ಚಿರತೆಯಿಂದ ತಪ್ಪಿಕೊಳ್ಳುವ ಯತ್ನದಲ್ಲಿ ಬೋನಿನಲ್ಲಿ ಸಿಕ್ಕಿಬಿದ್ದ ಮೂವರು ಮಾಡಿದ್ದೇನು?
ದಾವಣಗೆರೆಯ ಹರಪ್ಪನಹಳ್ಳಿ ತಾಲೂಕಿನ ಕಡತಿ ಗ್ರಾಮದಲ್ಲಿ ಚಿರತೆಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಮೂವರು ಯುವಕರು ಬೋನಿನಲ್ಲಿ ಸಿಕ್ಕಿಕೊಂಡಿದ್ದಾರೆ. ಆ ನಂತರ ಗ್ರಾಮಸ್ಥರು ಬಂದು ರಕ್ಷಿಸಿದ್ದಾರೆ
ಹರಪನಹಳ್ಳಿ, ಮೇ 20 : ಈ ಘಟನೆ ಕೇಳುವುದಕ್ಕೇನೋ ಮಜವಾಗಿದೆ. ಆದರೆ ಆ ಸನ್ನಿವೇಶದಲ್ಲಿ ಸಿಕ್ಕಿಕೊಂಡವರ ಪರದಾಟವನ್ನು ಊಹಿಸಿಕೊಂಡರೂ ಗಾಬರಿಯಾಗುತ್ತದೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ? ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಡತಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಮೂವರು ಯುವಕರು ಬೋನಿನಲ್ಲಿ ಸಿಕ್ಕಿಕೊಂಡಿದ್ದಾರೆ.
ಅದು ಯಾವ ಬೋನು ಅಂತೀರಿ, ಚಿರತೆಯನ್ನು ಕೆಡವಲು ಇಟ್ಟಿದ್ದ ಬೋನಿನಲ್ಲೇ ಈ ಮೂವರು ಸಿಕ್ಕಿಹಾಕಿಕೊಂಡಿದ್ದಾರೆ. ತಾಲೂಕು ಪಂಚಾಯಿತಿ ಸದಸ್ಯೆಯ ಬಾಳೆ ತೋಟಕ್ಕೆ ನೀರು ಹರಿಸಸುವುದಕ್ಕೆ ಅವರದೇ ಕುಟುಂಬ ಸದಸ್ಯರಾದ ಗೌಡ್ರ ಮಾಲತೇಶ್, ಗೌಡ್ರ ಕುಮಾರ್, ಗುರುಬಸವರಾಜ್ ಹೋಗಿದ್ದರು.[ಉಡುಪಿ: ಓಡೋಡಿ ಬಂದು ಬಾವಿಗೆ ಬಿದ್ದ ಕರಿ ಚಿರತೆ ರಕ್ಷಣೆ]
ಅಲ್ಲಿ ಚಿರತೆಗಳನ್ನು ಕಂಡವರೇ ಗಾಬರಿಯಿಂದ ಓಡಿಹೋಗಿ ಸ್ವಲ್ಪ ದೂರದಲ್ಲಿ ಇಟ್ಟಿದ್ದ ಬೋನಿನ ಒಳಹೊಕ್ಕಿದ್ದಾರೆ. ಆದರೆ ಅಲ್ಲಿಂದ ಹೊರ ಬರಲು ಸಾಧ್ಯವಾಗದೆ ಕೊನೆಗೆ ಗ್ರಾಮಸ್ಥರಿಗೆ ಮೊಬೈಲ್ ನಿಂದ ಕಾಲ್ ಮಾಡಿ, ವಿಷಯ ತಿಳಿಸಿದ್ದಾರೆ. ಆ ಬಳಿಕ ಆಯುಧಗಳ ಜತೆಗೆ ಗ್ರಾಮಸ್ಥರು ಸ್ಥಳಕ್ಕೆ ಬಂದಾಗ ಹೆದರಿದ ಚಿರತೆಗಳು ಕಾಡಿನತ್ತ ಓಡಿ ಹೋಗಿವೆ.[ದಾವಣಗೆರೆ: ಮೇಕೆ ಮರಿ ಹಿಡಿದ ಚಿರತೆಯನ್ನು ಜೀವಂತವಾಗಿ ಸುಟ್ಟರು]
ಕಬ್ಬು ಮತ್ತು ಬಾಳೆ ತೋಟದಲ್ಲಿ ಚಿರತೆಗಳ ಹೆಜ್ಜೆ ಗುರುತು ಪತ್ತೆಯಾಗಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟಿದ್ವಿ ಎಂದು ಗೌಡ್ರ ಜಗದೀಶ್ ಹೇಳಿದ್ದಾರೆ. ಆಹಾರ ಮತ್ತು ನೀರು ಅರಸಿ ಚಿರತೆಗಳು ಗ್ರಾಮಕ್ಕೆ ಬಂದಿವೆ. ಎರಡು ಮರಿಗಳು ಸೇರಿ ಮೂರು ಚಿರತೆಗಳು ಇರುವ ಮಾಹಿತಿ ಸಿಕ್ಕಿದೆ ಎಂದು ಅರಣ್ಯ ಇಲಾಖಾಧಿಕಾರಿ ಬಷೀರ್ ಅಹಮದ್ ಹೇಳಿದ್ದಾರೆ.
{promotion-urls}