ಸಚಿವ ಬೈರತಿ ಬಸವರಾಜ್ಗೆ ₹15 ಲಕ್ಷ ಲಂಚ ಆರೋಪ: ಆಡಿಯೋ ವೈರಲ್
ದಾವಣಗೆರೆ, ನವೆಂಬರ್, 08: 'ಮಿನಿಸ್ಟರ್ಗೆ 15 ಲಕ್ಷ ರೂಪಾಯಿ ನೀಡಲಾಗಿದೆ. ವೆಂಕಟೇಶ್ ಅವರೇ ಕೃಷ್ಣಪ್ಪರಿಗೆ ಐದು ಲಕ್ಷ ರೂಪಾಯಿ ನೀಡಲು ಹೇಳಿ ಎಂದು ಕಮೀಷನರ್ ಹೇಳಿದ್ದಾರೆ. ನನಗೆ ಕೊಟ್ಟರೆ ಏನಾಗುತ್ತೆ ರೀ. ಕೆಲಸ ಮಾಡಿಕೊಡುವುದಿಲ್ಲವಾ? ಕಷ್ಟ ಸುಖ ನಿಭಾಯಿಸುವವನು ನಾನು...' ಇದು ಜಕಾತಿ ಸಂಗ್ರಹಕ್ಕೆ ಅನುಮತಿ ನೀಡಲು ಮಹಾನಗರ ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್ ಹಾಗೂ ಗುತ್ತಿಗೆದಾರ ಕೃಷ್ಣಪ್ಪ ಎಂಬುವವರ ನಡುವೆ ನಡೆದ ಸಂಭಾಷಣೆಯ ಆಡಿಯೋ ಆಗಿದೆ. ಇದೀಗ ಈ ಆಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಪ್ರಮುಖವಾಗಿ ನಗರಾಭಿವೃದ್ಧಿ ಸಚಿವ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಅವರಿಗೆ 15 ಲಕ್ಷ ರೂಪಾಯಿ ಇತ್ತೀಚೆಗಷ್ಟೇ ಸಂದಾಯ ಆಗಿದೆ ಎನ್ನುವ ಆಡಿಯೋ ಕೂಡ ವೈರಲ್ ಆಗುತ್ತಿದೆ.
ಕಳೆದ ಭಾನುವಾರ ರಾತ್ರಿ ರಾಮ್ ಅಂಡ್ ಕೋ ಸರ್ಕಲ್ನ ರೂಂನಲ್ಲಿ ಕೃಷ್ಣಪ್ಪನ ಬಳಿ ಮೂರು ಲಕ್ಷ ರೂಪಾಯಿ ಲಂಚ ಪಡೆಯುವಾಗ ಮಹಾನಗರ ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ವೆಂಕಟೇಶ್ ಹಾಗೂ ಕೃಷ್ಣಪ್ಪ ಅವರು ಜಕಾತಿ ಸಂಗ್ರಹಕ್ಕೆ ಅನುಮತಿ ಪಡೆಯಲು ಹಣಕಾಸಿನ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಹಾಗೂ ಬೈರತಿ ಬಸವರಾಜ್ ಅವರ ಹೆಸರು ಪ್ರಸ್ತಾಪ ಆಗಿರುವುದರಿಂದ ಬಿಜೆಪಿಗೆ ಇರಿಸು ಮುರಿಸು ತಂದಿದೆ.
ದಾವಣಗೆರೆ:7 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ, ಪಾಲಿಕೆ ವ್ಯವಸ್ಥಾಪಕ ಲೋಕಾಯುಕ್ತ ಬಲೆಗೆ
ಸಮಸ್ಯೆ ಸರಿದೂಗಿಸಲು ಕೃಷ್ಣಪ್ಪ ಮಾಡಿದ್ದೇನು?
2021ರಲ್ಲಿ ಕೃಷ್ಣಪ್ಪ ಜಕಾತಿ ಸಂಗ್ರಹದ ಟೆಂಡರ್ ಅನ್ನು ಪಡೆದಿದ್ದರು. ಕೊರೊನಾ ಸೇರಿದಂತೆ ಇತರೆ ಸಮಸ್ಯೆಗಳಿಂದ ನಷ್ಟ ಅನುಭವಿಸಿದ್ದರು. ಇದನ್ನು ಸರಿದೂಗಿಸಲು ಟೆಂಡರ್ ಅವಧಿ ವಿಸ್ತರಣೆ ಮಾಡುವಂತೆ ಪಾಲಿಕೆ ಆಯುಕ್ತರಿಗೆ ಕೃಷ್ಣಪ್ಪ ಮನವಿ ಮಾಡಿದ್ದರು. ಆದರೆ ಇದರಿಂದ ಯಾವುದೇ ಪ್ರಯೋಜನ ಆಗಿರಲಿಲ್ಲ. ಬಳಿಕ ವೆಂಕಟೇಶ್ ಅವರ ಬಳಿ ಮಾತನಾಡಿದ್ದು, ಅವರು ಏಳು ಲಕ್ಷ ರೂಪಾಯಿ ನೀಡುವಂತೆ ಕೃಷ್ಣಪ್ಪಗೆ ಬೇಡಿಕೆ ಇಟ್ಟಿದ್ದರು. ಹಾಗಾಗಿ ಫೋನ್ನಲ್ಲಿ ವೆಂಕಟೇಶ್ ಜೊತೆ ಕೃಷ್ಣಪ್ಪ ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಬಳಿಕ ಇದನ್ನು ಶ್ರೀರಾಮಸೇನೆಯ ಅಧ್ಯಕ್ಷ ಮಣಿ ಸರ್ಕಾರ್ ಗಮನಕ್ಕೆ ತಂದಿದ್ದು, ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿತ್ತು.
