ಚಿತ್ರದುರ್ಗ ಜಿಲ್ಲೆಗೆ ಕಾಂಗ್ರೆಸ್ ಸರಕಾರ ನೀಡಿದ್ದೇನು?
ಚಿತ್ರದುರ್ಗ ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಕೈಗೆತ್ತಿಕೊಂಡ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಇಲ್ಲಿದೆ. ಜನರು ವಲಸೆ ಹೋಗದಂತೆ ಉದ್ಯೋಗ ಖಾತರಿಯಲ್ಲಿ 4,00,923 ಕುಟುಂಬಗಳಿಗೆ ಉದ್ಯೋಗ ನೀಡಿ, ಇದಕ್ಕಾಗಿ 780 ಕೋಟಿ ವೆಚ್ಚ ಮಾಡಲಾಗಿದೆ.
ಜಾನುವಾರುಗಳಿಗೆ ಮೇವು ಬ್ಯಾಂಕ್ ಮೂಲಕ 6,500 ಮೆಟ್ರಿಕ್ ಟನ್ ಮೇವು ಖರೀದಿ ಮಾಡಿದ್ದು, ಇದಕ್ಕಾಗಿ 29 ಕೋಟಿ ರು. ವೆಚ್ಚ ಮಾಡಲಾಗಿದೆ. ಬರಗಾಲದಿಂದ ಅಂತರ್ಜಲ ಮಟ್ಟ ಸಂಪೂರ್ಣ ಬತ್ತಿ ಹೋಗಿದ್ದು, ಆ ಸಂದರ್ಭದಲ್ಲಿ ಹಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಪೂರೈಕೆ ಮಾಡಿ ಜನರಿಗೆ ನೀರನ್ನು ಒದಗಿಸಲಾಗಿದೆ. ಇದಕ್ಕಾಗಿ 25 ಕೋಟಿ ರುಪಾಯಿ ವೆಚ್ಚವಾಗಿದೆ.
ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ ಸರ್ಕಾರದ ಕೊಡುಗೆಗಳು
ಜಿಲ್ಲೆಯಲ್ಲಿ ಬೆಳೆನಷ್ಟ ಉಂಟಾದ ರೈತರಿಗೆ ಇನ್ಪುಟ್ ಸಬ್ಸಿಡಿಯನ್ನು ನೇರವಾಗಿ ಖಾತೆಗೆ ಜಮಾ ಮಾಡಲಾಗಿದೆ. ಸುಮಾರು 2 ಲಕ್ಷ ರೈತರು ಇದರಿಂದ ಲಾಭ ಪಡೆದಿದ್ದು 110.42 ಕೋಟಿ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದವರೇ ಹೆಚ್ಚಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗಾಗಿ ಹೊಸ ಹಾಸ್ಟೆಲ್ ಗಳನ್ನು, ವಸತಿ ಶಾಲೆಗಳನ್ನು ತೆರೆಯಲಾಗಿದೆ.
2,51,058 ವಿದ್ಯಾರ್ಥಿಗಳು ಈ ಹಾಸ್ಟೆಲ್ ಸೌಲಭ್ಯವನ್ನು ಪಡೆದಿದ್ದು, ಇದಕ್ಕಾಗಿ 58.25 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ. ಸುಡುಗಾಡು ಸಿದ್ದರ ಕಾಲೋನಿ; ಹೊಳಲ್ಕೆರೆ ತಾ; ರಾಮಗಿರಿ ಮತ್ತು ಚಿತ್ರಹಳ್ಳಿ ಸಮೀಪ ಅತ್ಯಾಧುನಿಕ ಬಡಾವಣೆಗಳನ್ನಾಗಿ ವಿಂಗಡಿಸಿ ಉಚಿತವಾಗಿ ನಿವೇಶನ ಮತ್ತು ಮನೆ ನಿರ್ಮಾಣ ಮಾಡುವ ಯೋಜನೆಯಡಿ ಬಡಾವಣೆ ವಿಂಗಡಣೆಗಾಗಿ 4.98 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ.
ಕನ್ನಡ- ಉರ್ದು ಶಾಲೆಗೆ ಕಟ್ಟಡ ನಿರ್ಮಾಣ
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹೊಳಲ್ಕೆರೆಯಲ್ಲಿ 3.34 ಕೋಟಿ ವೆಚ್ಚದಲ್ಲಿ ಸರಕಾರಿ ಹಿರಿಯ ಮಾದರಿ ಕನ್ನಡ ಮತ್ತು ಉರ್ದು ಶಾಲೆಗೆ ಅತ್ಯಾಧುನಿಕ ಹೈಟೆಕ್ ಕಟ್ಟಡ ನಿರ್ಮಾಣ, ಡಾ. ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್ ರಾಂ ಭವನ, ವಾಲ್ಮೀಕಿ ಭವನಗಳನ್ನು ನಿರ್ಮಿಸಲಾಗಿದ್ದು, ಇದಕ್ಕಾಗಿ 9,957 ಲಕ್ಷ ಬಿಡುಗಡೆ ಮಾಡಲಾಗಿದೆ.
ರಸ್ತೆ ಅಭಿವೃದ್ಧಿಗೆ 25 ಕೋಟಿ ಅನುದಾನ
ಭದ್ರಾ ಮೇಲ್ದಂಡೆ ಯೋಜನೆಯಡಿ ಎಂಟು ಪ್ಯಾಕೇಜ್ ಕಾಮಗಾರಿ ನಡೆಯುತ್ತಿದೆ. 12,395 ಕೋಟಿ ರುಪಾಯಿ ಯೋಜನೆ ಇದಾಗಿದ್ದು, ಚಿತ್ರದುರ್ಗ ಶಾಖಾ ಕಾಲುವೆ, ತುಮಕೂರು ಶಾಖಾ ಕಾಲುವೆ ಸರ್ವೇ ಕೆಲಸ, ಟನಲ್ ಕೆಲಸ ಸೇರಿದಂತೆ ಅನೇಕ ಕಡೆ ಕಾಮಗಾರಿ ಸಾಗಿದ್ದು, ಈ ವರೆಗೆ 1,986 ಕೋಟಿ ವೆಚ್ಚ ಮಾಡಲಾಗಿದೆ. ನಾಲ್ಕು ವರ್ಷದ ಸಾಧನಾ ಸಮಾವೇಶದ ವೇಳೆ ಚಿತ್ರದುರ್ಗ ನಗರದಲ್ಲಿನ ರಸ್ತೆಗಳ ಅಭಿವೃದ್ಧಿಗಾಗಿ ಸಿದ್ದರಾಮಯ್ಯ 25 ಕೋಟಿ ಅನುದಾನ ನೀಡಿದ್ದಾರೆ.
ಬಸ್ ಘಟಕ ನಿರ್ಮಾಣ
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಕೆ.ಎಸ್.ಆರ್.ಟಿ.ಸಿಯಿಂದ ಬಸ್ ನಿಲ್ದಾಣ ಮತ್ತು ಘಟಕ ಸ್ಥಾಪನೆ ಮಾಡಿ, ಕಟ್ಟಡ ನಿರ್ಮಿಸಿ ಉದ್ಘಾಟಿಸಲಾಗಿದೆ. ಇದಕ್ಕಾಗಿ ಸುಮಾರು 10 ಕೋಟಿ ರುಪಾಯಿಗಳಷ್ಟು ವೆಚ್ಚ ಮಾಡಲಾಗಿದೆ. ಚಳ್ಳಕೆರೆ ಬಸ್ ನಿಲ್ದಾಣ ಮತ್ತು ಘಟಕ ಸ್ಥಾಪನೆ ಮಾಡಲಾಗಿದ್ದು, ಇದಕ್ಕಾಗಿ 17.5 ಕೋಟಿ ವೆಚ್ಚವಾಗಿದೆ.
ಕುಡಿಯುವ ನೀರಿನ ಯೋಜನೆ
ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ ಹಿರಿಯೂರು ತಾ; ಐಮಂಗಲ, ಜವನಗೊಂಡನಹಳ್ಳಿ, ಸಿರಿಗೆರೆ- ಭರಮಸಾಗರ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಹೊಸದುರ್ಗ ತಾಲೂಕಿಗೆ ಭದ್ರಾದಿಂದ ನೀರು ನೀಡಲು 300 ಕೋಟಿ ರುಪಾಯಿ ಯೋಜನೆ ತಯಾರಿಸಲಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕಗಳು
ಕೃಷಿ ಭಾಗ್ಯದಡಿ 5,174 ಕೃಷಿ ಹೊಂಡಗಳ ನಿರ್ಮಾಣ ಮಾಡಲಾಗಿದ್ದು, 269 ಪಾಲಿಹೌಸ್ ನಿರ್ಮಿಸಲಾಗಿದೆ. ಇದರ ಅನುಕೂಲ 5,443 ಫಲಾನುಭವಿಗಳಿಗಾಗಿದೆ. ಕೃಷಿಯಂತ್ರ ಧಾರೆಯಡಿ 17 ಬಾಡಿಗೆ ಸೇವಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು 627.43 ಲಕ್ಷ ಸರ್ಕಾರದಿಂದ ನೀಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 563 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದ್ದು, ಇದರಿಂದ ಸಾವಿರಾರು ಮಂದಿಗೆ ಅನುಕೂಲವಾಗಿದೆ.