ಶಾಸಕ ರೇಣುಕಾಚಾರ್ಯರೇ ನೋಡಿ: ನಿಮ್ಮದೇ ಕ್ಷೇತ್ರದ ಕೊವಿಡ್-19 ಕೇಂದ್ರದ ಕಥೆ
ದಾವಣಗೆರೆ, ಜೂನ್ 06: ಕೊರೊನಾವೈರಸ್ ವಾರಿಯರ್ಸ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಮ್ಮ ಕಾರ್ಯವೈಖರಿಯಿಂದ ರಾಜ್ಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಾರೆ.
ಒಂದು ಕಡೆ ಕೊವಿಡ್-19 ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುತ್ತೇನೆ ಎಂದು ಶಾಸಕರು ಓಡಾಡುತ್ತಿದ್ದರೆ, ಇನ್ನೊಂದು ದಿಕ್ಕಿನಲ್ಲಿ ಅವರದ್ದೇ ಸ್ವಕ್ಷೇತ್ರದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ ಎಂದು ಕೊರೊನಾವೈರಸ್ ಸೋಂಕಿತರೊಬ್ಬರು ಆರೋಪಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿರುವ ಸೋಂಕಿತರೊಬ್ಬರು ಕೊರೊನಾವೈರಸ್ ಚಿಕಿತ್ಸಾ ಕೇಂದ್ರದ ಅವ್ಯವಸ್ಥೆ ಬಗ್ಗೆ ವಿಡಿಯೋ ಮೂಲಕ ತಿಳಿಸಿದ್ದಾರೆ. ಹಿರಿಯ ಆರೋಗ್ಯ ಅಧಿಕಾರಿ, ತಹಶೀಲ್ದಾರ್, ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಹೊನ್ನಾಳಿ ತಾಲೂಕು ಕೊವಿಡ್-19 ಕೇಂದ್ರದಲ್ಲಿ ಸಮಸ್ಯೆ?:
ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟ ವ್ಯಕ್ತಿಯು ದಾಖಲಾದ ಹಾಸಿಗೆಯನ್ನು ಸ್ಯಾನಿಟೈಸ್ ಮಾಡುತ್ತಿಲ್ಲ. ಒಬ್ಬರು ಬಳಸಿದ ಹಾಸಿಗೆಗೆ ಸ್ಯಾನಿಟೈಸ್ ಮಾಡದೇ ಮತ್ತೊಬ್ಬರನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. ಈ ಅವ್ಯವಸ್ಥೆ ಬಗ್ಗೆ ಪ್ರಸ್ನೆ ಮಾಡಿದ್ದಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯ ಕಾರಣ ಹೇಳಲಾಗುತ್ತಿದೆ ಎಂದು ವಿಡಿಯೋ ಮಾಡಿರುವ ಸೋಂಕಿತ ವ್ಯಕ್ತಿ ದೂಷಿಸಿದ್ದಾರೆ.

ಸಾಯುವುದಕ್ಕೆ ಈ ಆಸ್ಪತ್ರೆಗೆ ಬರಬೇಕೇ?:
ಕೊರೊನಾವೈರಸ್ ಸೋಂಕಿತರು ಬಳಸಿರುವ ಅಥವಾ ಆಸ್ಪತ್ರೆಯಲ್ಲಿ ಸೋಂಕಿನಿಂದಲೇ ಪ್ರಾಣ ಬಿಟ್ಟವರು ಬಳಸಿದ ಹಾಸಿಗೆಯನ್ನು ಮತ್ತೊಬ್ಬರಿಗೆ ನೀಡಲಾಗುತ್ತಿದೆ. ಈ ಅವ್ಯವಸ್ಥೆಯಿಂದಾಗಿ ಜನರ ಜೀವಕ್ಕೆ ಗ್ಯಾರೆಂಟಿ ಇಲ್ಲದಂತೆ ಆಗಿದೆ. ಜನರು ಸಾಯುವುದಕ್ಕಾಗಿ ಈ ಆಸ್ಪತ್ರೆಗೆ ಬರಬೇಕೇ ಎಂದು ಸೋಂಕಿತ ವ್ಯಕ್ತಿ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications