ಚಿತ್ರದುರ್ಗ; ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಜನಸಾಗರ
ಚಿತ್ರದುರ್ಗ, ಅಕ್ಟೋಬರ್ 03; ಚಿತ್ರದುರ್ಗ ಜಿಲ್ಲೆಯ ಹಿಂದೂ ಮಹಾಗಣಪತಿಯನ್ನು ವಿಸರ್ಜನೆ ಮಾಡಲಾಗಿದೆ. ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ 21 ದಿನಗಳ ಕಾಲ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು.
ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಶುರುವಾದ ಗಣಪತಿ ವಿಸರ್ಜನಾ ಮೆರವಣಿಗೆಗೆ ನಿರೀಕ್ಷೆ ಮೀರಿ ಜನರು ಬಂದರು. ಬಿಸಿಲನ್ನು ಲೆಕ್ಕಿಸದೆ ಜನರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಪ್ರತಿಷ್ಠಾಪನ ಸ್ಥಳದಿಂದ ಗಣಪತಿ ಮೆರವಣಿಗೆ ಹೊರಟು ಮದಕರಿನಾಯಕನ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಸಂಗೋಳ್ಳಿ ರಾಯಣ್ಣ ವೃತ್ತ ಹಾಗೂ ಕನಕ ವೃತ್ತದದ ಮೂಲಕ ಸಾಗಿತು.
ಚಿತ್ರದುರ್ಗ ಹಿಂದೂ ಮಹಾ ಗಣಪತಿ ವಿಸರ್ಜನೆ ಶೋಭಯಾತ್ರೆ, ಡಿಜೆ ಬಳಕೆಗೆ ಅವಕಾಶವಿಲ್ಲ: ಜಿಲ್ಲಾಧಿಕಾರಿ
ಲಕ್ಷಾಂತರ ಜನರು ಸಾಗರೋಪಾದಿಯಲ್ಲಿ ಕಿಕ್ಕಿರಿದು ಮೆರವಣಿಗೆಯಲ್ಲಿ ಸೇರಿದ್ದರು. ಪ್ರವಾಸಿ ಮಂದಿರದಿಂದ ಮೆರವಣಿಗೆ ಮುಂದೆ ಬರುತ್ತಿದ್ದಂತೆ ಕಟ್ಟಡಗಳ ಮೇಲಿದ್ದ ಜನರ ಸಂಭ್ರಮ ಮುಗಿಲು ಮುಟ್ಟಿತ್ತು. ಎತ್ತ ತಿರುಗಿದರು ಸಹ ಜನವೋ, ಜನ. ಈ ಬಾರಿ ಡಿಜೆ ಸೌಂಡ್ ಇಲ್ಲದಿದ್ದರೂ ಸಹ ಗಣಪತಿ ಮೆರವಣಿಗೆಗೆ ಇಷ್ಟು ಜನರು ಆಗಮಿಸುತ್ತಾರೆ ಎಂದು ಯಾರು ನಿರೀಕ್ಷಿಸಿರಲಿಲ್ಲ.
ಚಿತ್ರದುರ್ಗ; 20 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪನೆ
ಯುವಕ, ಯುವತಿಯರು, ಮಕ್ಕಳು, ಹಿರಿಯರು ಹೀಗೆ ಎಲ್ಲರೂ ಭವ್ಯ ಮೆರವಣಿಗೆಗೆ ಸಾಕ್ಷಿಯಾದರು. ಕೋವಿಡ್ ಕಾರಣಕ್ಕೆ ನೀರು, ಪ್ರಸಾದ ವಿತರಿಸದ ಕಾರಣ ಬಿಸಿಲಿಗೆ ಬಾಯಾರಿದ ಜನರು ಹೋಟೆಲ್ಗಳನ್ನು ಹುಡುಕುತ್ತಾ ಹೋಗಬೇಕಾಯಿತು. ಮುಖ್ಯ ರಸ್ತೆಯ ಹೋಟೆಲ್ಗಳು ಬಾಗಿಲು ಮುಚ್ಚಿದ್ದವು. ರಸ್ತೆಯುದ್ದಕ್ಕೂ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಅಹಿತಕರ ಘಟನೆ ನಡೆಯದಂತೆ ಮೆರವಣಿಗೆಯಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದ ತಂಡ ಸಹ ಎಲ್ಲಿಯೂ ಸಮಸ್ಯೆ ಆಗದಂತೆ ಎಚ್ಚರವಹಿಸಿತ್ತು.
