"ಪರಿವರ್ತನೆ ಮತ್ತು ರಾಷ್ಟ್ರಧಾರೆಯ ಮೂಲಕ ಭಾರತ ಕಟ್ಟುವುದು ಪಕ್ಷದ ಗುರಿ''
ದಾವಣಗೆರೆ, ನವೆಂಬರ್ 24: ಬಿಜೆಪಿ ಕೇವಲ ಅಧಿಕಾರಕ್ಕಾಗಿ ಸೃಷ್ಟಿಯಾಗಿರುವ ಪಕ್ಷವಲ್ಲ. ಪರಿವರ್ತನೆ ಮತ್ತು ರಾಷ್ಟ್ರಧಾರೆಯ ಮೂಲಕ ಭಾರತ ಕಟ್ಟುವುದು ನಮ್ಮ ಪಕ್ಷದ ಗುರಿಯಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ದಾವಣಗೆರೆ ನಗರದ ಹೊರ ವಲಯದ ಅಪೂರ್ವ ರೆಸಾರ್ಟ್ನಲ್ಲಿಂದು ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಂಚಾಲಕರ ಮತ್ತು ಸಹ ಸಂಚಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಕಾರ್ಯಕರ್ತರಿಗೆ ನಿಮ್ಮ ಗುರಿ ಏನೆಂದರೆ, ಅಧಿಕಾರ ಎನ್ನುತ್ತಾರೆ. ತದನಂತರ ಏನು? ಎಂದು ಕೇಳಿದರೆ, ಅಧಿಕಾರದ ಅನುಭವ ಎನ್ನುತ್ತಾರೆ. ಆದರೆ, ನಮ್ಮ ಕಾರ್ಯಕರ್ತರನ್ನು ನಿಮ್ಮ ಗುರಿ ಏನೆಂದು ಪ್ರಶ್ನಿಸಿದರೆ, "ಜಗದ್ ಒಂದೇ ಭಾರತ ನಿರ್ಮಾಣವೇ ಭಾರತ ಜನತಾ ಪಾರ್ಟಿಯ ಗುರಿಯಾಗಿದೆ' ಎನ್ನುತ್ತಾರೆ. ಇದೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಇರುವ ವ್ಯತ್ಯಾಸ ಎಂದರು.

ಸಮಾಜ ಸೇವೆಯು ರಾಜಕಾರಣಿಯ ಗುರಿ
ಹೀಗಾಗಿ ಬಿಜೆಪಿಯ ವಿಚಾರಧಾರೆಯನ್ನು ಸರ್ವವ್ಯಾಪಿ ಮತ್ತು ಸರ್ವ ಸೃಷ್ಠಿಯಾಗಿಸುವ ಉದ್ದೇಶದಿಂದ ಹತ್ತಾರು ವಿಭಾಗದಲ್ಲಿ ಕೆಲಸ ಮಾಡುತ್ತಿರುವವರನ್ನು ಪಕ್ಷಕ್ಕೆ ಕರೆ ತಂದು ಪ್ರಕೋಷ್ಠ ರಚನೆ ಮಾಡಲಾಗಿದೆ ಎಂದ ಅವರು, ರಾಜಕಾರಣ ಮತ್ತು ಸಮಾಜ ಸೇವೆಯು ರಾಜಕಾರಣಿಯ ಗುರಿಯಾಗಿರಬೇಕು. ಅದರಂತೆ ಸಮಾಜ ಸೇವೆಯ ಮೂಲಕ ರಾಜಕಾರಣ ಮಾಡುವುದು ಬಿಜೆಪಿಯ ಪರಿಕಲ್ಪನೆಯಾಗಿದೆ ಎಂದು ಹೇಳಿದರು.

