ದಾವಣಗೆರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಲೋಪ; ಸದಸ್ಯರ ಆರೋಪ
ದಾವಣಗೆರೆ, ಜುಲೈ 27: ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಅವಧಿ ಮುಗಿದಿದ್ದು, ಆ ಸ್ಥಾನಕ್ಕೆ ಇದೇ ಜುಲೈ 23ರಂದು ಚುನಾವಣೆ ನಡೆದಿತ್ತು. ಇದೀಗ ಆ ಚುನಾವಣೆಯಲ್ಲಿ ಚುನಾವಣಾಧಿಕಾರಿಗಳು ಲೋಪ ಎಸಗಿದ್ದಾರೆಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯರು ದೂರಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಪದ್ಮಲತಾ ನವೀನ್, ನಾಗಪ್ಪಕಟಗಿ ಸ್ಪರ್ಧೆ ಮಾಡಿದ್ದರು. 17 ಸದಸ್ಯರಿರುವ ಗ್ರಾಮಪಂಚಾಯಿತಿಯಲ್ಲಿ, ಒಂಬತ್ತು ಮತಗಳನ್ನು ಪದ್ಮಲತಾ ನವೀನ್ ಪಡೆದರೆ, ಏಳು ಮತಗಳನ್ನು ನಾಗಪ್ಪ ಕಟಗಿ ಪಡೆದಿದ್ದರು. ಒಂದು ಮತ ತಿರಸ್ಕೃತಗೊಂಡಿದ್ದು, ಕೊನೆಗೆ ಪದ್ಮಲತಾ ನವೀನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಪರಾಜಿತ ಅಭ್ಯರ್ಥಿ ನಾಗಪ್ಪ ಕಟಗಿ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ.

"ಚುನಾವಣಾಧಿಕಾರಿಯಾಗಿದ್ದ ಲೋಕೋಪಯೋಗಿ ಇಲಾಖೆ ಎಇಇ ಮಲ್ಲಿಕಾರ್ಜುನ್, ಚುನಾವಣಾಧಿಕಾರಿಯಾಗಿ ಕೆಲಸ ಮಾಡುವ ಬದಲು ಅವರೇ ಭೂತ್ ಗಳ ಬಳಿ ಹೋಗಿ ಸದಸ್ಯರ ಪರ ಮತ ಹಾಕಿಸಿದ್ದಾರೆ. ಚುನಾವಣೆ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರು ಒಳಗಿರಬೇಕು. ಆದರೆ ಮತ ಹಾಕುವಾಗ ಸದಸ್ಯರನ್ನು ಹೊರಗೆ ಕಳುಹಿಸಿ, ಒಬ್ಬೊಬ್ಬರನ್ನೇ ಕರೆಯಿಸಿ ಮತದಾನ ಮಾಡಿಸಿದ್ದಾರೆ. ಈ ಚುನಾವಣಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಅಧ್ಯಕ್ಷರ ಆಯ್ಕೆಯನ್ನು ರದ್ದುಗೊಳಿಸಿ ಮರು ಚುನಾವಣೆ ನಡೆಸಬೇಕು" ಎಂದು ಸದಸ್ಯರು ಆಗ್ರಹಿಸಿದ್ದಾರೆ.
ಈ ಕುರಿತು ಗ್ರಾಮಪಂಚಾಯಿತಿ ಸದಸ್ಯರು, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.












Click it and Unblock the Notifications