ಬಿಟ್ ಕಾಯಿನ್; ಕಾಂಗ್ರೆಸ್ ಮೇಲೆ ಮುಗಿಬಿದ್ದ ಜಗದೀಶ್ ಶೆಟ್ಟರ್, ಸುಧಾಕರ್!
ದಾವಣಗೆರೆ, ನವೆಂಬರ್ 18; ಬಿಟ್ ಕಾಯಿನ್ ಹಗರಣ ದಿನೇ ದಿನೇ ಜಟಿಲವಾಗುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ.
ದಾವಣಗೆರೆಗೆ ಆಗಮಿಸಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಆರೋಗ್ಯ ಸಚಿವ ಡಾ. ಸುಧಾಕರ್ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಗರಣದಲ್ಲಿ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂದು ಆರೋಪ ಮಾಡಿದ್ದಾರೆ.
ಜಗದೀಶ್ ಶೆಟ್ಟರ್ ಮಾತನಾಡಿ, "ಬಿಟ್ ಕಾಯಿನ್ ಹಗರಣ ವಿಚಾರದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಬಿಟ್ ಕಾಯಿನ್ ವಿಚಾರದಲ್ಲಿ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಕ್ರಮ ಆಗಿಲ್ಲ, ಕಾಂಗ್ರೆಸ್ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ" ಎಂದು ಹೇಳಿದರು.

"ಸಿದ್ದರಾಮಯ್ಯ ತಮ್ಮ ಪಕ್ಷದಲ್ಲಿರುವ ವಿರುದ್ಧವೇ ಅಟ್ಯಾಕ್ ಮಾಡುತ್ತಿದ್ದಾರೆ. ಬಿಟ್ ಕಾಯಿನ್ ವಿಚಾರ ಕಾಂಗ್ರೆಸ್ ಆಂತರಿಕ ಕಲಹ ಹೆಚ್ಚಿಸುತ್ತಿದೆ. ನಿನ್ನೆ ಸಿದ್ದರಾಮಯ್ಯ ಭಾಷಣ ಮಾಡುವಾಗ ಕಾರ್ಯಕರ್ತರು ಡಿಕೆ ಡಿಕೆ ಎಂದು ಕೂಗಿದ್ದು ಕಾಂಗ್ರೆಸ್ನ ಆಂತರಿಕ ಬಿಕ್ಕಟ್ಟನ್ನು ಬಹಿರಂಗಗೊಳಿಸಿದೆ. ಬಿಟ್ ಕಾಯಿನ್ ಹಗರಣ ಕಾಂಗ್ರೆಸ್ ಹೆಣೆದ ತಂತ್ರವಾಗಿದೆ" ಎಂದು ಆರೋಪಿಸಿದರು.
ಚುನಾವಣೆ ವಿಚಾರ; "ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಸರ್ಕಾರ ಹಿಂದೇಟು ಹಾಕುತ್ತಿಲ್ಲ. ಮೀಸಲಾತಿ ಸೇರಿ ಇತರೆ ಸಮಸ್ಯೆಗಳಿಂದಾಗಿ ಚುನಾವಣೆ ವಿಳಂಬವಾಗಿದೆ. ಇದರಲ್ಲಿ ಸರ್ಕಾರದ ಪಾತ್ರವೇನು ಇಲ್ಲ. ಯಾವುದೇ ದುರುದ್ದೇಶದಿಂದ ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡಿಲ್ಲ" ಎಂದು ಶೆಟ್ಟರ್ ಸ್ಪಷ್ಟನೆ ನೀಡಿದರು.
"ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಆಕಾಂಕ್ಷಿಗಳ ಪಟ್ಟಿ ಹೆಚ್ಚಿದೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಕನಿಷ್ಠ 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ" ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
"ಜನಸ್ವರಾಜ್ ಯಾತ್ರೆ ದಾವಣಗೆರೆಯಿಂದ ಆರಂಭ ಮಾಡಲಾಗುತ್ತಿದೆ. ರಾಜ್ಯದ 8 ಜಿಲ್ಲೆಗಳಲ್ಲಿಯೂ ಶುರುವಾಗಿದೆ. ನನ್ನ ನೇತೃತ್ವದಲ್ಲಿ ದಾವಣಗೆರೆಯಿಂದ ಜನಸ್ವರಾಜ್ ಯಾತ್ರೆ ನಡೆಯಲಿದೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅತಿ ಹೆಚ್ಚು ಬಿಜೆಪಿ ಬೆಂಬಲಿತರೇ ಆಯ್ಕೆಯಾಗಿದ್ದಾರೆ. ಪ್ರತಿ ಗ್ರಾಮದಲ್ಲೂ ಸಾವಿರಾರು ಬಿಜೆಪಿ ಕಾರ್ಯಕರ್ತರಿದ್ದಾರೆ. ಕಾಂಗ್ರೆಸ್, ಜೆಡಿಎಸ್ಗಿಂತ ಬಿಜೆಪಿ ಕಾರ್ಯಕರ್ತರ ಸಂಖ್ಯೆ ಹೆಚ್ಚು. ಪಕ್ಷದ ಸಂಘಟನೆಗೆ ಒತ್ತು ನೀಡುವ ಹಿನ್ನೆಲೆ ಜನಸ್ವರಾಜ್ ಯಾತ್ರೆ ಹಮ್ಮಿಕೊಳ್ಳಲಾಗಿದೆ" ಎಂದರು.
"ಕಾಂಗ್ರೆಸ್ ಪಕ್ಷ ನಾಯಕತ್ವದ ಕೊರತೆಯಿಂದ ಸೊರಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಸರ್ಕಾರ ವಿರುದ್ಧ ಪ್ರತಿಭಟಿಸಲು ವಿಪಕ್ಷಗಳಿಗೆ ಯಾವುದೇ ಅಸ್ತ್ರವಿಲ್ಲ. ಅದಕ್ಕಾಗಿ ಬೆಲೆ ಏರಿಕೆಯಂತ ವಿಚಾರಗಳಿಂದ ಪ್ರತಿಭಟಿಸುತ್ತಿದ್ದಾರೆ. ಕಾಲಕ್ಕೆ ತಕ್ಕಂತೆ ಬೆಲೆ ಏರಿಕೆಯಾಗಿದೆ. ಪ್ರಧಾನಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಬೆಲೆ ಏರಿಕೆಗೆ ನಿಯಂತ್ರಣ ಹಾಕಲಾಗುವುದು. ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ" ಎಂದು ಹೇಳಿದರು.
"ಉಪಚುನಾವಣೆ ಫಲಿತಾಂಶ ದಿಕ್ಸೂಚಿ ಅಲ್ಲ. ಹಾನಗಲ್ನಲ್ಲಿ ಸೋತಿದ್ದೇವೆ, ಸಿಂಧಗಿಯಲ್ಲಿ ಗೆದ್ದಿದ್ದೇವೆ. ಸಿಂಧಗಿಯಲ್ಲಿ ಗೆದ್ದಿದ್ದು ಬಿಜೆಪಿಗೆ ಹೆಚ್ಚಿನ ಬಲ ತಂದಿದೆ. ಸಿಂದಗಿ ಜೆಡಿಎಸ್ ಕ್ಷೇತ್ರವಾಗಿತ್ತು, ಈಗ ಬಿಜೆಪಿ ಪಾಲಿಗೆ ದಕ್ಕಿದೆ. ಹಾನಗಲ್ ಚುನಾವಣೆಯಲ್ಲಿ ಹಿಂದಿಗಿಂತ ಹೆಚ್ಚಿನ ಮತ ಪಡೆದಿದ್ದೇವೆ. ಚುನಾವಣೆಯಲ್ಲಿ ಸೋಲು ಗೆಲವು ಸಹಜ. ಮತದಾರರ ಒಲುವು ಬಿಜೆಪಿ ಕಡೆಗೆ ಇದೆ. ಉಪಚುನಾವಣೆಯಲ್ಲಿ ಇದು ಸ್ಪಷ್ಟವಾಗಿದೆ. ಯಾವುದೇ ಉಪಚುನಾವಣೆ, ವಿಧಾನ ಪರಿಷತ್ ಚುನಾವಣೆ ಭವಿಷ್ಯದ ಚುನಾವಣೆಗೆ ದಿಕ್ಸೂಚಿ ಆಗುವುದಿಲ್ಲ" ಎಂದರು.