ಈ ವರ್ಷವೂ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಇಲ್ಲ
ಹಿಂದುತ್ವಕ್ಕಾಗಿ ಎಲ್ಲರೂ ಸೇರೋಣ
ಶೋಭಾಯಾತ್ರೆ ಪ್ರಾರಂಭಕ್ಕೂ ಮೊದಲು ಮಾತನಾಡಿದ ಆರ್ಎಸ್ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಘೋಷ್ ಪ್ರಮುಖ್ ಗಿರೀಶ್, "ನಾವೆಲ್ಲರೂ ಹಿಂದುತ್ವದ ದೃಷ್ಟಿಯಲ್ಲಿ ಸಾಗೋಣ, ಹಿಂದುತ್ವಕ್ಕಾಗಿ ಸೇರೋಣ. ನಾವೆಲ್ಲ ಹಿಂದುತ್ವದ ದೃಷ್ಟಿಯಿಂದ ಕೆಲಸ ಮಾಡಿದಾಗ ಮಾತ್ರ ಲವ್ ಜಿಹಾದ್, ಮತಾಂತರದ ಪಿಡುಗುಗಳನ್ನು ಕಿತ್ತೆಸೆಯಲು ಸಾಧ್ಯ. ಇಂದು ದೇಶವನ್ನು ಈ ಎರಡು ಪಿಡುಗುಗಳು ಕಾಡುತ್ತಿವೆ. ಆದ್ದರಿಂದ ನಾವುಗಳು ಒಗ್ಗಾಟ್ಟಾಗಿ ಕೆಲಸ ಮಾಡಬೇಕು. ಹಿಂದುತ್ವ ಒಂದು ಜಾತಿಯಲ್ಲ, ಮತ ಪಂಥವಲ್ಲ ಅದು ಮನುಷ್ಯನ ಜೀವನಕ್ಕೆ ಪೂರಕವಾದದ್ದು. ಇಲ್ಲಿ ನಾವು ಸೇರಿರುವುದು ಡಿಜೆಗಾಗಿ ಅಲ್ಲ. ಬದಲಾಗಿ ಹಿಂದೂತ್ವಕ್ಕೆ ಬಂದಿದ್ದೇವೆ ಎಂಬುದನ್ನು ತಿಳಿಯಬೇಕು" ಎಂದರು.
ಚಿತ್ರದುರ್ಗ ಶಾಸಕ ಜಿ. ಎಚ್. ತಿಪ್ಪಾರೆಡ್ಡಿ, ಕುಡಾ ಅಧ್ಯಕ್ಷ ಬದ್ರಿನಾಥ್, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ, ಬಸವಪ್ರಭು ಮಡಿವಾಳ ಮಾಚಿದೇವ ಸ್ವಾಮೀಜಿ ಮುಂತಾದವರು ಪಾಲ್ಗೊಂಡಿದ್ದರು.
ಭಾಗವಾಧ್ವಜ 2 ಲಕ್ಷಕ್ಕೆ ಹರಾಜು
ಹಿಂದೂ ಮಹಾಗಣಪತಿಯ ಪೆಂಡಾಲ್ನಲ್ಲಿ ಶನಿವಾರ ನಡೆದ ‘ಭಾಗವಾಧ್ವಜ' ಹರಾಜು ಈ ಭಾರಿ ತೀವ್ರ ಕೂತೂಹಲ ಕೆರಳಿಸಿತ್ತು. ಸಂಪ್ರದಾಯದಂತೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ 21 ದಿನ ಪೂಜೆ ಸಲ್ಲಿಸಿ ವಿಸರ್ಜನೆ ನಡೆಸುವ ಮುನ್ನ ಭಾಗವಾಧ್ವಜ, ರಾಮಮಂದಿರದ ಪ್ರತಿಕೃತಿ ಹಾಗೂ ಹೂವಿನ ಹಾರಗಳನ್ನು ಹರಾಜು ಹಾಕಲಾಗುತ್ತದೆ.
ಈ ವರ್ಷ ‘ಭಾಗವಾಧ್ವಜ'ವನ್ನು ಹರಾಜು ಸ್ಥಳಕ್ಕೆ ಕೊನೆ ಕ್ಷಣದಲ್ಲಿ ಆಗಮಿಸಿದ ಉದ್ಯಮಿ, ಹಿರಿಯೂರು ಜೆಡಿಎಸ್ ಅಭ್ಯರ್ಥಿ ಕೆ. ಸಿ. ವೀರೇಂದ್ರ ಪಪ್ಪಿ 2 ಲಕ್ಷದ 1 ಸಾವಿರಕ್ಕೆ ಪಡೆದರು. ಹರಾಜು ಪ್ರಕ್ರಿಯೆ 50 ಸಾವಿರದಿಂದ ಪ್ರಾರಂಭವಾದ ಕೊನೆಗೆ 2 ಲಕ್ಷಕ್ಕೆ ಬಂದು ನಿಂತಿತು. ಪ್ರಾರಂಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ವಿಪುಲ್ ಜೈನ್ 1 ಲಕ್ಷದವರೆಗೂ ಕೂಗಿದರು. ಆ ಕ್ಷಣಕ್ಕೆ ಆಗಮಿಸಿದ ವೀರೇಂದ್ರ ಪಪ್ಪಿ 1.50 ಲಕ್ಷ ಕೂಗಿದರು. ಬಳಿಕ ವಿಪುಲ್ ಜೈನ್ ಹಾಗೂ ಪಪ್ಪಿ ನಡುವೆ ಸ್ಪರ್ಧೆ ಏರ್ಪಟ್ಟು ಮೂರನೇ ಕೂಗಿಗೆ 2 ಲಕ್ಷ ಹೇಳುವ ಮೂಲಕ ‘ಭಾಗವಾಧ್ವಜ'ವನ್ನು ತಮ್ಮದಾಗಿಸಿಕೊಂಡರು.
