ಅಪಘಾತದಲ್ಲಿ ಮೂವರ ದುರ್ಮರಣ: ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
ಚಿತ್ರದುರ್ಗ, ಜೂನ್ 11: ದ್ವಿಚಕ್ರ ವಾಹನವೊಂದಕ್ಕೆ ಮೈನ್ಸ್ ಕಂಪನಿಯ ಲಾರಿ ಡಿಕ್ಕಿ ಹೊಡೆದು ಗರ್ಭಿಣಿ ಸೇರಿದಂತೆ ಮೂವರು ಸಾವನ್ನಪ್ಪಿದ್ದ ಘಟನೆ ಚಿತ್ರದುರ್ಗ ಜಿಲ್ಲೆಯ ಹೀರೆಗೊಂಟನೂರು ಬಳಿ ನಡೆದಿದ್ದು, ಸೂಕ್ತ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮೃತರ ಸಂಬಂಧಿಕರು ಇಂದು ಪ್ರತಿಭಟನೆ ನಡೆಸಿದರು.
ನಿನ್ನೆ ಚಿತ್ರದುರ್ಗದ ಹಿರೇಗುಂಟನೂರು ಗ್ರಾಮದ ಬಳಿ ನಡೆದಿದ್ದ ಅಪಘಾತದಲ್ಲಿ ಒಂದೇ ಕುಟುಂಬದ, ಗರ್ಭಿಣಿ ದೀಪಾ, ಮಹಾತೇಂಶ್ ಹಾಗೂ ಚೇತನ್ ಮೃತಪಟ್ಟಿದ್ದರು. ಮೈನ್ಸ್ ಕಂಪನಿಯಿಂದ ಪರಿಹಾರ ಒದಗಿಸುವಂತೆ ಸಂಬಂಧಿಕರು ಒತ್ತಾಯಿಸಿದ್ದರು. ಆದರೆ, ಕಂಪನಿಯ ಮಾಲೀಕರು ಯಾವುದಕ್ಕೂ ಕಿವಿಗೊಡಲಿಲ್ಲದ ಕಾರಣ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಕರು ಆಗ್ರಹಿಸಿದ್ದಾರೆ. ಹಿರೇಗುಂಟನೂರು ಗ್ರಾಮದ ಬಳಿ ಪದೆಪದೇ ಅಪಘಾತ ಸಂಭವಿಸುತ್ತಿದೆ. ಮೈನ್ಸ್ ಕಂಪನಿಯ ಲಾರಿಗಳಿಂದಲೇ ಅಧಿಕ ಅಪಘಾತಗಳಾಗಿವೆ. ಆದರೂ ಎಚ್ಚೆತ್ತುಕೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾನಿರತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಕಚೇರಿಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆದರೂ ಪಟ್ಟುಬಿಡದ ಪ್ರತಿಭಟನಾಕಾರರು ಸೂಕ್ತ ಪರಿಹಾರ ನೀಡುವಂತೆ ಕಚೇರಿಯ ಮುಖ್ಯ ದ್ವಾರದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಎಸ್ಪಿ ಅರುಣ್ ಮತ್ತು ಗೋವಾ ಅದಿರಿನ ಕಂಪನಿಯವರು ಸೇರಿದಂತೆ ಹಲವರು ಸಂಬಂಧಿಕರೊಂದಿಗೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಭೆ ನಡೆಸಿದ ನಂತರ ಸೂಕ್ತ ಪರಿಹಾರ ನೀಡುವುದಾಗಿ ಮೈನ್ಸ್ ಕಂಪನಿ ಭರವಸೆ ನೀಡಿದೆ.












Click it and Unblock the Notifications