ಚಿತ್ರದುರ್ಗದಲ್ಲಿ ನೋ ಟೆನ್ಷನ್; 144 ಸೆಕ್ಷನ್ ಇದ್ದರೂ ನಡೀತು ಕುರಿ ಸಂತೆ
ಚಿತ್ರದುರ್ಗ, ಮಾರ್ಚ್ 21: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ವೈರಸ್ ನಿಯಂತ್ರಣಕ್ಕೆ ಹಂತ ಹಂತವಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿವೆ. ಚಿತ್ರದುರ್ಗದಲ್ಲೂ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ ಯಾವುದೇ ಸಭೆ, ಸಮಾರಂಭ, ಮದುವೆ, ಸಂತೆಗಳು, ಕ್ರೀಡಾಕೂಟ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಹಾಗೂ ಪ್ರವಾಸಿಗರಿಗೆ ನಿರ್ಬಂಧ ಹೇರಿ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಆದರೆ ಕಾನೂನನ್ನು ಪಾಲಿಸದ ವ್ಯಾಪಾರಸ್ಥರು ಈ ಯಾವ ಆದೇಶವನ್ನೂ ಲೆಕ್ಕಿಸದೇ ಕುರಿ ಮಾರಾಟಕ್ಕೆ ಮುಂದಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪ್ರತಿ ಶನಿವಾರ ಕುರಿ ಸಂತೆ ನಡೆಯುತ್ತದೆ. ಕೊರೊನಾ ಸೋಂಕು ತಡೆಗಟ್ಟಲು ಇಂದು ಸಂತೆಯನ್ನು ನಿರ್ಬಂಧ ಮಾಡಲಾಗಿತ್ತು.
ರೈಲ್ವೆ ನಿಲ್ದಾಣದಲ್ಲಿ ಕಾಟಾಚಾರದ ಕೊರೊನಾ ಸ್ಕ್ಯಾನಿಂಗ್: ಅಧಿಕಾರಿ ಅಮಾನತು
ಯುಗಾದಿ ಹಬ್ಬಕ್ಕೆ ಕುರಿ ಕೊಳ್ಳಲು ಬಂದ ಜನರು
ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ವ್ಯಾಪಾರಸ್ಥರು ಯಾವುದನ್ನೂ ಲೆಕ್ಕಿಸದೆ ಟೆಂಪೋ, ಆಟೋ, ಲಾರಿಗಳಲ್ಲಿ ಕುರಿಗಳನ್ನು ತಂದು ಕುರಿ ಸಂತೆಯಲ್ಲಿ ವ್ಯಾಪಾರ ವಹಿವಾಟು ನಡೆಸಿದ್ದಾರೆ. ರಸ್ತೆಗಳಲ್ಲಿ, ಹೊಲಗಳಲ್ಲಿ, ಅಲ್ಲಲ್ಲಿ ಕುರಿ ಮೇಕೆಗಳ ಮಾರಾಟ ಜೋರಾಗಿ ನಡೆದಿದೆ. ಜನರು ಕೂಡ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಕುರಿ ಕೊಳ್ಳಲು ಬಂದಿದ್ದರು. ನಂತರ ತಾಲೂಕು ಆಡಳಿತದ ಅಧಿಕಾರಿಗಳು ಮಾರಾಟಗಾರರನ್ನು ವಾಪಸ್ ಕಳಿಸಿದರು.
ವಿವಿ ಸಾಗರ ಜಲಾಶಯಕ್ಕೆ ನಿರ್ಬಂಧ
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯು ಹಲವೆಡೆ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ. ಅದರಂತೆ ಚಿತ್ರದುರ್ಗ ಜಿಲ್ಲೆಯ ಏಕೈಕ ಜಲಾಶಯ ವಾಣಿವಿಲಾಸ ಜಲಾಶಯಕ್ಕೂ ಇಂದಿನಿಂದ ಎರಡು ದಿನಗಳ ಕಾಲ ಪ್ರವಾಸಿಗರು ಬರದಂತೆ ನಿರ್ಬಂಧ ಹೇರಲಾಗಿದೆ. ಚಿತ್ರದುರ್ಗ ಜಿಲ್ಲಾಧಿಕಾರಿ ಆದೇಶದಂತೆ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯಕ್ಕೆ ಎರಡು ದಿನಗಳ ಕಾಲ ನಿರ್ಬಂಧ ಹೇರಲಾಗಿದೆ.
ರಾಮನಗರದಲ್ಲಿ ಜನತಾ ಕರ್ಫ್ಯೂಗೆ ಬೆಂಬಲ; ದೇವಾಲಯಗಳೂ ಬಂದ್
ಇನ್ನೂ ಹಲವು ಸ್ಥಳಗಳಿಗೆ ನಿರ್ಬಂಧ
ಚಿತ್ರದುರ್ಗ ಜಿಲ್ಲೆಯಲ್ಲಿ ಕೋಟೆ, ಮುರುಘಾ ಮಠ, ಚಂದ್ರವಳ್ಳಿ, ಆಡುಮಲ್ಲೇಶ್ವರ ಕಿರುಮೃಗಾಲಯ ಸೇರಿದಂತೆ ಮತ್ತಿತರ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಮಹಾಮಾರಿ ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿ ತೀವ್ರ ತಲ್ಲಣ ಸೃಷ್ಟಿಸಿದ್ದು, ಇದನ್ನು ತಡೆಗಟ್ಟುವ ಉದ್ದೇಶದಿಂದ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ನಡೆಯುವ ಸಂತೆಗಳು, ವ್ಯಾಪಾರ ವಹಿವಾಟುಗಳು, ಮದುವೆ, ನಾಮಕರಣ ವಿವಿಧ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಮಾರ್ಚ್ 22, ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9ವರೆಗೆ ಜನತಾ ಕರ್ಫ್ಯೂ ಜಾರಿ ಮಾಡಲಾಗಿದೆ.
ಚಿತ್ರದುರ್ಗದಲ್ಲಿ 62 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ
ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಅನ್ವಯ ಜಿಲ್ಲೆಯಲ್ಲಿ ಸದ್ಯ 62 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಈ ಪೈಕಿ 61 ಜನರನ್ನು ಆಯಾ ವ್ಯಕ್ತಿಗಳ ಮನೆಯಲ್ಲಿಯೇ ಪ್ರತ್ಯೇಕಿಸಿ ನಿಗಾ ವಹಿಸಲಾಗಿದೆ. ಒಬ್ಬರನ್ನು ಆಸ್ಪತ್ರೆಯಲ್ಲಿ ನಿಗಾದಲ್ಲಿ ಇಡಲಾಗಿದೆ. ಜಿಲ್ಲೆಯಲ್ಲಿ ಶಂಕಾಸ್ಪದ ಪ್ರಕರಣವೆಂದು ಪರಿಗಣಿಸಿದ್ದ 18 ಜನರು ಈಗಾಗಲೇ 14 ದಿನಗಳ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದು, ಯಾವುದೇ ರೋಗ ಲಕ್ಷಣ ಕಂಡುಬಂದಿಲ್ಲ. ಇದುವರೆಗೂ 31 ಜನರ ಗಂಟಲು ದ್ರವ ಹಾಗೂ ರಕ್ತ ಮಾದರಿಯನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ 12 ಜನರ ಪರೀಕ್ಷಾ ವರದಿ ನೆಗೆಟಿವ್ ಎಂದು ಬಂದಿದೆ. ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಸೋಂಕು ದೃಢಪಟ್ಟಿರುವ ಯಾವುದೇ ಪ್ರಕರಣ ವರದಿಯಾಗಿಲ್ಲ.