5 ವರ್ಷಗಳ ಕಾಲ ಸಿದ್ದರಾಮಯ್ಯನವರ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿತ್ತು: ಹರಿಹರದಲ್ಲಿ ಸಿಎಂ ಆರೋಪ
ದಾವಣಗೆರೆ, ನವೆಂಬರ್, 23: ಕಾಂಗ್ರೆಸ್ ಅಂದರೆ ಕಮಿಷನ್ ಪಕ್ಷವಾಗಿದೆ. ಬಿಡಿಎ, ಡಿನೊಟಿಫಿಕೇಷನ್, ನೀರಾವರಿ, ಸಣ್ಣ ನೀರಾವರಿ ಸೇರಿದಂತೆ ಎಲ್ಲದರಲ್ಲಿಯೂ ಕಮಿಷನ್ ಪಡೆದಿರುವುದು ಕಾಂಗ್ರೆಸ್ ಪಕ್ಷವಾಗಿದೆ. ಯಾವ ಪುರುಷಾರ್ಥಕ್ಕೆ ರಾಜ್ಯದ ಜನರು ನಿಮಗೆ ಅಧಿಕಾರ ನೀಡಬೇಕು. 5 ವರ್ಷಗಳ ಕಾಲ ಸಿದ್ದರಾಮಯ್ಯನವರ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿತ್ತು. ಅನ್ನ ಭಾಗ್ಯ ಯೋಜನೆಯಡಿ ನೀಡುವ ಅಕ್ಕಿಯನ್ನು ದಂಧೆ ಮಾಡಿತ್ತು. ದಂಧೆಗೆ ಕಾಂಗ್ರೆಸ್ ಸರ್ಕಾರವೇ ನೆರವು ನೀಡಿತ್ತು. ಅದಕ್ಕೆ ಕಡಿವಾಣ ಹಾಕುವ ಕೆಲಸ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರಿಹರದಲ್ಲಿ ತಿಳಿಸಿದರು.
ದಾವಣಗೆರೆ ತಾಲೂಕಿನ ಹರಿಹರ ಪಟ್ಟಣದಲ್ಲಿ ಏರ್ಪಡಿಸಿದ್ದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭ್ರಷ್ಟಾಚಾರದ ಕೂಪವಾಗಿರುವ ಕಾಂಗ್ರೆಸ್ ತಿರಸ್ಕರಿಸಲು ರಾಜ್ಯದ ಜನರು ನಿರ್ಧರಿಸಿದ್ದಾರೆ. ಪಾರದರ್ಶಕ ಆಡಳಿತಕ್ಕಾಗಿ ಬಿಜೆಪಿ ಬೆಂಬಲಿಸಲು ಈಗಾಗಲೇ ನಿರ್ಧರಿಸಿದ್ದಾರೆ. ನಾನು ಸಿಎಂ ಆಗಬೇಕಾದರೆ ಕಾಂಗ್ರೆಸ್ ಗೆಲ್ಲಿಸಿ ಎಂಬುದಾಗಿ ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. ಯಾವ ಕಾರಣಕ್ಕೆ ಮತ್ತೆ ಜನರು ನಿಮ್ಮನ್ನು ಗೆಲ್ಲಿಸಬೇಕು. ಅಧಿಕಾರದಲ್ಲಿದ್ದಾಗ ಯಾವ ಕೆಲಸ ಮಾಡದೇ, ಈಗ ಯಾವ ಮುಖ ಇಟ್ಟುಕೊಂಡು ಮತ ಕೇಳಲು ಹೋಗುತ್ತೀರಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ವಿರುದ್ದ ಬೊಮ್ಮಾಯಿ ಆಕ್ರೋಶ
ಕಾಂಗ್ರೆಸ್ ನೀಡಿದ್ದು ಭಾಗ್ಯಗಳನ್ನಲ್ಲ, ದೌರ್ಭಾಗ್ಯವನ್ನು. ಅಕ್ಕಿ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವಾಗಿದೆ. ಚೀಲ ಕೊಟ್ಟಿದ್ದು ಮಾತ್ರ ಸಿದ್ದರಾಮಯ್ಯ ಸರ್ಕಾರವಾಗಿದೆ. ಕೇಂದ್ರದಿಂದ ನೆರವು ನೀಡಿದ ಕಾರಣಕ್ಕೆ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮಾತ್ರ ಅಭಿವೃದ್ಧಿ ಎಂಬುದು ಜನರಿಗೆ ಗೊತ್ತಿದೆ. ಹಾಗಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಕೈ ಕೊಟ್ಟು ಬಿಜೆಪಿ ಕೈ ಹಿಡಿಯುವುದು ಖಚಿತವಾಗಿದೆ. 132ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮತ್ತೆ ನಾವು ಅಧಿಕಾರಕ್ಕೆ ಏರುತ್ತೇವೆ ಎಂದರು.

ಕೈಗಾರಿಕೆ ನಗರ ಸ್ಥಾಪನೆಗೆ ನಿರ್ಧಾರ
ಬಹಳ ವರ್ಷದಿಂದ ನೆನೆಗುದಿದೆ ಬಿದ್ದಿದ್ದ ಭೈರನಪಾದ ನೀರಾವರಿ ಯೋಜನೆಗೆ ಚಾಲನೆ ನೀಡುತ್ತೇವೆ. ಏತ ನೀರಾವರಿ ಯೋಜನೆಗೆ ಇದೇ ವರ್ಷ ಟೆಂಡರ್ ಕರೆದಿದ್ದು, ಒಂದೇ ವರ್ಷದಲ್ಲಿ ಕಾಮಗಾರಿ ಮಾಡುತ್ತೇವೆ. ಜೊತೆಗೆ ಪ್ರತಿಯೊಂದು ಜಿಲ್ಲೆಗೂ ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗಾರಿಕೆ ನಗರ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. ಹರಿಹರ ಕೈಗಾರಿಕೆ ಕ್ಷೇತ್ರವಾಗಿತ್ತು, ಆದರೆ ಈಗ ಎಲ್ಲವೂ ಬಂದ್ ಆಗಿರುವುದು ದುರ್ದೈವದ ಸಂಗತಿಯಾಗಿದೆ. ಮತ್ತೆ ಹರಿಹರವನ್ನು ಕೈಗಾರಿಕೆ ಕ್ಷೇತ್ರವನ್ನಾಗಿ ಮಾಡಿಯೇ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ಕುರಿಗಳ ಹಂಚಿಕೆಗೆ ಮೀಸಲಿಟ್ಟ ಹಣ ಎಷ್ಟು?