ಡಾ. ಸುಧಾಕರ್ ಹೇಳಿದ್ದೇನು?; "ಬಿಟ್ ಕಾಯಿನ್ ಹಗರಣದಲ್ಲಿ ಯಾವೆಲ್ಲಾ ಕಾಂಗ್ರೆಸ್ ಮುಖಂಡರು ಇದ್ದಾರೆ, ಅವರ ಮಕ್ಕಳು ಯಾರ್ಯಾರಿದ್ದಾರೆ ಎಂಬುದು ತನಿಖಾ ವರದಿಯಲ್ಲಿ ತಿಳಿದು ಬರಲಿದೆ" ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದರು.
ದಾವಣಗೆರೆ ನಗರದ ಜಿಎಂಐಟಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಬಿಟ್ ಕಾಯಿನ್ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಯಾರೊಬ್ಬರ ಹೆಸರನ್ನು ವೈಯಕ್ತಿಕವಾಗಿ ಹೇಳಲು ಇಷ್ಟಪಡಲ್ಲ. ತನಿಖೆಯಲ್ಲಿ ಎಲ್ಲವೂ ಗೊತ್ತಾಗಲಿದೆ" ಎಂದು ಭವಿಷ್ಯ ನುಡಿದರು.
"ಕಾಂಗ್ರೆಸ್ ನವರಿಗೆ ರಚನಾತ್ಮಕ ರಾಜಕೀಯ ದೃಷ್ಟಿಯಾಗಲೀ, ಚಿಂತನೆ ಆಗಲೀ ಇಲ್ಲ. ಈ ಸರ್ಕಾರದ ವಿರುದ್ಧ ವಿಷಯಾಧಾರಿತ ಟೀಕೆ ಮಾಡಲು ಯಾವ ವಿಚಾರವೂ ಸಿಗುತ್ತಿಲ್ಲ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಆರೋಪ ಮಾಡಲು ಯಾವ ವಿಚಾರವೂ ಸಿಗುತ್ತಿಲ್ಲ" ಎಂದರು.
"ಏನು ಇಲ್ಲದ ವಿಷಯವನ್ನು ವಿವಾದ ಮಾಡಲು ಹೋಗಿ ಈಗ ಕಾಂಗ್ರೆಸ್ನವರೇ ಬಯಲಿಗೆ ಬಂದಿದ್ದಾರೆ. ಎಲ್ಲವನ್ನೂ ರಾಜ್ಯದ ಜನರು ನೋಡುತ್ತಿದ್ದಾರೆ. ಬಿಟ್ ಕಾಯಿನ್ ವಿಚಾರವಾಗಿ ಕಾಂಗ್ರೆಸ್ ಮಾಡಿರುವ ಆರೋಪದಲ್ಲಿ ಯಾವುದೂ ಸತ್ಯ ಇಲ್ಲ" ಎಂದು ಹೇಳಿದರು.
"ಇದುವರೆಗೆ ಪುರಾವೆ ಕೊಡುವುದರಲ್ಲಿ ಕಾಂಗ್ರೆಸ್ ನಾಯಕರು ವಿಫಲರಾಗಿದ್ದಾರೆ. ಏನೇ ಆರೋಪ ಮಾಡಿದರೂ ಆಧಾರ ಮೊದಲು ಕೊಡಬೇಕು. ಯಾರ ಜೊತೆಗೆ ಯಾರ್ಯಾರಿಗೆ ಸ್ನೇಹ ಇತ್ತು. ಕಳೆದ 16ನೇ ತಾರೀಖಿನಿಂದ ಹೊಟೇಲ್ನಲ್ಲಿ ಯಾರ್ಯಾರು ಇದ್ದರು?, ಸ್ವೇಹ ಬೆಳೆಸಿದ್ದರು ಎಂಬುದು ಎಲ್ಲವೂ ಬಯಲಿಗೆ ಬರಲಿದೆ" ಎಂದು ಸುಧಾಕರ್ ಹೇಳಿದರು.











Click it and Unblock the Notifications