ಮುರುಘಾ ಮಠದ ಹಾಸ್ಟೆಲ್ನಲ್ಲಿದ್ದ 37 ಬಾಲಕಿಯರು ಸರ್ಕಾರಿ ಶಾಲೆಗಳಿಗೆ ಸ್ಥಳಾಂತರ
ಚಿತ್ರದುರ್ಗ, ಸೆಪ್ಟೆಂಬರ್ 5: ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಸ್ವಾಮಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಮಠದ ವಸತಿ ಶಿಕ್ಷಣದ ಭವಿಷ್ಯದ ಮೇಲೆ ಕರಿನೆರಳು ಬಿದ್ದಿದೆ. ಚಿತ್ರದುರ್ಗದ ಮಠದ ಎರಡು ಹಾಸ್ಟೆಲ್ಗಳಲ್ಲಿ ವಾಸವಾಗಿದ್ದ 37 ಬಾಲಕಿಯರನ್ನು ಮನೆ ಸಮೀಪದ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಗಿದೆ.
ಮಠ ನಡೆಸುತ್ತಿರುವ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದ ಇಬ್ಬರು ಬಾಲಕಿಯರ ಮೇಲೆ ಮೂರು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಮಠಾಧೀಶರು ಮತ್ತು ಇತರ ನಾಲ್ವರ ವಿರುದ್ಧ 2012 ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದರ್ಶಿ ಹಾಗೂ ಹಾಸ್ಟೆಲ್ ವಾರ್ಡನ್ ನನ್ನು ಬಂಧಿಸಲಾಗಿದ್ದು, ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಮುರುಘಾ ಮಠದ ಶಿವಮೂರ್ತಿ ಸ್ವಾಮಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುವುದರಿಂದ ಮಠದ ವತಿಯಿಂದ ನಡೆಯುತ್ತಿರುವ ಬಸವ ಮತ್ತು ಅಕ್ಕಮಹಾದೇವಿ ವಸತಿ ನಿಲಯಗಳಲ್ಲಿ ವಾಸವಿದ್ದ 37 ಬಾಲಕಿಯರನ್ನು ಸರ್ಕಾರಿ ವಸತಿ ಶಾಲೆಗಳಿಗೆ ವರ್ಗಾಯಿಸಲಾಗಿದೆ. ಬಾಲಕಿಯರನ್ನು ಆರಂಭದಲ್ಲಿ ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ಥಳಾಂತರಿಸಲಾಗಿತ್ತು.

ಈಗಾಗಲೇ ಹಲವು ತರಗತಿಗಳು ನಷ್ಟ
ಈಗ ಮಕ್ಕಳನ್ನು ಪೋಷಕರ ಮನೆ ಹತ್ತಿರ ಇರುವ ವಸತಿ ಶಾಲೆಗಳಿಗೆ ಸ್ಥಳಾಂತರಿಸಲಾಗಿದೆ. ಮಕ್ಕಳ ವಿದ್ಯಾಭ್ಯಾಸ ಹಾಳಾಗುತ್ತದೆ ಎನ್ನುವ ಆತಂಕದಲ್ಲಿದ್ದ ಪೋಷಕರಿಗೆ ಇದರಿಂದ ಸಮಾಧಾನ ಸಿಕ್ಕಂತಾಗಿದೆ. ಆದರೂ ಹೊಸ ವಾತಾವರಣಕ್ಕೆ ಬಾಲಕಿಯರು ಹೇಗೆ ಹೊಂದಿಕೊಳ್ಳುತ್ತಾರೆ ಎನ್ನುವ ಆತಂಕವಿದೆ.
ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟವಾಗುವುದರಿಂದ ವಿದ್ಯಾರ್ಥಿನಿಯರು ವಿದ್ಯಾಭ್ಯಾಸವನ್ನೇ ನಿಲ್ಲಿಸಬಹುದು ಎನ್ನುವ ಆತಂಕ ಪೋಷಕರನ್ನು ಕಾಡುತ್ತಿದೆ. "ನಮ್ಮ ಮಕ್ಕಳ ಭವಿಷ್ಯದ ಗತಿ ಏನು? ಮಕ್ಕಳಿಗೆ ಈಗಾಗಲೇ ಹಲವು ತರಗತಿಗಳು ನಷ್ಟವಾಗಿದೆ. ಪ್ರಕರಣ ದಾಖಲಾದಾಗಿನಿಂದ ತರಗತಿಗಳು ನಡೆಯುತ್ತಿಲ್ಲ" ಎಂದು ಪೋಷಕರು ದೂರಿದ್ದಾರೆ.