ಹರಿದು ಬಂದ ಜನಸಾಗರ
ಹಿಂದೂ ಮಹಾಗಣಪತಿ ಬೃಹತ್ ವಿಸರ್ಜನಾ ಶೋಭಾಯಾತ್ರೆಯನ್ನು ನೋಡುವುದರ ಜೊತೆಗೆ ಕುಣಿದು ಕುಪ್ಪಳಿಸಲು ಯುವಕ ಯುವತಿಯರು ಅಕ್ಕಪಕ್ಕದ ಜಿಲ್ಲೆಗಳಿಂದ ಆಗಮಿಸಿದ್ದರು. ಡಿಜೆ ಸೌಂಡ್ ಇಲ್ಲದಿದ್ದರೂ ಕಲಾತಂಡಗಳ ವಾದ್ಯವೃಂದಕ್ಕೆ ಹೆಜ್ಜೆ ಹಾಕಿದರು.
ಕೋಟೆ ನಾಡಿನ ಹಿಂದೂಮಹಾ ಗಣಪತಿಯ ವಿಸರ್ಜನಾ ಕಾರ್ಯಕ್ರಮಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಭಕ್ತರು ಕೋವಿಡ್ ನಿಯಮ ಉಲ್ಲಂಘಿಸಿ ಗಾಳಿಗೆ ತೂರಿದರು. ಸರ್ಕಾರದ ಕೋವಿಡ್ ನಿಯಮಗಳನ್ನು ಎಲ್ಲಿಯೂ ಸಡಿಸಿಲ್ಲ. ಆದರ ಜೊತೆಗೆ ದಸೆರಾ ಹಬ್ಬದ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ. ಆದರೆ ಕೋಟೆ ನಾಡಿನಲ್ಲಿ ಶನಿವಾರ ಹಿಂದೂಮಹಾ ಗಣಪತಿಯ ವಿಸರ್ಜನೆ ನಡೆಯುತ್ತಿದ್ದು, ಗಣಪತಿಯನ್ನು ನೋಡಲು ಹಾಗೂ ಗಣೇಶನ ಮುಂದೆ ಕುಣಿದು ಕುಪ್ಪಳಿಸಲು ಜಿಲ್ಲೆಯಿಂದ ಬಂದಿರುವ ಭಕ್ತರು ಹಾಗೂ ಸಾರ್ವಜನಿಕರು ಸಾಗರೋಪಾದಿಯಲ್ಲಿ ಸೇರಿದ್ದರು.
ಕೋವಿಡ್ ನಿಯಮ ಪಾಲನೆ ಇಲ್ಲ
ಕಳೆದ ಮೂರು ದಿನಗಳ ಹಿಂದೆ ಚಿತ್ರದುರ್ಗ ಜಿಲ್ಲಾಡಳಿತ ಕೋವಿಡ್ ನಿಯಮ ಪಾಲಿಸಿಕೊಂಡು ಗಣೇಶ ವಿಸರ್ಜನೆ ಮಾಡಬೇಕು. ಎಂದು ಆದೇಶವನ್ನು ನೀಡಿತ್ತು. ಆದರೆ ಗಣೇಶ ಉತ್ಸವ ಸಮಿತಿಯಾಗಲಿ ಭಕ್ತರಾಗಲಿ ಯಾರೂ ಕೋವಿಡ್ ನಿಯಮ ಪಾಲಿಸುತ್ತಿಲ್ಲ. ಗಣೇಶ ವಿಸರ್ಜನೆ ಮೆರವಣಿಗೆ ಹಾದು ಹೋಗುವ ಮಾರ್ಗವನ್ನು ಬ್ಯಾರಿಕೇಡ್ ಗಳಿಂದ ಮುಚ್ಚಿದ್ದರೂ ಭಕ್ತರು ಜಮಾಯಿಸಿದ್ದರು. ಡಿಜೆಯನ್ನು ಜಿಲ್ಲಾಡಳಿತ ಸಂಪೂರ್ಣ ಜಮಾಯಿಸಿದ್ದರೂ ಇನ್ನಿತರ ವಾದ್ಯಗಳ ನಾದಕ್ಕೆ ಭಕ್ತರು ಹಾಗೂ ಯುಕವರು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಕುಣಿದು ಕುಪ್ಪಳಿಸಿದರು. ಕೋವಿಡ್ ನಿಯಮಗಳು ಎಲ್ಲದಕ್ಕೂ ಅನ್ವಯವಾದರೂ ಹಿಂದೂ ಮಹಾ ಗಣಪತಿ ಹಾಗೂ ಅದರ ಸೇವಾ ಸಮಿತಿ ಮತ್ತು ಭಕ್ತರಿಗೆ ಅನ್ವಯಿಸದೆ ಇರುವುದು ಮಾತ್ರ ಯಕ್ಷ ಪ್ರಶ್ನೆಯೇ ಆಗಿದೆ.
Recommended Video