ರಾಜ್ಯ ಬಿಜೆಪಿಯಲ್ಲಿ ಗೊಂದಲ ಇದೆ: ಈಶ್ವರಪ್ಪ ಹೊಸ ರಾಗ
ದಾವಣಗೆರೆ, ಅಕ್ಟೋಬರ್ 12: ನಾನು ರಾಯಣ್ಣ ಬ್ರಿಗೇಡ್ ಜತೆಗೆ ಇರ್ತೇನೆ. ಈ ಬಗ್ಗೆ ವರಿಷ್ಠರು ಯಾವುದೇ ಸೂಚನೆ ನೀಡಿಲ್ಲ. ಈ ಬಗ್ಗೆ ಯಾವುದೇ ಅನುಮಾನ ಬೇಡ. ರಾಯಣ್ಣ ಬ್ರಿಗೇಡ್ ಎಂಬುದು ರಾಜಕೀಯೇತರ ಸಂಘಟನೆ ಎಂದು ಇಲ್ಲಿನ ಶಿರಮಗೊಂಡನಹಳ್ಳಿಯಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಬುಧವಾರ ಹೇಳಿದ್ದಾರೆ.
ಇದೇ ವೇಳೆ, ರಾಜ್ಯ ಬಿಜೆಪಿಯಲ್ಲಿ ಗೊಂದಲಗಳಿವೆ ಎಂದಿರುವ ಈಶ್ವರಪ್ಪ, ಯಡಿಯೂರಪ್ಪನವರು ಏಕಪಕ್ಷೀಯವಾದ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಈ ಬಗ್ಗೆ ಚರ್ಚೆ ನಡೆಸುವಂತೆ ವರಿಷ್ಠರು ಸೂಚಿಸಿದ್ದರು. ರಾಯಣ್ಣ ಬ್ರಿಗೇಡ್ ಹಿಂದುಳಿದವರು, ದಲಿತರ ಪರ ಕೆಲಸ ಮಾಡುವುದಕ್ಕೆ ಹುಟ್ಟಿಕೊಂಡಿರುವ ಸಂಘಟನೆ ಎಂದು ಹೇಳಿದ್ದಾರೆ.[ಈಶು-ಬಿಎಸ್ ವೈ ಒಟ್ಟಿಗೆ ತಿಂಡಿಯೇನೋ ತಿಂದರು, ಆದರೆ ಒಂದಾದರಾ?]
ರಾಯಣ್ಣ ಬ್ರಿಗೇಡ್ ಬಗ್ಗೆ ಯಡಿಯೂರಪ್ಪನವರಿಗೆ ಅಸಮಾಧಾನವಿರುವ ಸಂಗತಿ ಈಗಾಗಲೇ ಜಾಹೀರಾಗಿದೆ. ಆದರೂ ಅದೇ ವಿಚಾರವನ್ನು ಕೆದಕಿರುವ ಈಶ್ವರಪ್ಪ, ರಾಯಣ್ಣ ಬ್ರಿಗೇಡ್ ಜತೆಗೆ ಗುರುತಿಸಿಕೊಳ್ಳದಂತೆ ನನಗೆ ಯಾವುದೇ ಸೂಚನೆ ಬಂದಿಲ್ಲ ಎಂದು ಹೇಳುವ ಮೂಲಕ ಯಡಿಯೂರಪ್ಪನವರಿಗೆ ಸಡ್ಡು ಹೊಡೆಯುತ್ತಿದ್ದಾರೆ.
ಬಿಜೆಪಿಯ ಪದಾಧಿಕಾರಿಗಳ ಆಯ್ಕೆ ವೇಳೆ ಅಸಮಾಧಾನಗೊಂಡು ದೆಹಲಿವರೆಗೆ ದೂರು ಒಯ್ದಿದ್ದ ಈಶ್ವರಪ್ಪನವರು ಸಮಯ ಸಿಕ್ಕಾಗಲೆಲ್ಲ ಯಡಿಯೂರಪ್ಪನವರಿಗೆ ಟಾಂಗ್ ಕೊಡುತ್ತಿದ್ದಾರೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ ಲಾಲ್, ಎಲ್ಲ ಸರಿ ಮಾಡಿಕೊಳ್ಳಿ ಎಂದು ಸೂಚಿಸಿದ್ದರು.[ಯಾಕೆ ಕೆಜೆಪಿ ಕಟ್ಟಿದ್ರಿ, ಯಾಕೆ ವಾಪಸ್ ಬಂದ್ರಿ: ಈಶ್ವರಪ್ಪ]
ಈ ಹಿನ್ನೆಲೆಯಲ್ಲಿ ಕಳೆದ ವಾರ ಬೆಂಗಳೂರಿನ ತಮ್ಮ ನಿವಾಸಕ್ಕೆ ಬಿ.ಎಸ್.ಯಡಿಯೂರಪ್ಪ ಉಪಾಹಾರ ಕೂಟಕ್ಕೆ ಕರೆದಿದ್ದರು. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ ಲಾಲ್, ಸಹ ಕಾರ್ಯದರ್ಶಿ ಅರುಣ್ ಕುಮಾರ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ ಮತ್ತಿತರರು ಭಾಗವಹಿಸಿದ್ದರು. ಆದರೂ ಇಬ್ಬರೂ ನಾಯಕರ ಮಧ್ಯದ ಮುನಿಸು ಕರಗಿಲ್ಲ ಎಂಬುದು ಮತ್ತೆ ಸಾಬೀತಾಗಿದೆ.