಾ.ರಮೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ 12 ಜನರನ್ನು ನಾವು ಕಳೆದುಕೊಂಡಿದ್ದೇವೆ. ಈ ರೀತಿ ದುರ್ಘಟನೆಗಳು ಮತ್ತೆ ನಡೆಯದಂತೆ, ನಮ್ಮ ಕುಟುಂಬಗಳಿಗೆ ಆದ ನೋವು ಬೇರೆ ಕುಟುಂಬಗಳಿಗೆ ಆಗದಂತೆ ರಸ್ತೆ ಅಪಘಾತಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದಾವಣಗೆರೆ ಎಂಸಿಸಿ ಬಿ ಬ್ಲಾಕ್ ನಿಂದ 40 ಕಾರುಗಳ ಮೂಲಕ ಮೃತರ ಕುಟುಂಬದವರು, ಸ್ನೇಹಿತರು ಜಾಥಾವನ್ನು ಹಮ್ಮಿಕೊಂಡಿದ್ದು, ಈ ಜಾಥಾವು ಧಾರವಾಡದ ಇಟಿಗಟ್ಟಿ ಬಳಿ ಸಂಭವಿಸಿದ ಅಪಘಾತ ಸ್ಥಳಕ್ಕೆ ತಲುಪಿ, ಅಲ್ಲಿ ಕಲಾಕುಂಚ ಕಲಾವಿದರಿಂದ ಮೃತರ ಚಿತ್ರಗಳು ಬಿಡಿಸಿ, ಚಿತ್ರ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ಹೇಳಿದರು.
ಜಾಥಾದಲ್ಲಿ ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮುಂದೆ ಅಪಘಾತಗಳು ನಡೆಯದಂತೆ ಮಂಜಾಗ್ರತೆ ಕ್ರಮಕೈಗೊಳ್ಳಲು ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಮತ್ತು ಒಳಸಾರಿಗೆ ಇಲಾಖೆಯನ್ನು ಒತ್ತಾಯಿಸಲಾಗುವುದು. ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯನ್ನು ಆರು ಪಥವನ್ನಾಗಿ ಅತೀ ಶೀಘ್ರದಲ್ಲಿ ಬದಲಿಸಬೇಕು.

ಹುಬ್ಬಳಿ-ಧಾರವಾಡ ಬೈಪಾಸ್ ನಲ್ಲಿ ಅಪಘಾತಗಳನ್ನು ತಡೆಯಲು ತುರ್ತುಕ್ರಮ ಕೈಗೊಂಡು ರಸ್ತೆ ಅಪಘಾತಗಳನ್ನು ತಡೆಯುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಓಲಾ ಸಾರಿಗೆ ಸಂಸ್ಥೆಗಳನ್ನು ಒತ್ತಾಯಿಸಿ ಧಾರವಾಡ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ರಾಜ್ಯ ಸದಸ್ಯ ವಿನಯ್ ಚಂದ್ರ ಮಾತನಾಡಿ, ರಸ್ತೆ ಬದಿಗಳಲ್ಲಿ ಲಾರಿಗಳನ್ನು ನಿಲ್ಲಿಸುವುದರಿಂದ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ ಪೊಲೀಸ್ ಇಲಾಖೆ ರಸ್ತೆಗಳ ಪಕ್ಕದಲ್ಲಿ ಲಾರಿಗಳು ನಿಲ್ಲಿಸಿದಂತೆ ಚಾಲಕರಿಗೆ ಎಚ್ಚರಿಕೆ ನೀಡಬೇಕು. ಹೆದ್ದಾರಿಗಳಲ್ಲಿ 60 ಕಿಲೋಮೀಟರ್ ಹಂತರದಲ್ಲಿ ಒಂದು ತುರ್ತು ಆಂಬ್ಯುಲೆನ್ಸ್ ವ್ಯವಸ್ಥೆ ಇರುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಆದರೆ 100 ಕಿಲೋಮೀಟರ್ ಹೋದರೂ ತುರ್ತು ಆಂಬ್ಯುಲೆನ್ಸ್ಗಳು ಇರುವುದಿಲ್ಲ. ಇದರ ಬಗ್ಗೆ ಗಂಭೀರವಾಗಿ ಅಧಿಕಾರಿಗಳು ಪರಿಗಣಿಸಿ 30 ಕಿಲೋಮೀಟರ್ ಒಂದು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಡಾ.ರಮೇಶ್, ಚಂದ್ರಶೇಖರ್, ಸಿದ್ದು ಮತ್ತು ಸಂಜೀವಿನಿ ಟ್ರಸ್ಟ್ ಸದಸ್ಯ ಶಶಿಕುಮಾರ್ ಸೇರಿದಂತೆ ಮುಂತಾದವರು ಇದ್ದರು.












Click it and Unblock the Notifications