ಚಂದ್ರು ಮೊಬೈಲ್ ಪತ್ತೆ, ಹಲವು ಮಾಹಿತಿ ಸಿಕ್ಕಿದೆ: ಆರಗ ಜ್ಞಾನೇಂದ್ರ
ದಾವಣಗೆರೆ, ನವೆಂಬರ್ 4 : ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯರ ಸಹೋದರ ರಮೇಶ್ರ ಪುತ್ರ ಚಂದ್ರಶೇಖರ್ ಬಳಕೆ ಮಾಡುತ್ತಿದ್ದ ಮೊಬೈಲ್ ಪತ್ತೆಯಾಗಿದ್ದು, ಹಲವು ವಿಚಾರಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಚಂದ್ರಶೇಖರ್ ಅಂತ್ಯಕ್ರಿಯೆ ಬಳಿಕ ಶುಕ್ರವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಮೊಬೈಲ್ ಕರೆಗಳು, ವ್ಯಾಟ್ಸಪ್ ಚಾಟ್ ಸೇರಿದಂತೆ ಯಾರೆಲ್ಲಾ ಜೊತೆ ಚಂದ್ರಶೇಖರ್ ಸಾವಿಗೀಡಾಗುವ ಮುನ್ನ ಸಂಪರ್ಕದಲ್ಲಿ ಇದ್ದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ" ಎಂದು ತಿಳಿಸಿದರು.
ಚಂದ್ರಶೇಖರ್ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ಕೊಟ್ಟಿದ್ದರು!
"ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಎಲ್ಲಾ ರೀತಿಯಲ್ಲಿಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಎಫ್ಎಸ್ಎಲ್ ವರದಿ ಬಳಿಕ ಹೆಚ್ಚಿನ ಮಾಹಿತಿ ಸಿಗುತ್ತದೆ. ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಮುಂದುವರಿದಿದೆ. ಪ್ರಾಥಮಿಕ ತನಿಖೆಯಲ್ಲಿ ಹಲವು ವಿಚಾರಗಳು ತಿಳಿದು ಬಂದಿದೆ. ಚಂದ್ರು ಚಾಲನೆ ಮಾಡಿದ್ದಾರೆ ಎನ್ನಲಾದ ಕಾರಿನಲ್ಲಿ ಮೊಬೈಲ್ ಫೋನ್ ಸಿಕ್ಕಿದೆ. ಈ ಮೊಬೈಲ್ನಿಂದ ಹಲವು ಮಾಹಿತಿ ದೊರೆತಿದೆ" ಎಂದು ಮಾಹಿತಿ ನೀಡಿದರು.
"ಇನ್ನು ರೇಣುಕಾಚಾರ್ಯರಿಗೆ ಬೆದರಿಕೆ ಕರೆಗಳು ಬಂದಿರುವ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅವರಿಗೆ ಧಮ್ಕಿ ಹಾಕಿರುವ ಕುರಿತಂತೆ ವಿಶೇಷವಾಗಿ ತನಿಖೆ ನಡೆಸಲಾಗುವುದು. ಯಾವ ವಿಚಾರವನ್ನೂ ಸುಮ್ಮನೆ ಬಿಡುವುದಿಲ್ಲ. ಸೂಕ್ತ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿರುವುದಾಗಿ" ಆರಗ ಜ್ಞಾನೇಂದ್ರ ಹೇಳಿದರು.
ರೇಣುಕಾಚಾರ್ಯ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ
"ಚಂದ್ರಶೇಖರ್ ಸಾವು ನೋವಿನ ಸಂಗತಿ. ರಾಜ್ಯಾದ್ಯಂತ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಹೊನ್ನಾಳಿಯ ಕಡದಕಟ್ಟೆಯಲ್ಲಿ ಮೃತದೇಹ ಪತ್ತೆಯಾಗಿದೆ. ದಾವಣಗೆರೆ ಎಸ್ಪಿ ರಿಷ್ಯಂತ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಪೊಲೀಸ್ ಹಾಗೂ ಎಫ್ ಎಸ್ ಎಲ್ ವರದಿ ಬರಬೇಕಿದೆ. ಅಲ್ಲಿಯವರೆಗೆ ಏನಾಗಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಆಗದು. ನನಗೆ ರೇಣುಕಾಚಾರ್ಯ ಕುಟುಂಬ ಶಾಸಕನಾಗುವುದಕ್ಕಿಂತ ಮೊದಲಿನಿಂದ ಪರಿಚಯ ಇದೆ. ಚಂದ್ರು ಸಾವಿನ ಬಳಿಕ ಹೊನ್ನಾಳಿಯ ಜನರು ದುಃಖಿತರಾಗಿದ್ದಾರೆ. ಇದನ್ನು ನೋಡಿದಾಗ ಆತ ಎಷ್ಟು ಜನಪ್ರಿಯ ವ್ಯಕ್ತಿ ಎಂಬುದು ಗೊತ್ತಾಗುತ್ತದೆ. ಯಾರೂ ಕೂಡ ಸಹನೆ ಕಳೆದುಕೊಳ್ಳಬಾರದು. ರೇಣುಕಾಚಾರ್ಯ ಕುಟುಂಬಕ್ಕೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಲು ಬದ್ಧತೆಯಿಂದ ಕೆಲಸ ಮಾಡುತ್ತೇವೆ" ಎಂದು ತಿಳಿಸಿದರು.
