ಮಕ್ಕಳಿಗೆ ಲಭಿಸದ ದಾವಣಗೆರೆ ಜಿಲ್ಲಾ ಬಾಲಭವನ!
ದಾವಣಗೆರೆ, ಮಾರ್ಚ್ 04: ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆ, ಬೌದ್ಧಿಕ ಉತ್ತೇಜನ ಮತ್ತು ಮಕ್ಕಳ ಹಕ್ಕು ಸಂರಕ್ಷಣೆ ಅಂಗವಾಗಿ ಅನುಷ್ಠಾನಗೊಂಡಿದ್ದ ದಾವಣಗೆರೆ ಜಿಲ್ಲಾ ಬಾಲಭವನ ಮಕ್ಕಳ ಕೈಗೆ ಸಿಗದೆ ಮೂಲೆಗುಂಪಾಗಿದೆ.
ರಾಜ್ಯ ಬಾಲಭವನ ಸೊಸೈಟಿ ನಿರ್ದೇಶನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬಾಲಭವನವನ್ನು ನಿರ್ವಹಿಸಬೇಕಿದೆ. ಆದರೆ ಬಾಲಭವನ ಕಟ್ಟಡ ಮತ್ತು ಪುಟಾಣಿ ರೈಲು ಹೊರತುಪಡಿಸಿದರೆ ಬೇರೆ ಆಟಿಕೆಗಳು ಕಾಣುವುದಿಲ್ಲ.
ದಾವಣಗೆರೆ ನಗರದ ಹೊರಭಾಗದಲ್ಲಿರುವ ಶಾಮನೂರು ನಾಗನೂರು ರಸ್ತೆಯ ಜೆ. ಹೆಚ್. ಪಟೇಲ್ ಬಡಾವಣೆಯಲ್ಲಿರುವ ಬಾಲಭವನವು ಕೇವಲ ಅನುದಾನ ಬಳಕೆಗೆ ಮಾತ್ರ ಸೀಮಿತವಾಗಿದೆ. ಮಕ್ಕಳ ಆಟೋಟಕ್ಕೆ ಸಿಗುತ್ತಿಲ್ಲ.
ಜಿಲ್ಲೆಯ ಕ್ರಿಯಾಶೀಲ ಮಕ್ಕಳನ್ನು ಗುರುತಿಸಿ ಗೌರವಿಸುವುದು ಹಾಗೂ ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ಪೂರಕವಾಗುವ ಬೇಸಿಗೆ ಶಿಬಿರ, ಆಟೋಟ, ಕ್ವಿಜ್, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆ ಏರ್ಪಡಿಸುವುದು ಬಾಲಭವನದ ಉದ್ದೇಶವಾಗಿದೆ.

1.4 ಕೋಟಿ ವೆಚ್ಚದಲ್ಲಿ ಪುಟಾಣಿ ರೈಲು
ಚಿಣ್ಣಾರಿ ಎಕ್ಸ್ಪ್ರೆಸ್ ರೈಲು ಹೊರತುಪಡಿಸಿದರೆ ಜಾರುಬಂಡಿ, ಜೋಕಾಲಿ ಸೇರಿದಂತೆ ಬೇರೆ ಯಾವ ಆಟಿಕೆಗಳೂ ಬಾಲಭವನದಲ್ಲಿಲ್ಲ. ಇತ್ತೀಚೆಗೆ ಬಾಲಭನವ ಕಟ್ಟಡದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿ ಮಾಡಲಾಗಿದೆ. ಉಳಿದಂತೆ ಇಲ್ಲಿ ಯಾವೊಬ್ಬ ಸಿಬ್ಬಂದಿ, ಆಟಿಕೆ, ಕಾರ್ಯಕ್ರಮಗಳು ನಡೆಯುವುದಿಲ್ಲ.

4 ಎಕರೆ ಜಾಗದಲ್ಲಿದೆ ಬಾಲಭವನ
ಸುಮಾರು 4 ಎಕರೆ ವಿಸ್ತೀರ್ಣದ ಆವರಣದಲ್ಲಿ ಬಾಲಭವನ ಕಟ್ಟಡ ನಿರ್ಮಿಸಲಾಗಿದೆ. ಮೈಸೂರು ರೇಲ್ವೆಯಿಂದ ಪುಟಾಣಿ ರೈಲು ಅನುಷ್ಠಾನ ಗೊಳಿಸಲಾಗಿದೆ. ದಾವಣಗೆರೆ ರೈಲ್ವೆ ವಿಭಾಗದಿಂದ ಟ್ರ್ಯಾಕ್ ಅಳವಡಿಸಲಾಗಿದೆ. ಆವರಣದ ಮಧ್ಯದಲ್ಲಿ ಮಂಟಪ ಇದ್ದು, ಸುತ್ತ ಸಿಮೆಂಟ್ ಕುರ್ಚಿ ಇವೆ. ಆದರೆ ಸರಿಯಾದ ನಿರ್ವಹಣೆ ಇಲ್ಲದಿರುವುದರಿಂದ ಗಿಡ, ಹುಲ್ಲು ಬೆಳೆದಿದೆ. ಮೈದಾನದಲ್ಲಿ ಅಲ್ಲಲ್ಲಿ ಮಣ್ಣಿನ ಗುಡ್ಡೆ, ಕಲ್ಲು ಬಂಡೆಗಳಿವೆ.

ಸಂಯೋಜಕ ಹುದ್ದೆ ಖಾಲಿ ಇದೆ
ಬಾಲಭವನ ನಿರ್ವಹಣೆಗಾಗಿ ಒಂದು ಸಂಯೋಜಕ ಮತ್ತು ಸಹಾಯಕ ಹುದ್ದೆ ಖಾಲಿ ಇದೆ. ಯಾವುದೇ ಚಟುವಟಿಕೆ ಇಲ್ಲದಿರುವುದರಿಂದ ನೇಮಕಾತಿಯೂ ನಡೆದಿಲ್ಲ. ಶೀಘ್ರದಲ್ಲೇ ಬಾಲಭವನದ ಸೊಸೈಟಿ ಅಧ್ಯಕ್ಷರು ಆಗಮಿಸಲಿದ್ದು, ಬಳಿಕ ಬಾಲಭವನದ ಸಮಸ್ಯೆಗಳು ಬಗೆಹರಿಯುವ ನಿರೀಕ್ಷೆ ಇದೆ.
Recommended Video

ಕಾಗದದಲ್ಲಿ ಕಾರ್ಯಕ್ರಮಗಳು
ಸಾರ್ವಜನಿಕರಿಗೆ ಮಾಹಿತಿ ನೀಡದೆ ಬಾಲಭವನ ಹೆಸರಿನಲ್ಲಿ ಕೆಲವೇ ಆಯ್ದ ಮಕ್ಕಳನ್ನು ಸೇರಿಸಿ ಕಾರ್ಯಕ್ರಮ ಮಾಡಿ ದಾಖಲೆ ಸೃಷ್ಟಿಸಲಾಗುತ್ತಿದೆ. ಜಿಲ್ಲೆಯ ಮಕ್ಕಳಿಗೆ ಬಾಲಭವನದ ಉದ್ದೇಶ ತಲುಪುತ್ತಿಲ್ಲ ಎಂದು ಸಹ ಆರೋಪಿಸಲಾಗುತ್ತಿದೆ.











Click it and Unblock the Notifications