ಭ್ರಷ್ಟಾಚಾರದ ಕೂಪವಾಯ್ತ ಪಾಲಿಕೆ?
ಕೃಷ್ಣಪ್ಪನ ಬಳಿ ಮೂರು ಲಕ್ಷ ರೂಪಾಯಿ ಲಂಚ ಪಡೆಯುವಾಗ ವೆಂಕಟೇಶ್ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಹೀಗೆ ಮಹಾನಗರ ಪಾಲಿಕೆಯು ಭ್ರಷ್ಟಾಚಾರದ ಕೂಪವಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಈ ಪ್ರಕರಣ ಪುಷ್ಠಿ ನೀಡಿದಂತಾಗಿದೆ. ಇನ್ನು ವೆಂಕಟೇಶ್ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಂಸದ ಡಾ. ಜಿ. ಎಂ. ಸಿದ್ದೇಶ್ವರ್, ತಪ್ಪಿತಸ್ಥರು ಯಾರೇ ಇದ್ದರೂ ಶಿಕ್ಷೆಯಾಗಲಿ. ಪಾಲಿಕೆ ಆಯುಕ್ತರು ಭಾಗಿ ಆಗಿದ್ದರೆ ತನಿಖೆ ಆಗಬೇಕು. ತನಿಖೆ ಬಳಿಕ ಲಂಚ ಪಡೆದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.
ಲೋಕಾಯುಕ್ತ ಬಲೆಗೆ ವೆಂಕಟೇಶ್
ರಾಮ್ ಅಂಡ್ ಕೋ ಸರ್ಕಲ್ನ ತನ್ನ ಕೊಠಡಿಯಲ್ಲಿ ಮೂರು ಲಕ್ಷ ರೂಪಾಯಿ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ವೆಂಕಟೇಶ್ ಬಳಿ ಇದ್ದ ಮೂರು ಲಕ್ಷ ರೂಪಾಯಿ ಲಂಚದ ಹಣವವನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಆಂಜನೇಯ ಹಾಗೂ ರಾಷ್ಟ್ರಪತಿ ದಾಳಿ ನಡೆಸಿದ್ದರು. ವೆಂಕಟೇಶ್ ಪಡೆದ ಲಂಚದ ಹಣ ಪಾಲಿಕೆಯ ಹಿರಿಯ ಅಧಿಕಾರಿಗಳಿಗೆ ಸಂದಾಯವಾಗುತಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಪಾಲಿಕೆ ಆಯುಕ್ತರ ವಿರುದ್ಧ ಕ್ರಮಕ್ಕೆ ಆಗ್ರಹ
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಈ ಟೆಂಡರ್ ನೀಡುವಲ್ಲಿ ಲಕ್ಷಾಂತರ ರೂಪಾಯಿ ಲಂಚ ವಸೂಲಿ ಮಾಡಿರುವ ಪಾಲಿಕೆ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿರುವ ಅಥವಾ ಜಿಲ್ಲೆಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬೆಂಗಳೂರು ಹೈಕೋರ್ಟ್ ಮತ್ತು ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಸದ್ಯ ಲೋಕಾಯುಕ್ತರಿಗೆ ಈ ಬಗ್ಗೆ ದೂರು ನೀಡಲಾಗಿದೆ. ನಂತರ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಭಾನುವಾರ ರಾತ್ರಿ ಲೋಕಾಯುಕ್ತ ದಾಳಿ
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಕಾತಿ ವಸೂಲಿಗೆ ಸಂಬಂಧಪಟ್ಟಂತೆ 6ತಿಂಗಳ ನವೀಕರಣಕ್ಕೆ ಪಾಲಿಕೆ ಆಯುಕ್ತರು 7 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 2 ಲಕ್ಷ ರೂಪಾಯಿ ಕೇಳಿದ್ದು, ಉಳಿದ 5 ಲಕ್ಷ ರೂಪಾಯಿಯನ್ನು ಆದೇಶಕ್ಕೆ ಸಹಿ ಮಾಡಿದ ನಂತರ ನೀಡುವುದಾಗಿ ಒಪ್ಪಂದ ಮಾಡಿಕೊಂಡು ಮಾತುಕತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವೆಂಕಟೇಶ್ ಅವರನ್ನು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.