ಬಣಕಾರ್-ಬಿ.ಸಿ.ಪಾಟೀಲ್ ನಡುವೆ ಸಂಧಾನ: ಯಡಿಯೂರಪ್ಪ ಹೈರಾಣ
ಬೆಂಗಳೂರು, ಸೆಪ್ಟೆಂಬರ್ 26: ಹಿರೇಕೆರೂರು ಕ್ಷೇತ್ರ ಉಪಚುನಾವಣೆ ಬಿಜೆಪಿಗೆ ತಲೆನೋವು ತಂದೊಡ್ಡುತ್ತಿದ್ದು, ಯು.ಬಿ.ಬಣಕಾರ್ ಮತ್ತು ಬಿಸಿ.ಪಾಟೀಲ್ ನಡುವೆ ಬಿಜೆಪಿ ಟಿಕೆಟ್ಗಾಗಿ ಕಿತ್ತಾಟ ನಡೆಯುತ್ತಿದೆ.
ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿರೇಕೆರೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ನಿಂದ ಸ್ಪರ್ಧಿಸಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಯುಬಿ ಬಣಕಾರ್ ವಿರುದ್ಧ ಕಡಿಮೆ ಅಂತರದಲ್ಲಿ ಗೆಲವು ಸಾಧಿಸಿದ್ದರು.
ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಪರಿಚಯ
ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಬಿ.ಸಿ.ಪಾಟೀಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸಖ್ಯ ಸಾಧಿಸಿ, ಬಿಜೆಪಿ ಟಿಕೆಟ್ನಿಂದ ಉಪಚುನಾವಣೆ ಸ್ಪರ್ಧಿಸಲು ಹವಣಿಸಿದ್ದಾರೆ. ಅವರಿಗೆ ಟಿಕೆಟ್ ದೊರೆಯುವ ಎಲ್ಲ ಸಾಧ್ಯತೆಗಳೂ ಇವೆ.
ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲನುಭವಿಸಿದ್ದ ಯು.ಬಿ.ಬಣಕಾರ್ ಅವರು ಅಸಮಾಧಾನಗೊಂಡಿದ್ದು, ಬಿಜೆಪಿ ಟಿಕೆಟ್ ತಮಗೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಬಿಜೆಪಿ ಟಿಕೆಟ್ ಸಿಗದೇ ಹೋದಲ್ಲಿ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಅವರು ಈಗಾಗಲೇ ಘೊಷಿಸಿದ್ದಾರೆ. ಇದು ಬಿಜೆಪಿಗೆ ತಲೆನೋವಾಗಿದೆ.
ಯಡಿಯೂರಪ್ಪ ಸಂಧಾನ ವಿಫಲವಾಗಿದೆ
ಟಿಕೆಟ್ ಸಮಸ್ಯೆ ಬಗೆಹರಿಸಲೆಂದೇ ನಿನ್ನೆ ರಾತ್ರಿ ಯಡಿಯೂರಪ್ಪ ಅವರು ಬಿ.ಸಿ.ಪಾಟೀಲ್ ಮತ್ತು ಯು.ಬಿ.ಬಣಕಾರ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದರು ಎನ್ನಲಾಗಿದೆ. 'ಬಿ.ಸಿ.ಪಾಟೀಲ್ ಅವರಿಗೆ ಉಪಚುನಾವಣೆಯಲ್ಲಿ ಬೆಂಬಲ ನೀಡಬೇಕು' ಎಂದು ಯಡಿಯೂರಪ್ಪ ಬಣಕಾರ್ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅದು ವ್ಯರ್ಥವಾಗಿದೆ.
ಏಲಕ್ಕಿ ನಾಡು ಹಾವೇರಿಯಲ್ಲಿ ಗೆದ್ದು ಬೀಗಿದ ಬಿಜೆಪಿ!
ಬಿ.ಸಿ.ಪಾಟೀಲ್-ಬಣಕಾರ್ ರಾಜಕೀಯ ವೈರತ್ವ
'ಕ್ಷೇತ್ರದಲ್ಲಿ ನನ್ನ ಹಾಗೂ ಬಿ.ಸಿ.ಪಾಟೀಲ್ ನಡುವೆ ಬಹುವರ್ಷಗಳ ರಾಜಕೀಯ ವೈರತ್ವ ಇದೆ. ಕಳೆದ ಚುನಾವಣೆಯಲ್ಲಿ ನಮ್ಮಬ್ಬಿರ ಬೆಂಬಲಿಗರು ಪರಸ್ಪರ ಕೈ-ಕೈ ಸಹ ಮಿಲಾಯಿಸಿದ್ದಾರೆ. ಈಗ ನಾನು ಅವರಿಗೆ ಬೆಂಬಲ ಸೂಚಿಸಿದರೆ ಬೆಂಬಲಿಗರು ಒಪ್ಪುವುದಿಲ್ಲ' ಎಂದು ಬಣಕಾರ್ ಅವರು ಯಡಿಯೂರಪ್ಪ ಸೂಚನೆಯನ್ನು ತಿರಸ್ಕರಿಸಿದ್ದಾರೆ.
ನಿಗದಿತ ವೇಳೆ ಉಪ ಚುನಾವಣೆ ನಡೆದರೆ ಬಿಜೆಪಿಗರೇ ಅಭ್ಯರ್ಥಿಗಳು: ಲಿಂಬಾವಳಿ
ಕೇವಲ 555 ಮತಗಳ ಅಂತರದಿಂದ ಗೆದ್ದಿದ್ದ ಪಾಟೀಲ್
ಬಣಕಾರ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೇವಲ 555 ಮತಗಳ ಅಂತರದಿಂದ ಸೋಲನುಭವಿಸಿದ್ದರು. ಹಾಗಾಗಿ ಈ ಉಪಚುನಾವಣೆಯಲ್ಲಿ ತಮಗೆ ಗೆಲುವು ಸಿಗುತ್ತದೆಯೆಂಬ ನಿರೀಕ್ಷೆಯಲ್ಲಿ ಬಣಕಾರ್ ಇದ್ದು ಈ ಬಾರಿ ಉಪಚುನಾವಣೆಯಲ್ಲಿ ಪಕ್ಷೇತರವಾಗಿಯಾದರೂ ಪಾಟೀಲ್ ಅವರನ್ನು ಎದುರಿಸುವ ಉಮೇದು ವ್ಯಕ್ತಪಡಿಸಿದ್ದಾರೆ.
ಬಣಕಾರ್ ಸ್ಪರ್ಧಿಸಿದರೆ ಪಾಟೀಲ್ಗೆ ಸಂಕಷ್ಟ
ಒಂದು ವೇಳೆ ಯು.ಬಿ.ಬಣಕಾರ್ ಅವರು ಉಪಚುನಾವಣೆಗೆ ಸ್ಪರ್ಧಿಸಿದ್ದೇ ಆದಲ್ಲಿ ಬಿ.ಸಿ.ಪಾಟೀಲ್ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ. ಯು.ಬಿ.ಬಣಕಾರ್ ಅವರನ್ನು ಕಾಂಗ್ರೆಸ್ ಪಕ್ಷ ಸಹ ಸಂಪರ್ಕಿಸುವ ಪ್ರಯತ್ನ ಮಾಡಿದ್ದು, ಅವರು ಕಾಂಗ್ರೆಸ್ ಜೊತೆ ಹೋಗುತ್ತಾರೆಯೋ ಇಲ್ಲವೋ ಕಾದು ನೋಡಬೇಕಿದೆ.