ಬಿಜೆಪಿ ಇಂದು ಬಹುದೊಡ್ಡ ಪಕ್ಷವಾಗಿ ಬೆಳೆದಿದೆ
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತನ್ನ ಗುರಿ ಮರೆತು, ದಾರಿ ತಪ್ಪಿದ ಕಾರಣಕ್ಕಾಗಿಯೇ ಇಂದು ಆ ಪಕ್ಷ ವಿರೋಧ ಪಕ್ಷದ ಸ್ಥಾನ ಹೊಂದುವುದಕ್ಕೂ ನಾಲಾಯಕ್ ಆಗಿದೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಾದ ಮೇಲೆ ಗುರಿಯು ಮರೆಯಲಿಲ್ಲ ಮತ್ತು ದಾರಿಯು ತಪ್ಪಲಿಲ್ಲ. ಹೀಗಾಗಿಯೇ ಇಂದು ಬಿಜೆಪಿ ಇಂದು ಬಹುದೊಡ್ಡ ಪಕ್ಷವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿಗೆ ವ್ಯಕ್ತಿಗಿಂತ ಪಕ್ಷ ಶ್ರೇಷ್ಠ
ಬಿಜೆಪಿಗೆ ವ್ಯಕ್ತಿಗಿಂತ ಪಕ್ಷ ಶ್ರೇಷ್ಠ, ಪಕ್ಷಕ್ಕಿಂತ ರಾಷ್ಟ್ರ ಶ್ರೇಷ್ಠ. ಇದಕ್ಕೆ ಜನಸಂಘವನ್ನು ಜನತಾ ಪಾರ್ಟಿಯೊಂದಿಗೆ ವಿಲೀನ ಮಾಡಿರುವುದೇ ಉತ್ತಮ ಉದಾಹರಣೆಯಾಗಿದೆ. ಆದರೆ, ಕಾಂಗ್ರೆಸ್ ನವರಿಗೆ ಇವ್ಯಾವುದು ಮುಖ್ಯವಲ್ಲ. ಆ ಪಕ್ಷ ಅಧಿಕಾರದಲ್ಲಿದ್ದಾಗೆಲ್ಲಾ ಭ್ರಷ್ಟಾಚಾರ, ಕುಟುಂಬ ರಾಜಕಾರಣವೇ ಮುಖ್ಯವಾಗಿದೆ. ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರನ್ನು ಮರೆತಿರುವುದೇ ಆ ಪಕ್ಷದ ಹೀನಾಯ ಸ್ಥಿತಿಗೆ ಕಾರಣವಾಗಿದೆ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ, ಬರುವ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲಿಸಿಕೊಂಡು ಬರುವ ಮೂಲಕ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು ಎಂದರು.

ಪಕ್ಷಕ್ಕೆ ಬಹುಮತ ತರುವ ನಿಟ್ಟಿನಲ್ಲಿ ಕೆಲಸ
ನಮಗೆ ವಿಧಾನಸಭೆಯಲ್ಲಿ 10 ಸೀಟು ಕಡಿಮೆ ಬಂದ ಕಾರಣಕ್ಕೆ ಮತ್ತು ಪಾಲಿಕೆ ಚುನಾವಣೆಯಲ್ಲಿ ಹಿನ್ನಡೆಯಾದ ಕಾರಣಕ್ಕೆ ಎಷ್ಟರ ಮಟ್ಟಿಗೆ ಹೊಡೆದಾಡಿ ಅಧಿಕಾರಕ್ಕೆ ಬಂದಿದ್ದೇವೆ ಎಂಬುದನ್ನು ಎಲ್ಲರೂ ನೋಡಿದ್ದೇವೆ. ಆದ್ದರಿಂದ ಬರುವ ಎಲ್ಲಾ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ತರುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.
ಪ್ರಕೋಷ್ಠ ಸಂಯೋಜಕ ಭಾನುಪ್ರಕಾಶ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ್, ಮಾಡಾಳ್ ವಿರೂಪಾಕ್ಷಪ್ಪ, ಪ್ರೊ.ಎನ್.ಲಿಂಗಣ್ಣ, ಎಂ.ಪಿ.ರೇಣುಕಾಚಾರ್ಯ, ಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್, ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ್.ಜಿ ಮತ್ತಿತರರು ಉಪಸ್ಥಿತರಿದ್ದರು. ಪಕ್ಷದ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಎ.ಎಚ್.ಶಿವಯೋಗಿಸ್ವಾಮಿ, ಬಿ.ಎಸ್.ಜಗದೀಶ್ ಇದ್ದರು.












Click it and Unblock the Notifications