ಹಲವು ಜಿಲ್ಲೆಗಳಿಂದ ಬಂದಿದ್ದ ಬಾಲಕಿಯರು
ಬಾಲಕಿಯರು ಬಳ್ಳಾರಿ, ರಾಯಚೂರು, ಕೊಪ್ಪಳ, ತುಮಕೂರು, ಬೆಂಗಳೂರು, ಬೆಳಗಾವಿ, ಬಾಗಲಕೋಟೆ, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳವರಾಗಿದ್ದು, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನೆಲೆಯಿಂದ ಬಂದವರಾಗಿದ್ದರು.
ಮಠದ ಅಧಿಕಾರಿಗಳು ಒದಗಿಸಿದ ದಾಖಲೆಗಳ ಪ್ರಕಾರ, 37 ಹುಡುಗಿಯರಲ್ಲಿ ಕನಿಷ್ಠ 10 ಮಂದಿ ಅನಾಥರು ಅಥವಾ ಒಬ್ಬರೇ ಪೋಷಕರನ್ನು ಹೊಂದಿದ್ದಾರೆ, ಅವರು ತಮ್ಮ ಮುಲಭೂತ ಅವಶ್ಯಕತೆಗಳನ್ನು ಪೂರೈಸಲು ಸಹ ಹೆಣಗಾಡುತ್ತಾರೆ. ಮಕ್ಕಳು ತಮ್ಮ ಅಧ್ಯಯನಕ್ಕೆ ಮರಳುವುದು ದೊಡ್ಡ ಸವಾಲಾಗಿದೆ.

ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಪೋಷಕರ ಆತಂಕ
ಬಾಗಲಕೋಟೆ ಜಿಲ್ಲೆಯ ನಿವಾಸಿ ಗಂಡನ ಕಳೆದುಕೊಂಡು ಜೀವನ ಸಾಗಿಸಲು ಕಷ್ಟ ಪಡುತ್ತಿರುವ ಯೆಲ್ಲಕ್ಕ ಮಾತನಾಡಿ, "ಕಳೆದ ಎಂಟು ವರ್ಷಗಳಿಂದ ಮಠದಿಂದ ಹಾಸ್ಟೆಲ್ ಸೌಲಭ್ಯದ ಜೊತೆ ತನ್ನ ಮೂವರು ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಯಿತು, ಈಗ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ ನಂತರ ನಮ್ಮ ಮಕ್ಕಳು ಹಾಸ್ಟೆಲ್ನಲ್ಲಿ ಉಳಿಯಲು ಹೆದರುತ್ತಿದ್ದಾರೆ" ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ತಮ್ಮ ಮಕ್ಕಳನ್ನು ಬಾಗಲಕೋಟೆಯ ವಸತಿ ಶಾಲೆಗೆ ಸ್ಥಳಾಂತರಿಸಿದ್ದಕ್ಕಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಬಾಗಲಕೋಟೆ ವಸತಿ ಶಾಲೆಯಲ್ಲಿ ಹೊಸ ರೀತಿಯ ವಾತಾವರಣವಿದೆ, ಕ್ಯಾಂಪಸ್ನೊಳಗೆ ಹಲವು ನಿರ್ಬಂಧಗಳಿವೆ, ಮಕ್ಕಳಿದೆ ಇದು ಜೈಲಿನ ರೀತಿ ಭಾಸವಾಗುತ್ತಿದೆ, ಮಕ್ಕಳು ಮನೆಗೆ ವಾಪಸ್ ಬರುತ್ತೇವೆ ಎನ್ನುತ್ತಿದ್ದಾರೆ" ಎಂದು ಯೆಲ್ಲಕ್ಕ ಹೇಳಿದ್ದಾರೆ.

ಬಾಲಕಿಯರಿಗೆ ಕೌನ್ಸಿಲಿಂಗ್ ಮಾಡಬೇಕಿತ್ತು
ಬಾಲಕಿಯರನ್ನು ಮಠದಿಂದ ವಿವಿಧೆಡೆಗೆ ಸ್ಥಳಾಂತರದ ಬಗ್ಗೆ ಪ್ರತಿಕ್ರಿಯಿಸಿದ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಪರಶುರಾಮ್ ಎಂ.ಎಲ್, ಜಿಲ್ಲಾಡಳಿತ ಬೇಜವಾಬ್ದಾರಿಯಿಂದ ವರ್ತಿಸಿದೆ, ಗಂಭೀರವಾದ ಪ್ರಕರಣದಲ್ಲಿ ಮಕ್ಕಳನ್ನು ಈ ರೀತಿ ಹಠಾತ್ತಾಗಿ ಬೇರೆಡೆ ವರ್ಗಾಯಿಸಿದಾಗ ಅವರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಿದ್ದಾರೆ. ಮುರುಘಾ ಶರಣದ ವಿರುದ್ಧ ಮೈಸೂರಿನಲ್ಲಿ ಪ್ರಕರಣ ದಾಖಲಿಸಲು ಇಬ್ಬರು ಬಾಲಕಿಯರಿಗೆ ಸಹಾಯ ಮಾಡಿದ್ದು ಇದೇ ಒಡನಾಡಿ ಸಂಸ್ಥೆ.
ಬೇರೆ ಕಡೆ ಅವರನ್ನು ವರ್ಗಾಯಿಸುವ ಮೊದಲು ಕೌನ್ಸೆಲಿಂಗ್ ಮಾಡಬೇಕಿತ್ತು, ಅವರ ಮನಸ್ಸಿನಲ್ಲಿ ಇದರ ಗುರುತು ಕೊನೆಯವರೆಗೂ ಉಳಿಯುತ್ತದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications