UPSCಯಲ್ಲಿ 92ನೇ ಶ್ರೇಯಾಂಕ ಪಡೆದ ಚಿತ್ರದುರ್ಗದ ಡಾ. ಬೆನಕ ಪ್ರಸಾದ್
ಚಿತ್ರದುರ್ಗ, ಮೇ 30 : ಕೇಂದ್ರ ಲೋಕಸೇವಾ ಆಯೋಗ ದೇಶದ ಅತ್ಯುನ್ನತ ನಾಗರೀಕ ಸೇವೆಗಳ ನೇಮಕಕ್ಕೆ 2021ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮೂಲದ ಡಾ. ಈ. ಬೆನಕ ಪ್ರಸಾದ್ ಮೂರನೇ ಪ್ರಯತ್ನದಲ್ಲಿ 92ನೇ ರ್ಯಾಂಕ್ ಪಡೆದು ಕರ್ನಾಟಕದ ಟಾಪರ್ ಸಾಲು ಸೇರಿದ್ದಾರೆ.
ನಿವೃತ್ತ ಉಪನ್ಯಾಸಕ ನಾಗರಕಟ್ಟೆ ದಿ. ಜಯಣ್ಣ ಹಾಗೂ ಪಂಕಜಾ ದಂಪತಿಗಳಿಗೆ ಮೂವರು ಮಕ್ಕಳು. ಮೊದಲನೇ ಪುತ್ರ ವಿಶ್ವಚೇತನ ಅವರು ಪ್ರೌಢಶಾಲೆಯಲ್ಲಿ ಎಸ್ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಎರಡನೇ ಮಗಳು ಪ್ರಿಯಾಂಕಾ ಸಿಎಂ ಕಚೇರಿಯಲ್ಲಿ ಎಸ್.ಡಿ.ಎ. ಆಗಿ ಕೆಲಸ ಮಾಡುತ್ತಿದ್ದು, ಮೂರನೇ ಮಗನಾಗಿ ಡಾ. ಬೆನಕ ಪ್ರಸಾದ್ ವೈದ್ಯಾಧಿಕಾರಿಯಾ ಕೆಲಸ ಮಾಡಿಕೊಂಡು ಈ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಪ್ರಸ್ತುತ ಡಾ. ಬೆನಕ ಪ್ರಸಾದ್ ಅವರು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಇಎಸ್ಐನಲ್ಲಿ ವಿಮಾ ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ತಂದೆಯನ್ನು ಕಳೆದುಕೊಂಡ ನೋವಿನಲ್ಲೂ ಈ ಸಾಧನೆ ಮಾಡಿದ ಮಗನಿಗೆ ಕುಟುಂಬದ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

ತಂದೆಯ ಮಾರ್ಗದರ್ಶನ ವೈದ್ಯಕೀಯ ಶಿಕ್ಷಣ ಆಯ್ಕೆ
ಚಿಕ್ಕಂದಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಬೆನಕ ಪ್ರಸಾದ್ ಅವರು ಪ್ರಾಥಮಿಕ ಶಿಕ್ಷಣವನ್ನು ಹೊಸದುರ್ಗದ ಸಂತ ಆಂತೋನಿ ಶಾಲೆಯಲ್ಲಿ ಮುಗಿಸಿದರು. ನಂತರ ಬಂಟ್ವಾಳ ತಾಲೂಕಿನ ಆಳಿಕೆಯ ಸತ್ಯಸಾಯಿಬಾಬಾ ಲೋಕಸಭಾ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಪೂರೈಸಿ ಪಿಯುಸಿಯಲ್ಲಿ ಶೇಕಡ 99ರಷ್ಟು ಅಂಕಗಳಿಸಿದರು. ತಂದೆ ಮಾರ್ಗದರ್ಶನದಂತೆ ವೈದ್ಯಕೀಯ ಶಿಕ್ಷಣದತ್ತ ಮುಖ ಮಾಡಿ, ಬೆಂಗಳೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 2018 ವೈದ್ಯಕೀಯ ಶಿಕ್ಷಣ ಪಡೆದು ಪದವಿ ಮುಗಿಸಿ ಹೊರಬರುವ ಹೊತ್ತಿಗೆ ಯುಪಿಎಸ್ಸಿ ಕನಸು ಕಂಡಿದ್ದರು.

ಅಪ್ಪನ ಆಸೆಯನ್ನು ಈಡೇರಿಸಿದ್ದೇನೆ
ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬೆನಕ ಪ್ರಸಾದ್ ಚಿತ್ರದುರ್ಗ ಪ್ರತಿನಿಧಿ ಜೊತೆ ದೂರವಾಣಿ ಮೂಲಕ ಮಾತನಾಡಿದ್ದು"ನನ್ನ ತಂದೆ ಜಯಪ್ಪ ಪ್ರಾಧ್ಯಾಪಕರಾಗಿದ್ದರು. ಮಗ ನೀನು ಜಿಲ್ಲಾಧಿಕಾರಿ ಆಗಬೇಕು ಹೇಳಿ ನನ್ನಲ್ಲಿ ಆ ಕನಸು ಮೂಡಿಸಿದ್ದರು. ಅವರು ಹಾಕಿದ ಹೆಜ್ಜೆಯಲ್ಲಿ ಮುಂದುವರಿದು, ಅಪ್ಪನ ಮಾರ್ಗದರ್ಶನದಂತೆ ನಡೆದು ಇಂದು ಅವರ ಕನಸನ್ನು ನನಸಾಗಿದ್ದೇನೆ" ಎಂದು ತಿಳಿಸಿದರು.

ಬೆನ್ನಲುಬಾಗಿ ನಿಂತ ಕುಟುಂಬ
"ನನ್ನ ತಂದೆ ನನಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹ ನೀಡಿದ್ದರು. ಅವರ ಆಸೆಯನ್ನು ಇಡೇರಿಸಬೇಕೆಂಬ ನನ್ನ ಕನಸ ನನಸಾಗಲು ಅಮ್ಮ, ಅಣ್ಣ, ತಂಗಿ ತುಂಬಾ ಸಪೋರ್ಟ್ ಮಾಡಿದ್ದಾರೆ. ನನಗೆ ನನ್ನ ಕುಟುಂಬ ಬೆನ್ನೆಲುಬಾಗಿ ನಿಂತಿತ್ತು. ಇನ್ನು ಹೊಸದುರ್ಗ ಕುಂಚಿಟಿಗ ಮಠದ ಶ್ರೀಗಳ ಪ್ರೋತ್ಸಾಹ, ಬೆಂಬಲ ಹಾಗೂ ಆಶಿರ್ವಾದದಿಂದ ಈ ಸಾಧನೆ ಮಾಡಿದ್ದೇನೆ. ಈ ಗುರಿ ತಲುಪಲು ನನಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ಬೆನಕ ಪ್ರಸಾದ್ ಹೇಳಿದರು.

ತಮ್ಮನ ಸಾಧನೆ ಹೆಮ್ಮೆ ತಂದಿದೆ
ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ 92ನೇ ಶ್ರೇಯಾಂಕ ಪಡೆದಿರುವುದಕ್ಕೆ ಬೆನಕ ಪ್ರಸಾದ್ ಅಣ್ಣ ವಿಶ್ವ ಚೇತನ್ ಹರ್ಷ ವ್ಯಕ್ತಪಡಿಸಿದ್ದಾರೆ. "ತಮ್ಮನ ಸಾಧನೆ ಬಗ್ಗೆ ಮಾತಾಡಲು ನನಗೆ ಬಾಯಲ್ಲಿ ಪದಗಳೇ ಸಿಗುತ್ತಿಲ್ಲ. ತುಂಬಾ ಸಂತೋಷವಾಗುತ್ತಿದೆ. ತಮ್ಮನ ಸಾಧನೆಗೆ ಅವನ ಪರಿಶ್ರಮವೇ ಕಾರಣ. ನಮ್ಮ ತಂದೆಯ ಆಸೆಯನ್ನು ಪೂರೈಸಿದ್ದಾನೆ. ತುಂಬಾ ಸಂತೋಷವಾಗುತ್ತಿದೆ" ಎಂದು ಒನ್ ಇಂಡಿಯಾ ಕನ್ನಡದ ಜೊತೆಗೆ ಮಾಹಿತಿ ಹಂಚಿಕೊಂಡರು.
ಹೊಸದುರ್ಗ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಹಾಗೂ ಮಾಜಿ ಶಾಸಕ ಬಿಜಿ ಗೋವಿಂದಪ್ಪ ಸೇರಿದಂತೆ ಮತ್ತಿತರರು ಡಾ. ಬೆನಕ ಪ್ರಸಾದ್ ಸಾಧನೆಯನ್ನು ಅಭಿನಂದಿಸಿದ್ದಾರೆ. ಸಂಭ್ರಮವನ್ನು ಮನೆಯವರೊಂದಿಗೆ ಹಂಚಿಕೊಳ್ಳುವುದಕ್ಕಾಗಿ ಬೆನಕ ಪ್ರಸಾದ್ ಅವರು ಬೆಂಗಳೂರಿನಿಂದ ಹೊಸದುರ್ಗಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಸೋಮವಾರ ಬಿಡುಗಡೆಯಾದ ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶದಲ್ಲಿ ಕರ್ನಾಟಕದಿಂದ 27 ಅಭ್ಯರ್ಥಿಗಳು ಭಾರತೀಯ ನಾಗರೀಕ ಸೇವೆಗೆ ಆಯ್ಕೆಯಾಗಿದ್ದಾರೆ. ಶೃತಿ ಶರ್ಮಾ, ಅಂಕಿತಾ ಅಗರ್ವಾಲ್ ಮತ್ತು ಗಾಮಿನಿ ಸಿಂಗ್ಲಾ, ಐಶ್ವರ್ಯ ವರ್ಮಾ ಕ್ರಮವಾಗಿ ಮೊದಲ ನಾಲ್ಕು ರ್ಯಾಂಕ್ ಪಡೆದುಕೊಂಡಿದ್ದಾರೆ. ದಾವಣಗೆರೆಯ ಅವಿನಾಶ್ ತಮ್ಮ ಮೊದಲ ಪ್ರಯತ್ನದಲ್ಲೇ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಪರೀಕ್ಷೇಯಲ್ಲಿ ದೇಶಕ್ಕೆ 31 ಹಾಗೂ ರಾಜ್ಯದಲ್ಲಿ ಮೊದಲ ರ್ಯಾಂಕ್ ಪಡೆದಿದ್ದಾರೆ. ಬೆಂಗಳೂರಿನ ಇಂಡಿಯಾ ಫರ್ ಐಎಎಸ್ ಅಕಾಡೆಮಿಯ 18 ಅಭ್ಯರ್ಥಿಗಳು ಕೇಂದ್ರ ಸೇವೆಗೆ ಆಯ್ಕೆಯಾಗಿದ್ದಾರೆ.












Click it and Unblock the Notifications