ದಾವಣಗೆರೆ ಪಾಲಿಕೆ ಬಿಜೆಪಿಗೆ; ಎಸ್. ಟಿ. ವಿರೇಶ್ ಮೇಯರ್
ದಾವಣಗೆರೆ, ಫೆಬ್ರವರಿ 24: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿಯಾಗಿ ಗೆಲುವು ದಾಖಲಿಸಿದೆ. ಮೇಯರ್ ಆಗಿ ಎಸ್. ಟಿ. ವೀರೇಶ್ ಹಾಗೂ ಉಪ ಮೇಯರ್ ಆಗಿ ಶಿಲ್ಪಾ ಜಯಪ್ರಕಾಶ್ ಆಯ್ಕೆಯಾದರು.
ಬುಧವಾರ ದಾವಣಗೆರೆಯ ನೂತನ ಮೇಯರ್ ಆಯ್ಕೆಗೆ ಚುನಾವಣೆ ನಡೆಯಿತು. ಬಿಜೆಪಿ 29 ಮತಗಳನ್ನು ಪಡೆಯುವ ಮೂಲಕ ದಾವಣಗೆರೆ ಪಾಲಿಕೆ ಅಧಿಕಾರ ಹಿಡಿದಿದೆ. ಕಾಂಗ್ರೆಸ್ 22 ಮತಗಳನ್ನು ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದೆ. 7 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗಳು ಮೇಯರ್, ಉಪಮೇಯರ್ ಸ್ಥಾನವನ್ನು ತಮ್ಮದಾಗಿಸಿಕೊಂಡರು.
ಮೇಯರ್ ಚುನಾವಣೆಗೆ ಕಾಂಗ್ರೆಸ್ ಹಿರಿಯ ಮುಖಂಡ, ಶಾಸಕ ಶಾಮನೂರು ಶಿವಶಂಕರಪ್ಪ ಗೈರಾಗಿದ್ದರು. ಮೇಯರ್ ಸ್ಥಾನಕ್ಕೆ ಬಿಜೆಪಿಯ ಎಸ್. ಟಿ. ವೀರೇಶ್, ಕಾಂಗ್ರೆಸ್ನ ಗಡಿಗುಡಾಳ್ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ಉಪಮೇಯರ್ ಸ್ಥಾನಕ್ಕೆ ಶಿಲ್ಪ ಜಯಪ್ರಕಾಶ್ ನಾಮಪತ್ರ ಸಲ್ಲಿಸಿದ್ದರು.

ಬಿಜೆಪಿಯಿಂದ ಸಚಿವ ಆರ್. ಶಂಕರ್, ಸಂಸದ ಜಿ. ಎಂ. ಸಿದ್ದೇಶ್ವರ್, ಚಿದಾನಂದಗೌಡ ಸೇರಿದಂತೆ 29 ಸದಸ್ಯರು ಚುನಾವಣೆಯಲ್ಲಿ ಭಾಗಿಯಾದರು. ಕಾಂಗ್ರೆಸ್ನ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮೂವರು ಎಂಎಲ್ಸಿಗಳಾದ ಕೆ. ಸಿ. ಕೊಂಡಯ್ಯ, ರಘು ಆಚಾರ್, ಯು. ಬಿ. ವೆಂಕಟೇಶ್ ಗೈರಾದರು.
ಕಾಂಗ್ರೆಸ್ ಪಕ್ಷದ ಪರವಾಗಿ ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ ಸೇರಿ ಪಾಲಿಕೆಯ 22 ಸದಸ್ಯರು ಹಾಜರಾಗಿದ್ದರು. ಶಾಮನೂರು ಶಿವಶಂಕರಪ್ಪ ಆಪ್ತರಾಗಿದ್ದ ಶಿವಕುಮಾರ್ ದೇವರಮನಿ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮಂಗಳವಾರ ಕಾಂಗ್ರೆಸ್ಗೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರಿದ್ದರು.
ಶಿವಕುಮಾರ್ ದೇವರಮನಿ ರಾಜೀನಾಮೆ ನೀಡುತ್ತಿದ್ದಂತೆ ಕಾಂಗ್ರೆಸ್ಗೆ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಸೋಲು ಖಚಿತವಾಗಿತ್ತು. ಬುಧವಾರ ಕಾಂಗ್ರೆಸ್ ಹಿರಿಯ ಮುಖಂಡರ ಅನುಪಸ್ಥಿತಿಯಲ್ಲಿಯೇ ಚುನಾವಣೆ ನಡೆಯಿತು.












Click it and Unblock the Notifications