ವಿನಯ್ ಗುರೂಜಿ ವಿಚಾರಣೆ ಮಾಡಲ್ಲ
"ಸರಕಾರ ಮತ್ತು ಪೊಲೀಸ್ ಇಲಾಖೆಯು ಈ ಪ್ರಕರಣದ ಬಗ್ಗೆ ವಿಶೇಷ ನಿಗಾ ವಹಿಸಿದೆ. ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿ ಚಂದ್ರಶೇಖರ್ ವಾಪಸ್ ಆಗಿದ್ದಾರೆ. ಹಾಗೆಂದ ಮಾತ್ರಕ್ಕೆ ವಿನಯ್ ಗುರೂಜಿ ವಿಚಾರಣೆ ಮಾಡಲು ಆಗದು. ತಮಿಳುನಾಡು, ಮೈಸೂರು ಸೇರಿದಂತೆ ಬೇರೆ ಕಡೆ ಹೋಗುತ್ತಾರೆ ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಆಗಿರುವುದೇ ಬೇರೆ. ಎಲ್ಲವನ್ನೂ ಈಗಲೇ ಹೇಳಲು ಆಗದು. ಸಾವನ್ನಪ್ಪಿದವರನ್ನು ಬದುಕಿಸಲು ಆಗದು" ಎಂದರು.
ಸಣ್ಣ ಎಳೆಯಿಂದ ಮೃತದೇಹ ಮತ್ತೆ
"ನಾಲ್ಕು ದಿನಗಳ ಕಾಲ ಚಂದ್ರಶೇಖರ್ ಪತ್ತೆಗೆ ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗಿದ್ದರೂ ಪತ್ತೆ ಆಗಿರಲಿಲ್ಲ. ಡ್ರೋಣ್ ಹಾರಿಸಿದಾಗ ಕಾರಿನ ಅವಶೇಷಗಳು ಪತ್ತೆಯಾಗಿವೆ. ಸಣ್ಣ ಎಳೆಯಿಂದ ಹುಡುಕಾಡಿದಾಗ ಇದು ಗೊತ್ತಾಗಿದೆ. ಚಂದ್ರಶೇಖರ್ ಮೃತದೇಹ ಕಡದಕಟ್ಟೆಯ ಬಳಿ ಸಿಕ್ಕಿದೆ. ಪ್ರಕರಣದ ಬಗ್ಗೆ ಪೊಲೀಸ್ ಸಿಬ್ಬಂದಿ, ಬಿಜೆಪಿ ಪಕ್ಷದ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ. ಎಲ್ಲವನ್ನೂ ಗೃಹ ಸಚಿವರಾಗಿ ಹೇಳಲು ಆಗದು. ಗೃಹ ಇಲಾಖೆಯು ಅತ್ಯಂತ ಗಂಭೀರವಾಗಿ ಈ ಪ್ರಕರಣವನ್ನು ಪರಿಗಣಿಸಿದೆ" ಎಂದು ಗೃಹ ಸಚಿವರು ವಿವರಿಸಿದರು.
"ಯಾವುದೋ ಊಹೆ ಮೇಲೆ ಮಾತನಾಡಲು ಆಗದು. ಜನರು ಹಾಗೂ ಕುಟುಂಬದವರ ಮೇಲೆ ಏನೇನೋ ಹೇಳಿದರೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸುಳ್ಳು ಸುದ್ದಿಗಳನ್ನು ಯಾರೂ ಹರಡಬೇಡಿ. ಸ್ವಲ್ಪ ದಿನಗಳ ಕಾಲ ಸಮಾಧಾನದಿಂದ ಕಾಯಬೇಕು. ಪ್ರಕರಣದ ಸತ್ಯಾಸತ್ಯತೆ ಹೊರಬರುತ್ತದೆ" ಎಂದು ಆರಗ ಜ್ಞಾನೇಂದ್ರ ಹೇಳಿದರು.
ಸರಕಾರದಿಂದ ಸಮಗ್ರ ತನಿಖೆಯ ಭರವಸೆ
ಇನ್ನು ಶಾಸಕ ಎಂ. ಪಿ. ರೇಣುಕಾಚಾರ್ಯ ಮಾತನಾಡಿ, "ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಹಾಗೂ ಸರಕಾರ ನಿಮ್ಮ ಜೊತೆ ಇರುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಭರವಸೆ ನೀಡಿದ್ದಾರೆ. ನನಗೆ ತೋರಿದಷ್ಟೇ ಪ್ರೀತಿಯನ್ನು ಚಂದ್ರಶೇಖರ್ಗೆ ಜನರು ತೋರಿದ್ದಾರೆ. ಈ ಪ್ರೀತಿಗೆ ನಾನು ಚಿರ ಋಣಿಯಾಗಿರುತ್ತೇನೆ. ಚಂದ್ರು ಅಂದರೆ ಜನರಿಗೆ ಎಷ್ಟು ಇಷ್ಟವಾಗಿದ್ದ ಎಂಬುದು ಗೊತ್ತಾಗಿದೆ" ಎಂದು ಹೇಳಿದರು.