ಹರಿಹರದಲ್ಲಿ ಹಾಲುಮತದ ಜನರು ಹೆಚ್ಚಿದ್ದಾರೆ. ಅವರು ಮಳೆ, ಗಾಳಿ ಬಿಸಿಲು ಎನ್ನದೇ ಜೀವನ ಮಾಡುತ್ತಾರೆ. ಕುರಿಗಾರಿಕೆಗೆ ನಾವು ಕುರಿಗಳನ್ನು ಕೊಡುತ್ತಿದ್ದು, ಇದಕ್ಕಾಗಿಯೇ 354 ಕೋಟಿ ರೂಪಾಯಿ ಮೀಸಲು ಇಡಲಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಕುರಿಗಳನ್ನು ನೀಡುತ್ತೇವೆ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಯಾರು ಮಾಡಲಿಲ್ಲ. ನಾವೇ ರಕ್ಷಣೆ ಮಾಡುವುದು ಅಂತಾ ಕಾಂಗ್ರೆಸ್ ಹೇಳುತ್ತದೆ. ಕಾಂಗ್ರೆಸ್ನವರು ಎಸ್ಟಿ, ಎಸ್ಟಿ ಜನರನ್ನು ಎಲ್ಲಿದ್ದಾರೆಯೋ ಅಲ್ಲಿಯೇ ಇರುವಂತೆ ಮಾಡಿದ್ದಾರೆ. ಆದರೆ ನಾವು ಮೀಸಲಾತಿ ಹೆಚ್ಚಳ ಮಾಡಿದ್ದೇವೆ ಎಂದು ವಿವರಿಸಿದರು.
ನಂತರ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಕೇಂದ್ರ ನಾಯಕರು ಸರ್ವೇ ನಡೆಸಿದ್ದು, 125ಕ್ಕಿಂತ ಹೆಚ್ಚಿನ ಸ್ಥಾನ ಬಿಜೆಪಿಗೆ ಲಭಿಸುತ್ತದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಬಸವರಾಜ ಬೊಮ್ಮಾಯಿ ಅವರು 152 ಸ್ಥಾನ ಗೆಲ್ಲುವ ಸಂಕಲ್ಪ ಮಾಡಿದ್ದಾರೆ. ಹಾಗಾಗಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ರಾಜ್ಯಾದ್ಯಂತ ಜನಸಂಕಲ್ಪ ಯಾತ್ರೆ ನಡೆಸುತ್ತಿದ್ದಾರೆ. ನಮ್ಮ ಗೊಂದಲ, ಪ್ರತಿಷ್ಠೆ ಬದಿಗೊತ್ತಿ ಪಕ್ಷಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ದುಡಿಯೋಣ. ವರಿಷ್ಠರು ಯಾರಿಗೆ ಟಿಕೆಟ್ ಕೊಡುತ್ತಾರೆಯೋ ಅವರ ಜಯಕ್ಕಾಗಿ ಹಗಲಿರುಳು ಶ್ರಮಿಸೋಣ ಎಂದು ಕರೆ ನೀಡಿದರು.

ಸ್ಪಷ್ಟ ಬಹುಮತ ಬರಲು ಎಲ್ಲರ ಶ್ರಮ ಅಗತ್ಯ
ಇನ್ನು ಕಾಂಗ್ರೆಸ್, ಜೆಡಿಎಸ್ ಅನ್ನು ಸೋಲಿಸಿ ಬಿಜೆಪಿ ಬಾವುಟವನ್ನು ವಿಧಾನಸೌಧದಲ್ಲಿ ಹಾರಿಸಬೇಕಾದರೆ ಎಲ್ಲರೂ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಈಗಿನಿಂದಲೇ ಪಕ್ಷಕ್ಕಾಗಿ ಎಲ್ಲರೂ ದುಡಿಯೋಣ. ಕರ್ನಾಟಕದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿಲ್ಲ. ಈ ಹಿಂದೆ 110 ಸ್ಥಾನ ಬಂದರೆ, 2018ರಲ್ಲಿ 104 ಸ್ಥಾನಗಳು ಬಂದಿದ್ದವು. ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಬಂದ ಶಾಸಕರ ನೆರವಿನಿಂದ ಸರ್ಕಾರ ರಚನೆ ಮಾಡಿದೆವು. ಈ ಬಾರಿ ಸ್ಪಷ್ಟ ಬಹುಮತ ಬಿಜೆಪಿಗೆ ಬರಬೇಕಾದರೆ ನಮ್ಮ ಪಾತ್ರ ಬಹಳ ದೊಡ್ಡದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಬೈರತಿ ಬಸವರಾಜ್, ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಪ್ರೊ. ಲಿಂಗಣ್ಣ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಕೆ. ಎಸ್. ನವೀನ್, ಶಿವಯೋಗಿ ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮಾಜಿ ಶಾಸಕ ಬಿ.ಪಿ. ಹರೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications